ಸಾರಾಂಶ
ಬಟ್ಟೆ ಗಲೀಜು ಆಗುತ್ತದೆ ಎಂದು ಬೆತ್ತಲೆಯಾಗಿ ಮೊಬೈಲ್ ಮಾರಾಟ ಮಳಿಗೆಯ ಹಿಂಬದಿ ಗೋಡೆ ಕೊರೆದು 85 ಮೊಬೈಲ್ ದೋಚಿದ್ದ ಖದೀಮನೊಬ್ಬ ಬೊಮ್ಮನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು : ಬಟ್ಟೆ ಗಲೀಜು ಆಗುತ್ತದೆ ಎಂದು ಬೆತ್ತಲೆಯಾಗಿ ಮೊಬೈಲ್ ಮಾರಾಟ ಮಳಿಗೆಯ ಹಿಂಬದಿ ಗೋಡೆ ಕೊರೆದು 85 ಮೊಬೈಲ್ ದೋಚಿದ್ದ ಖದೀಮನೊಬ್ಬ ಬೊಮ್ಮನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಅರಕೆರೆ ನಿವಾಸಿ ಇಕ್ರಂ ಉಲ್ ಹಸನ್ ಬಂಧಿತನಾಗಿದ್ದು, ಆರೋಪಿಯಿಂದ ಕಳವು ಮಾಡಿದ್ದ ಮೊಬೈಲ್ ಜಪ್ತಿ ಮಾಡಲಾಗಿದೆ. ಮೇ ೯ರ ತಡರಾತ್ರಿ ಹೊಂಗಸಂದ್ರ ಬಳಿಯ ದಿನೇಶ್ ಎಂಬಾತನಿಗೆ ಸೇರಿದ ಹನುಮಾನ್ ಟೆಲಿಕಾಂ ಮೊಬೈಲ್ ಶಾಪ್ನಲ್ಲಿ ಕಳ್ಳತನ ಮಾಡಿದ್ದನು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಆರೋಪಿ ಹಸನ್ ಮೂಲತಃ ಅಸ್ಸಾಂ ರಾಜ್ಯದವನಾಗಿದ್ದು, ಮೂರು ತಿಂಗಳ ಹಿಂದೆ ಕೆಲಸ ಅರಸಿಕೊಂಡು ಬಂದು ಅರಕೆರೆಯಲ್ಲಿ ನೆಲೆಸಿದ್ದನು., ಮೊದಲು ಸೆಂಟ್ರಲ್ ಮಾಲ್ನಲ್ಲಿ ಕೆಲಸ ಮಾಡಿದ್ದ. ಬಳಿಕ ಅಲ್ಲಿ ಕೆಲಸ ತೊರೆದು ಮತ್ತೊಂದು ಮಳಿಗೆಯಲ್ಲಿ ಸ್ವಚ್ಛತಾ ಕೆಲಸಗಾರನಾಗಿ ದುಡಿಯುತ್ತಿದ್ದ. ಸುಲಭವಾಗಿ ಹಣ ಸಂಪಾದನೆಗೆ ಕಳ್ಳತನಕ್ಕಿಳಿದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಮೊಬೈಲ್ ಅಂಗಡಿ ಮಾಲೀಕ ದಿನೇಶ್ ಎಂದಿನಂತೆ ಅಂಗಡಿಗೆ ವಹಿವಾಟು ಮುಗಿಸಿ ಬೀಗ ಹಾಕಿ ಮನೆಗೆ ತೆರಳಿದ್ದರು. ತಡರಾತ್ರಿ ಬಂದ ಹಸನ್, ಹಿಂಬದಿ ಗೋಡೆ ಕೊರೆದು ಬೆತ್ತಲೆಯಾಗಿ ಒಳನುಗ್ಗಿದ್ದ. ಮುಖಚಹರೆ ಕಾಣದಂತೆ ಮಾಸ್ಕ್ ಹಾಕಿದ್ದ ಆತ, ವಿವಿಧ ಕಂಪನಿಗಳ ಲಕ್ಷಾಂತರ ರು ಮೌಲ್ಯದ 87 ಮೊಬೈಲ್ ಗಳು ಕದ್ದು ಪರಾರಿಯಾಗಿದ್ದ. ಮಳಿಗೆ ಮಾಲಿಕನ ದೂರು ಆಧರದ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಕಳ್ಳತನದ ವೇಳೆ ಬಟ್ಟೆ ಗಲೀಜಾಗುತ್ತವೆ ಎಂಬ ಕಾರಣಕ್ಕೆ ವಿವಸ್ತ್ರವಾಗಿದ್ದಾಗಿ ವಿಚಾರಣೆ ವೇಳೆ ಆರೋಪಿ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.