ಸಾರಾಂಶ
ರೈಲ್ ಭರೋ... ಜೈಲ್ ಭರೋ... -ಕಲಬುರಗಿ ಜನರ ನಿತ್ಯದ ‘ರೈಲು ಗೋಳಾಟ’ ಕೇಳೋರ್ಯಾರು । ಮಾಧ್ಯಮಗಳಿಂದ ದೂರ ಇರಲು ಡಿಕೆಶಿ ಪ್ಲ್ಯಾನ್
ರೈಲ್ ಭರೋ... ಜೈಲ್ ಭರೋ... -ಕಲಬುರಗಿ ಜನರ ನಿತ್ಯದ ‘ರೈಲು ಗೋಳಾಟ’ ಕೇಳೋರ್ಯಾರು । ಮಾಧ್ಯಮಗಳಿಂದ ದೂರ ಇರಲು ಡಿಕೆಶಿ ಪ್ಲ್ಯಾನ್
ನಿತ್ಯ ಬೆಂಗ್ಳೂರಿಗೆ ಹೋಗಲು ಜೈಲ್ ಭರೋ!
ನಿತ್ಯ ಬೆಂಗಳೂರಿಗೆ ತೆರಳಲು ರೈಲ್ ಭರೋನೇ ಮಾಡೋದು, ಇದೀಗ ಜೈಲ್ ಭರೋ ಮಾಡೋಣ ಎಂದು ಹೇಳ್ತಾ ಆಗಿರೋ ಎಡವಟ್ಟು ಸರಿಪಡಿಸಿದಾಗ ಸೇರಿದ್ದವರೆಲ್ಲರು ಕಾಡುತ್ತಿರುವ ರೈಲು ಸವಲತ್ತುಗಳ ಬರಕ್ಕೆ ಈ ಪ್ರಸಂಗ ಹೊಂದಿಕೆಯಾಗಿರೋದನ್ನು ಕಂಡು ನಕ್ಕರೆನ್ನಿ.
ರೈಲ್ವೆ ಮೂಲ ಸವಲತ್ತುಗಳ ಕೊರತೆಗೆ ಕಲಬುರಗಿ ಸೇರಿ ಕಲ್ಯಾಣ ನಾಡಿನ ಜಿಲ್ಲೆಗಳು ಹೆಸರುವಾಸಿ ಎನ್ನಬಹುದು. ರಾಜಧಾನಿ ಬೆಂಗಳೂರಿಗೆ ಹೋಗಲು ಇಂದಿಗೂ ನೇರ ರೈಲು ಸೇವೆ ಇಲ್ಲ. ರೈಲ್ ಭರೋ ಮಾಡಿಕೊಂಡೇ ಬೆಂಗಳೂರು ಸೇರೋ ಅನಿವಾರ್ಯತೆ ಇಲ್ಲಿನವರನ್ನು ಕಾಡುತ್ತಿರೋದಂತು ನಿಜ. ರೇಲ್ವೆ ವಿಭಾಗೀಯ ಕೇಂದ್ರ 2013-14ರಲ್ಲಿ ಮಂಜೂರಾದ್ರೂ ಅದಿನ್ನೂ ಹಂಗೇ ಬೆಚ್ಚಗೆ ಕುಳಿತಿದೆ. ಕಲಬುರಗಿ ಜೊತೆಗೇ ಜಮ್ಮು, ಸಿಲ್ಚಾರ್ನಲ್ಲೂ ಘೋಷಣೆಯಾಗಿದ್ದ ರೇಲ್ವೆ ವಿಭಾಗಗಳು ಅದಾಗಲೇ ಕಾರ್ಯಾರಂಭ ಮಾಡೋ ಹಂತ ತಲುಪಿದ್ರೂ ಕಲಬುರಗಿ ಯೋಜನೆ ಅಂದ್ರೆ ಅದ್ಯಾಕೆ ನಿರ್ಲಕ್ಷ್ಯ ಎಂದು ಇಲ್ಲಿನ ಜನ ಬೇಸರ ಮಾಡಿಕೊಂಡು ಹಂಗೇ ಕೂಡದೆ ಹೋರಾಟಕ್ಕೆ ಮುಂದಾಗಿದ್ದಾರೆ. ಬೆಂಗಳೂರಿಗೆ ಹೋಗಲು ನಿತ್ಯ ರೈಲ್ ಭರೋ ಮಾಡ್ತಿದ್ದವರು, ಇದೀಗ ರೈಲು ಸವಲತ್ತುಗಳಿಗಾಗಿ ಜೈಲ್ ಭರೋ ಮಾಡ್ಲಿಕ್ಕೂ ಸಿದ್ಧರಾಗಿದ್ದಾರೆ.
ಇದನ್ನೆಲ್ಲ ಜನತೆಗೆ ತಿಳಿಸಿ ಹೇಳಲು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೋರಾಟಗಾರ ಅರುಣ ಪಾಟೀಲ್ ಕೊಡ್ಲಹಂಗರಗಾ ರೋಷಾವೇಷದಲ್ಲಿ ನಾವೂ ನಮ್ಮ ಹಕ್ಕಿನ ಹೋರಾಟ ಮಾಡ್ತೀವಿ, ಈ ಭಾಗದಲ್ಲೆಲ್ಲ ರೈಲ್ ಭರೋ ಮಾಡ್ತೀವಿ ಅನ್ನಬೇಕೇ? ಜೈಲ್ ಅನ್ನೋ ಬದಲು ರೈಲ್ ಭರೋ ಎಂದ ಅರುಣ ಮಾತಿಗೆ ಸುದ್ದಿಗಾರರು ನಕ್ಕರೆನ್ನಿ. ನಿತ್ಯ ಬೆಂಗಳೂರಿಗೆ ತೆರಳಲು ರೈಲ್ ಭರೋನೇ ಮಾಡೋದು, ಇದೀಗ ಜೈಲ್ ಭರೋ ಮಾಡೋಣ ಎಂದು ಹೇಳ್ತಾ ಆಗಿರೋ ಎಡವಟ್ಟು ಸರಿಪಡಿಸಿದಾಗ ಸೇರಿದ್ದವರೆಲ್ಲರು ಕಾಡುತ್ತಿರುವ ರೈಲು ಸವಲತ್ತುಗಳ ಬರಕ್ಕೆ ಈ ಪ್ರಸಂಗ ಹೊಂದಿಕೆಯಾಗಿರೋದನ್ನು ಕಂಡು ನಕ್ಕರೆನ್ನಿ.
ಮಾಧ್ಯಮಗಳಿಂದ ರಕ್ಷಣೆಗೆ ಡಿಕೇಶಿ ದೇವರ ಮೊರೆ!
ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮ ಜ.21ರಂದು ಆಯೋಜನೆಯಾಗಿತ್ತು. ಕಾರ್ಯಕ್ರಮಕ್ಕೂ ಎರಡು ದಿನ ಮೊದಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇವರ ಮೊರೆ ಹೋಗಿದ್ರು. ಬೆಳಗಾವಿಯಲ್ಲಿರುವ ದಕ್ಷಿಣ ಕಾಶಿ ಎಂದೇ ಖ್ಯಾತಿಪಡೆದಿರುವ ಕಪಿಲೇಶ್ವರ ದೇಗುಲದಲ್ಲಿ 111 ಲೀಟರ್ ಕ್ಷೀರಾಭಿಷೇಕವನ್ನು 35 ನಿಮಿಷಗಳ ಕಾಲ ಮಾಡಿದ್ದರು. ಇದಾದ ಬಳಿಕ ಮಾಧ್ಯಮಗಳಿಗೆ ಡಿಸಿಎಂ ಡಿಕೆಶಿ ಎದುರಾದರು. ನಂತ್ರ ತಮ್ಮ ಮನದಾಸೆ ಬಿಚ್ಚಿಟ್ಟ ಅವರು, ನಾನು ದಿನಾ ಬೆಳಗಾದರೆ ದೇವರಿಗೆ ಪೂಜೆ ಮಾಡಿಯೇ ಮನೆಯಿಂದ ಹೊರಬರುತ್ತೇನೆ. ನಂತರ ಕೆಲಸದಲ್ಲಿ ನಿರತನಾಗುತ್ತೇನೆ. ಹೀಗಾಗಿ ಇಂದು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದೇನೆ. ನಿಮ್ಮಿಂದ (ಮಾಧ್ಯಮಗಳ) ರಕ್ಷಣೆ ಬೇಕೆಂದು ಭೇಟಿ ನೀಡುತ್ತಿದ್ದೇನೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ದೇವರಿಗೆ ಪೂಜೆ ಸಲ್ಲಿಸಿದ ಅವರಿಗೆ ಅರ್ಚಕರು ಕೂಡ ಸಿಎಂ ಹುದ್ದೆ ಸಿಗಲೆಂದು ಹಾರೈಸಿದರು.
‘ಸಿರಿ’ ಮೇಳದ ‘ಪಿತೃ’ವನ್ನೇ ಮರೆತ ಪುತ್ರ ! ಅರಮನೆ ಮೈದಾನದಲ್ಲಿ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಮೂರು ದಿನಗಳ ಬಹು ನಿರೀಕ್ಷಿತ ‘ಅಂತಾರಾಷ್ಟ್ರೀಯ ವಾಣಿಜ್ಯ ಸಾವಯವ ಮತ್ತು ಸಿರಿಧಾನ್ಯ ಮೇಳ’ಕ್ಕೆ ಶನಿವಾರ ವಿದ್ಯುಕ್ತ ತೆರೆ ಬಿತ್ತು.
‘ಅಂತೂ ಮೇಳ ಯಶಸ್ವಿಯಾಗಿ ಪೂರ್ಣಗೊಂಡಿತು, ನಿರ್ವಿಘ್ನವಾಗಿ ನೆರವೇರಿತಲ್ಲ’ ಎಂಬ ಸಂತೃಪ್ತ ಭಾವನೆ ಅಧಿಕಾರಿಗಳ ಮೊಗದಲ್ಲಿ ಎದ್ದು ಕಾಣುತ್ತಿತ್ತು. ಶನಿವಾರ ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಂತೂ ಅಧಿಕಾರಿಗಳು ಸಂಭ್ರಮ, ಸಡಗರದಿಂದ ಅತ್ತಿಂದಿತ್ತ-ಇತ್ತಿಂದತ್ತ ಓಡಾಡುತ್ತಿದ್ದರು. ಅತಿಥಿಗಳನ್ನು ಸ್ವಾಗತಿಸಲು ವೇದಿಕೆಯೇರಿ ಮೈಕ್ ಮುಂದೆ ನಿಂತುಕೊಂಡ ಇಲಾಖೆಯ ನಿರ್ದೇಶಕ ಜಿ.ಟಿ.ಪುತ್ರ, ಸಚಿವ ಚಲುವರಾಯಸ್ವಾಮಿ, ಶಾಸಕ ಡಾ। ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಂಸದ ನಾರಾಯಣಸ್ವಾಮಿ ಸೇರಿ ಹಲವರನ್ನು ಸ್ವಾಗತಿಸಿದರು. ಮೂರು ದಿನಗಳ ಈ ಮೇಳ ಯಶಸ್ವಿಯಾಗಲು ಕಾರಣಕರ್ತರಾದವರನ್ನೆಲ್ಲ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಆದರೆ ವೇದಿಕೆಯಲ್ಲೇ ಆಸೀನರಾಗಿದ್ದ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್ ಅವರ ಹೆಸರನ್ನೇ ಪುತ್ರ ಪ್ರಸ್ತಾಪಿಸಲಿಲ್ಲ. ಇಲಾಖೆಯ ಆಯಕಟ್ಟಿನ ‘ಪಿತೃ’ ಸ್ಥಾನದಲ್ಲಿರುವ ಪಾಟೀಲ್ ಅವರು ಮೇಳದ ಯಶಸ್ವಿಗೆ ಹಲವು ದಿನಗಳ ಕಾಲ ಶ್ರಮಿಸಿದ್ದರು. ಆದರೆ ಅವರನ್ನೇ ಸ್ವಾಗತಿಸುವುದನ್ನು ಪುತ್ರ ಮರೆತುಬಿಟ್ಟರು. ಇದರಿಂದ ಆಯುಕ್ತರು ಮುಜುಗರ ಅನುಭವಿಸುವಂತಾಯಿತು. ಕೊನೆಗೆ ಇದು ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪುತ್ರ, ‘ಕ್ಷಮಿಸಬೇಕು. ಆಯುಕ್ತರ ಹೆಸರನ್ನೇ ಮರೆತುಬಿಟ್ಟೆ’ ಎಂದು ಹೇಳಿ ಸ್ವಾಗತಿಸಿದಾಗ, ಹಾಜರಿದ್ದ ಅಧಿಕಾರಿಗಳು ಭಾರೀ ಕರತಾಡನದ ಮೂಲಕ ಆಯುಕ್ತರಿಗೆ ಅಭಿನಂದನೆ ಸಲ್ಲಿಸಿದರು. ಆಗ ಪೆಚ್ಚಾಗುವ ಸರದಿ ಪುತ್ರ ಅವರದ್ದಾಗಿತ್ತು. -ಶೇಷಮೂರ್ತಿ ಅವಧಾನಿ
-ಬ್ರಹ್ಮಾನಂದ ಹಡಗಲಿ
-ಸಿದ್ದು ಚಿಕ್ಕಬಳ್ಳೇಕೆರೆ