20ಕ್ಕೆ ಮದ್ಯ ಮಾರಾಟ ಬಂದ್‌ -ವೈನ್‌ ಮರ್ಚೆಂಟ್ಸ್‌ ಸಂಘದಿಂದ ‘ಸ್ವಚ್ಛ ಅಬಕಾರಿ’ ಅಭಿಯಾನ

| Published : Nov 15 2024, 12:06 PM IST

Delhi Liquor Dry Days

ಸಾರಾಂಶ

ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ‘ಸ್ವಚ್ಛ ಅಬಕಾರಿ ಅಭಿಯಾನ’ದಡಿ ನ. 20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ‘ಫೆಡರೇಶನ್ ಆಫ್‌ ವೈನ್ ಮರ್ಚಂಟ್ಸ್‌ ಅಸೋಸಿಯೇಶನ್ ಕರ್ನಾಟಕ’ ಕರೆ ನೀಡಿದೆ.

ಬೆಂಗಳೂರು : ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ‘ಸ್ವಚ್ಛ ಅಬಕಾರಿ ಅಭಿಯಾನ’ದಡಿ ನ. 20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ‘ಫೆಡರೇಶನ್ ಆಫ್‌ ವೈನ್ ಮರ್ಚಂಟ್ಸ್‌ ಅಸೋಸಿಯೇಶನ್ ಕರ್ನಾಟಕ’ ಕರೆ ನೀಡಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಸೋಶಿಯೇಶನ್ ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್ ಹೆಗ್ಡೆ, ಅಬಕಾರಿ ಇಲಾಖೆಯನ್ನು ಆರ್ಥಿಕ ಸಚಿವರೇ ನಿರ್ವಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಬೇಕು. ವ್ಯಾಪಾರಿಗಳು ಪರವಾನಗಿ ಪಡೆಯುವಾಗ ಹಾಗೂ ಮರು ನೋಂದಣಿ ಮಾಡಿಕೊಳ್ಳುವಾಗ ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಅಬಕಾರಿ ಕಾಯ್ದೆಯ ಕಲಂ 29 ಪುನರ್ ವಿಮರ್ಶಿಸಿ, ತಿದ್ದುಪಡಿ ಮಾಡಬೇಕು. ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ 20 ರಷ್ಟು ಲಾಭಾಂಶ ನೀಡಬೇಕು. ನಕಲಿ ಮದ್ಯ ತಯಾರಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮದ್ಯದ ಪಾರ್ಸಲ್‌ಗೆ ಸಂಬಂಧಿಸಿದಂತೆ ಕಾನೂನು ತಿದ್ದುಪಡಿ ಮಾಡಿ, ಅವಕಾಶ ಒದಗಿಸಬೇಕು ಎಂದು ಒತ್ತಾಯಿಸಿದರು.

ಬೆಂಬಲ ಇಲ್ಲ: ರಾಜ್ಯ ಮದ್ಯ ಮಾರಾಟಗಾರರ ಸಂಘವು ನ. 20ರಂದು ಕರೆ ನೀಡಿರುವ ಮದ್ಯ ಮಾರಾಟ ಬಂದ್‌ಗೆ ಬೆಂಬಲ ನೀಡುವುದಿಲ್ಲವೆಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ.

ಚುನಾವಣೆಗೆ ಹಣ ನೀಡಿಲ್ಲ

ಭ್ರಷ್ಟಾಚಾರದ ವಿಷಯ ಹೊರಬರುತ್ತಿದ್ದಂತೆ ಈ ವಿಷಯ ರಾಜಕೀಯ ತಿರುವು ಪಡೆದುಕೊಂಡಿದೆ. ₹500 - ₹900 ಕೋಟಿ ಲಂಚದ ಬಗ್ಗೆ ಅಸೋಸಿಯೇಷನ್‌ ಪದಾಧಿಕಾರಿಗಳು ಮಾತನಾಡಿಲ್ಲ. ಈ ಚುನಾವಣೆಗೂ ಯಾವುದೇ ಹಣ ನೀಡಿಲ್ಲ. ನಮ್ಮದು ರಾಜಕೀಯ ರಹಿತ ಸಂಘಟನೆ ಎಂದು ಅವರು ಸ್ಪಷ್ಟಪಡಿಸಿದರು.