ಬೆಂಗಳೂರು : ‘ಯುದ್ಧದ ಈ ಕಷ್ಟಕಾಲದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು, ಎಲ್‌ಪಿಜಿ ಗ್ಯಾಸ್‌ ಅನ್ನು ಮಿತಬಳಕೆ ಮಾಡಬೇಕು. ನಗರ ಭಾಗದಲ್ಲಿ ಎಲೆಕ್ಟ್ರಿಕ್‌ ಸ್ಟವ್ ಬಳಸಬೇಕು. ಹಳ್ಳಿ ಭಾಗದಲ್ಲಿ ಸೌದೆ ಒಲೆ ಮೂಲಕ ಅಡುಗೆ ಮಾಡಬೇಕು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಮನವಿ ಮಾಡಿದ್ದಾರೆ.

ಪ್ರತಿ 25 ದಿನಗಳಿಗೆ ಒಮ್ಮೆ ಗೃಹ ಬಳಕೆ ಸಿಲಿಂಡರ್‌ ಬುಕ್‌ ಅವಕಾಶ

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ಸೂಚಿಸಿರುವಂತೆ ನಗರ ಪ್ರದೇಶದಲ್ಲಿ ಪ್ರತಿ 25 ದಿನಗಳಿಗೆ ಒಮ್ಮೆ ಗೃಹ ಬಳಕೆ ಸಿಲಿಂಡರ್‌ ಬುಕ್‌ ಮಾಡಲು ಅವಕಾಶ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ 45 ದಿನಗಳಿಗೆ ಒಮ್ಮೆ ಸಿಲಿಂಡರ್‌ ಬುಕ್‌ ಮಾಡಬೇಕು ಎಂದು ಸೂಚಿಸಿದ್ದೇವೆ. ಪ್ರಸ್ತುತ ಎಲ್‌ಪಿಜಿ ಪೂರೈಕೆ ಸುಧಾರಿಸಿದ್ದು, ಸಮಸ್ಯೆ ಇಲ್ಲದಂತೆ ಸರಬರಾಜು ಮಾಡುತ್ತಿದ್ದೇವೆ ಎಂದರು.

ಗ್ರಾಮೀಣ ಜನ ಸೌದೆ ಬಳಸಿ:

ಗ್ರಾಮೀಣ ಭಾಗದಲ್ಲಿ ಶತಮಾನಗಳಿಂದ ಸೌದೆ ಬಳಸಿ ಅಡುಗೆ ಮಾಡಿರುವುದನ್ನು ನೋಡಿದ್ದೇವೆ. ಅದೇ ರೀತಿ ಈಗ ಸಿಲಿಂಡರ್‌ ಅಭಾವ ಇರುವುದರಿಂದ ಹಳ್ಳಿ ಭಾಗದ ಜನ ಸೌದೆ ಒಲೆಗಳನ್ನು ಬಳಸಿ. ಬೆಂಗಳೂರು ಬಿಟ್ಟು 40 ಕಿ.ಮೀ. ಹೋದರೆ ಸೌದೆ ಸಿಗುತ್ತದೆ. ಅರಣ್ಯ ಪ್ರದೇಶದಲ್ಲೂ ಹಸಿ ಮರ ಬಿಟ್ಟು ಒಣ ಸೌದೆ ಬಳಕೆ ಮಾಡಿ ಅಡುಗೆ ಮಾಡಬಹುದು ಎಂದು ಸಚಿವರು ಸಲಹೆ ನೀಡಿದರು.