‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ

| N/A | Published : Nov 02 2025, 11:25 AM IST

Narayanagowda

ಸಾರಾಂಶ

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯ ಘೋಷಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

 ಬೆಂಗಳೂರು :  ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯ ಘೋಷಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಶನಿವಾರ ಗಾಂಧಿನಗರದ ಕರವೇ ಕೇಂದ್ರ ಕಚೇರಿಯ ಮುಂಭಾಗ ನಾಡ ಧ್ವಜಾರೋಹಣ ನಡೆಸಿ ಮಾತನಾಡಿ ಅವರು, ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬಂದ ಹಿಂದಿ ಸಾಮ್ರಾಜ್ಯಶಾಹಿಗಳು ದರ್ಬಾರು ನಡೆಸುತ್ತಿದ್ದಾರೆ.

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ತಡೆ

 ಗುಜರಾತ್‌ ಮೂಲದ ಕಿರಣ್ ಮಜುಂದಾರ್, ಕೊಂಕಣಿ ಮೂಲದ ಮೋಹನ್ ದಾಸ್ ಪೈ ಎಂಬ ಉದ್ಯಮಿಗಳ ಗೊಡ್ಡು ಬೆದರಿಕೆಗೆ ಹೆದರಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಸೂದೆಯನ್ನು ಜಾರಿ ಮಾಡುವ ಕಾರ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಡೆ ಹಿಡಿದಿರುವುದು ಖೇದಕರ. ಕನ್ನಡಿಗರಿಗೆ ಉದ್ಯೋಗ ಕೊಡುವುದಾದರೆ ಇಲ್ಲಿ ಬದುಕಿ, ಇಲ್ಲದಿದ್ದಲ್ಲಿ ಕರ್ನಾಟಕ ಬಿಟ್ಟು ತೊಲಗಿ ಎಂದು ಇಂತಹ ಕನ್ನಡ ದ್ರೋಹಿಗಳಿಗೆ ಸಿದ್ದರಾಮಯ್ಯ ಹೇಳಬೇಕಿತ್ತು ಎಂದು ಸಲಹೆ ನೀಡಿದರು.

ಸಾವಿರಾರು ಸಂಖ್ಯೆಯಲ್ಲಿ ವಲಸೆ

ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ನಗರಗಳಿಗೆ ಪ್ರತಿದಿನ ಉತ್ತರ ಭಾರತದಿಂದ ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುತ್ತಿದ್ದಾರೆ. ಈ ಆಡಳಿತ ವ್ಯವಸ್ಥೆ ಕರ್ನಾಟಕವನ್ನು ಏನು ಮಾಡಲು ಹೊರಟಿದೆ? ಹೊರಗಿನಿಂದ ಬಂದವರು ಈಗ ಕನ್ನಡಿಗರನ್ನೇ ಅಲ್ಪಸಂಖ್ಯಾತರು ಎಂದು ಹೇಳುತ್ತಿದ್ದಾರೆ. ಇದನ್ನು ನೋಡಿ ಸಹಿಸಿಕೊಂಡು ಇರಬೇಕಾ? ಕನ್ನಡಿಗರ ಇಂದಿನ ಅತಂತ್ರ ಸ್ಥಿತಿಗೆ ನಮ್ಮನ್ನು ಆಳುತ್ತಿರುವ ಜನ ನಾಯಕರೇ ಕಾರಣ, ಅವರಿಗೆ ಕನ್ನಡ ಅಭಿಮಾನವಿಲ್ಲ ಎಂದು ಕಿಡಿಕಾರಿದರು.

Read more Articles on