ಸಾರಾಂಶ
ರಾಜ್ಯ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ ಶೇ.60 ಕಮಿಷನ್ ಸುಲಿಗೆ ಮಾಡುತ್ತಿದೆ ಎಂಬ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಆಧಾರ ಇಲ್ಲದೆ ಆರೋಪ ಮಾಡುವ ಮಾತೆಲ್ಲಿ ಬಂತು ಮುಖ್ಯಮಂತ್ರಿಗಳೇ ಎಂದು ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಗುತ್ತಿಗೆದಾರರಿಂದ ಶೇ.60 ಕಮಿಷನ್ ಸುಲಿಗೆ ಮಾಡುತ್ತಿದೆ ಎಂಬ ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಆಧಾರ ಇಲ್ಲದೆ ಆರೋಪ ಮಾಡುವ ಮಾತೆಲ್ಲಿ ಬಂತು ಮುಖ್ಯಮಂತ್ರಿಗಳೇ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
60 ಪರ್ಸೆಂಟ್ ಕಮಿಷನ್ ಕುರಿತ ಆರೋಪ ಆಧಾರರಹಿತ, ದಾಖಲೆ ಕೊಡಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷದ ಪರವೇ ಇರುವ ಗುತ್ತಿಗೆದಾರರು ಮತ್ತು ತುಮಕೂರಿನ ಕಾಂಗ್ರೆಸ್ ಪಕ್ಷದ ಮುಖಂಡರೇ ಮಾಡಿರುವ ಆರೋಪವಿದು. ನಮ್ಮ ಪಕ್ಷದ ಸರ್ಕಾರಕ್ಕಿಂತ ಹಿಂದಿನ ಬಿಜೆಪಿ ಸರ್ಕಾರವೇ ವಾಸಿ ಇತ್ತು ಎಂಬುದಾಗಿ ಅಲವತ್ತುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿಯೂ ಶೇ. 40ರಷ್ಟು ಕಮಿಷನ್ ಸುಲಿಗೆ ಮಾಡಲಾಗುತ್ತಿದೆ ಎಂಬುದು ನೇರ ಆರೋಪ ಎಂದು ಟಾಂಗ್ ನೀಡಿದ್ದಾರೆ.
ಕಮಿಷನ್ ವ್ಯವಹಾರ ಇಲ್ಲ ಎಂದಾದರೆ ಅವರ ಪಕ್ಷದವರನ್ನೇ ಕರೆದು ಕೇಳಬೇಕಿತ್ತು. ಪ್ರತಿ ಆರೋಪಕ್ಕೂ ದಾಖಲೆ ಕೇಳುವ ಮುಖ್ಯಮಂತ್ರಿಗಳು, ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿ, ಪುಟಗಟ್ಟಲೇ ಜಾಹೀರಾತು ಕೊಟ್ಟಾಗ ಎಷ್ಟು ದಾಖಲೆ ನೀಡಿದ್ದರು? ಅವರ ರಾಜಕೀಯ ಜೀವನದಲ್ಲಿ ಎಂದಾದರೂ ದಾಖಲೆ ಇಟ್ಟು ಆರೋಪ ಮಾಡಿದ್ದರಾ ಎಂದು ಕಿಡಿಕಾರಿದ್ದಾರೆ.