ಜೆಪಿಸಿ ಒಂದು ನಾಟಕ ಕಂಪನಿ, ಅದಕ್ಕೆ ಮಾನ್ಯತೆ ಇಲ್ಲ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್

| Published : Nov 08 2024, 11:46 AM IST / Updated: Nov 08 2024, 11:47 AM IST

Siddaramaiah and DK Shivakumar

ಸಾರಾಂಶ

ವಕ್ಫ್ ವಿವಾದ ಬಿಜೆಪಿ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಹುಬ್ಬಳ್ಳಿ, ವಿಜಯಪುರಕ್ಕೆ ಭೇಟಿ ನೀಡಿರುವ ಜೆಪಿಸಿ ಸಮಿತಿ ಒಂದು ನಾಟಕ ಕಂಪನಿ. ಅದಕ್ಕೆ ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ ಎಂದು  ಡಿಕೆ ಶಿವಕುಮಾರ್ ಕಿಡಿಕಾರಿದರು.

ಹುಬ್ಬಳ್ಳಿ : ವಕ್ಫ್ ವಿವಾದ ಬಿಜೆಪಿ ಸೃಷ್ಟಿ. ನಮ್ಮ ಸರ್ಕಾರ ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ. ಹುಬ್ಬಳ್ಳಿ, ವಿಜಯಪುರಕ್ಕೆ ಭೇಟಿ ನೀಡಿರುವ ಜೆಪಿಸಿ ಸಮಿತಿ ಒಂದು ನಾಟಕ ಕಂಪನಿ. ಅದಕ್ಕೆ ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಿಡಿಕಾರಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜೆಪಿಸಿ ಅಂದರೆ ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ. ಅದಕ್ಕೊಂದು ಲೆಕ್ಕವಿದೆ. ಅವರು ರಾಜ್ಯಕ್ಕೆ ಬರಬೇಕು ಅಂದರೆ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಡೀ ಸಮಿತಿ ತಂಡ ಭೇಟಿ ನೀಡಬೇಕು. ಕೇವಲ ಸಮಿತಿ ಅಧ್ಯಕ್ಷರು ನಮ್ಮಲ್ಲಿ ಬಂದಿದ್ದಾರೆಂದರೆ ಅವರು ಪಕ್ಷದ ಕೆಲಸಕ್ಕಾಗಿ ಬಂದಿದ್ದಾರೆ. ಅವರು ಸಂಸದರಾದ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ವಿ.ಸೋಮಣ್ಣ ಜತೆ ಬಂದಿದ್ದಾರೆ. ಇವರಿಬ್ಬರು ಜೆಪಿಸಿ ಸದಸ್ಯರೇ? ಎಂದು ಪ್ರಶ್ನಿಸಿದರು.

ಇಲ್ಲಿಗೆ ಭೇಟಿ ನೀಡಿದವರು ಕೇವಲ ಬಿಜೆಪಿ ಸದಸ್ಯರು ಮಾತ್ರ, ರಾಜಕೀಯ ಉದ್ದೇಶದಿಂದ ಅವರು ಭೇಟಿ ನೀಡುತ್ತಿದ್ದಾರೆ. ಈ ಸಮಿತಿಗೆ ಅಧಿಕೃತ ಮಾನ್ಯತೆ ಇಲ್ಲ. ಅವರು ಏನಾದರೂ ರಾಜಕೀಯ ಮಾಡಲಿ. ಸತ್ಯಾಂಶವೇ ಬೇರೆ ಎಂದು ತಿಳಿಸಿದರು.

ಬಿಜೆಪಿಯಿಂದಲೇ ನೋಟಿಸ್‌: ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ವಕ್ಫ್‌ ವಿವಾದ ಸೃಷ್ಟಿಸಿದೆ. ರಾಜ್ಯದ ಆಸ್ತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ವಕ್ಫ್ ಆಸ್ತಿ ವಿಚಾರವಾಗಿ ಧಾರವಾಡ ಸೇರಿ ಬೇರೆ ಜಿಲ್ಲೆಗಳಲ್ಲಿ 2019ಕ್ಕೂ ಮೊದಲು ನೋಟಿಸ್ ಕೊಟ್ಟಿದ್ದು ಬಿಜೆಪಿ. ಬೊಮ್ಮಾಯಿ ಅವರ ಸರ್ಕಾರವೇ ನೋಟಿಸ್ ನೀಡಿದೆ. ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಜನ ಶಾಂತಿಯುತವಾಗಿರುವುದು ಬೇಕಾಗಿಲ್ಲ ಎಂದು ಟೀಕಿಸಿದರು.