ಸಾರಾಂಶ
ರಾಜ್ಯದ ಕರಾವಳಿ ಪ್ರದೇಶಕ್ಕೆ ಬರುವ ಕಡಲಾಮೆಗಳ ಜೀವನ ಶೈಲಿ ಅಧ್ಯಯನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಅದಕ್ಕಾಗಿ ಕೆಲ ಕಡಲಾಮೆಗಳಲ್ಲಿ ಮೈಕ್ರೋ ಚಿಪ್ ಅಳವಡಿಕೆ ಹಾಗೂ ಹೊನ್ನಾವರ ಸಮೀಪದ ಹಿರೇಗುತ್ತಿಯಲ್ಲಿ ರಾಜ್ಯಕ್ಕಾಗಮಿಸುವ ಕಡಲಾಮೆಗಳ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಿದೆ.
ಗಿರೀಶ್ ಗರಗ
ಬೆಂಗಳೂರು : ರಾಜ್ಯದ ಕರಾವಳಿ ಪ್ರದೇಶಕ್ಕೆ ಬರುವ ಕಡಲಾಮೆಗಳ ಜೀವನ ಶೈಲಿ ಅಧ್ಯಯನಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಅದಕ್ಕಾಗಿ ಕೆಲ ಕಡಲಾಮೆಗಳಲ್ಲಿ ಮೈಕ್ರೋ ಚಿಪ್ ಅಳವಡಿಕೆ ಹಾಗೂ ಹೊನ್ನಾವರ ಸಮೀಪದ ಹಿರೇಗುತ್ತಿಯಲ್ಲಿ ರಾಜ್ಯಕ್ಕಾಗಮಿಸುವ ಕಡಲಾಮೆಗಳ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಿದೆ.
ಕಡಲಾಮೆಗಳು ವಲಸೆ ಜೀವಿಗಳಾಗಿದ್ದು, ಪ್ರತಿವರ್ಷ ವಿವಿಧ ಸಮುದ್ರ ಭಾಗದಿಂದ ಸಾವಿರಾರು ಕಡಲಾಮೆಗಳು ರಾಜ್ಯದ ಕರಾವಳಿ ಭಾಗಕ್ಕೆ ಬರುತ್ತವೆ. ಹೀಗೆ ಬರುವ ಕಡಲಾಮೆಗಳು ಸಮುದ್ರದಂಚಿನಲ್ಲಿ ಮೊಟ್ಟೆಗಳನ್ನಿಡುತ್ತವೆ. ಅಂತಹ ಮೊಟ್ಟೆಗಳನ್ನು ಕಳ್ಳಸಾಗಣೆದಾರರಿಂದ ರಕ್ಷಿಸಲು ಅವುಗಳನ್ನು ಪತ್ತೆ ಮಾಡಿ, ಸಂರಕ್ಷಿಸುವುದು ಹಾಗೂ ಮರಿಗಳನ್ನಾಗಿ ಮಾಡಿ ವಾಪಾಸು ಕಡಲಿಗೆ ಬಿಡುವುದು ಅರಣ್ಯ ಇಲಾಖೆ ಸೇರಿದಂತೆ ಮತ್ತಿತರ ಇಲಾಖೆಗಳಿಗೆ ಹೆಚ್ಚಿನ ಕೆಲಸ ಹಿಡಿಯಲಿದೆ.
ಅದಕ್ಕಾಗಿ ಕಡಲಾಮೆ ಮತ್ತು ಅವುಗಳ ಮೊಟ್ಟೆ ಸಂರಕ್ಷಿಸುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲು ಕೇಂದ್ರ ಸರ್ಕಾರದ ಇಂಟಿಗ್ರೇಟೆಡ್ ಡೆವೆಲಪ್ಮೆಂಟ್ ವೈಲ್ಡ್ಲೈಫ್ ಹ್ಯಾಬಿಟೇಟ್ (ಐಡಿಡಬ್ಲ್ಯೂಎಚ್) ಸಹಯೋಗದಲ್ಲಿ ಕಡಲಾಮೆಗಳ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ.
ಟೆಂಟ್ಗಳು, ನೆಟ್ಗಳಿಂದ ಕಡಲಾಮೆ ಮೊಟ್ಟೆಗಳ ಸಂರಕ್ಷಣೆ:
ರಾಜ್ಯ ಕರಾವಳಿ ಭಾಗದಲ್ಲಿ ಸಿಗುವ ಕಡಲಾಮೆಗಳು ಮತ್ತು ಅವುಗಳ ಮೊಟ್ಟೆಯನ್ನು ಸಂರಕ್ಷಿಸುವ ಹೊಣೆ ಅರಣ್ಯ ಇಲಾಖೆಯದ್ದಾಗಿದೆ. ಕಡಲಾಮೆಗಳು ಸಾಮಾನ್ಯವಾಗಿ ಸಮುದ್ರ ದಡದಲ್ಲಿ ಮೊಟ್ಟೆಯನ್ನಿಡುತ್ತವೆ. ಅವುಗಳಲ್ಲಿ ಯಾವ ಮೊಟ್ಟೆಗಳಿಗೆ ನೀರು ತಲುಪುತ್ತವೆಯೋ ಅವು ಮರಿಗಳಾಗಲು ಸಾಧ್ಯವಿಲ್ಲ.
ಹೀಗಾಗಿ ಸಮುದ್ರದ ನೀರು ತಲುಪುವ ತೀರದಲ್ಲಿಡುವ ಮೊಟ್ಟೆಗಳನ್ನು ಹುಡುಕುವುದಕ್ಕೆ ಅರಣ್ಯ ಇಲಾಖೆ ಸ್ಥಳೀಯರ ನೆರವು ಪಡೆಯಲಾಗುತ್ತದೆ. ಅಲ್ಲದೆ, ಮೊಟ್ಟೆ ಪತ್ತೆಯಾದ ನಂತರ ಅದನ್ನು ನಾಯಿ ಸೇರಿದಂತೆ ಇನ್ನಿತರ ಪ್ರಾಣಿಗಳಿಂದ ಸಂರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಅವುಗಳ ಸುತ್ತ ಟೆಂಟ್ ನಿರ್ಮಿಸಿ, ನೆಟ್ಗಳನ್ನು ಅಳವಡಿಸಿ ಸಂರಕ್ಷಿಸಿ ಕಾಲಕಾಲಕ್ಕೆ ಪರಿಶೀಲನೆ ನಡೆಸಲಾಗುತ್ತದೆ.
ಕಡಲಾಮೆಗಳ ಮೊಟ್ಟೆಯು 40ರಿಂದ 60 ದಿನಗಳಲ್ಲಿ ಮರಿಯಾಗಲಿದ್ದು, ಅಲ್ಲಿಯವರೆಗೆ ಅವುಗಳ ಮೇಲೆ ನಿಗಾವಹಿಸಿ ಸಂರಕ್ಷಿಸಲಾಗುತ್ತದೆ. ಆದರೆ, ಮೊಟ್ಟೆಗಳನ್ನು ವ್ಯವಸ್ಥಿತವಾಗಿ ಸಂರಕ್ಷಿಸಿ ಮರಿಗಳನ್ನಾಗಿ ಮಾಡಲು ಹೊನ್ನಾವರ ಸಮೀಪದ ಹಿರೇಗುತ್ತಿಯಲ್ಲಿ ಕಡಲಾಮೆ ಸಂರಕ್ಷಣಾ ಕೇಂದ್ರ ಮತ್ತು ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಮೈಕ್ರೋಚಿಪ್ ಅಳವಡಿಕೆ:
ರಾಜ್ಯದ ಕರಾವಳಿ ಭಾಗಕ್ಕೆ ಆಲಿವ್ ರಿಡ್ಲಿ ಸಮುದ್ರ ಆಮೆಗಳು ಹೆಚ್ಚಾಗಿ ಬರಲಿವೆ. ಅವುಗಳ ಚಲನವಲನವನ್ನು ಅಧ್ಯಯನ ಮಾಡುವುದಕ್ಕೂ ಸರ್ಕಾರ ಮುಂದಾಗಿದೆ. ಅದರಂತೆ ಡಿಸೆಂಬರ್ನಿಂದ ಮಾರ್ಚ್ವರೆಗೆ ರಾಜ್ಯಕ್ಕಾಗಮಿಸುವ ಆಮೆಗಳ ಪೈಕಿ ಕೆಲ ಕಡಲಾಮೆಗಳಿಗೆ ಸ್ಯಾಟಲೈಟ್ ಟ್ಯಾಗಿಂಗ್ ಇರುವ ಮೈಕ್ರೋಚಿಪ್ ಅಳವಡಿಸಲಾಗುತ್ತದೆ.
ಅಲ್ಲದೆ ಹೀಗೆ ಮೈಕ್ರೋಚಿಪ್ ಅಳವಡಿಕೆ ಹಾಗೂ ಅದರ ಮಾಹಿತಿ ಸಂಗ್ರಹಿಸಿ ಅಧ್ಯಯನ ನಡೆಸಲು ಭಾರತೀಯ ವನ್ಯಜೀವಿ ಸಂಸ್ಥೆ (ಡಬ್ಲ್ಯೂಐಐ) ರೀತಿಯ ಸಂಸ್ಥೆ ಜತೆಗೆ ರಾಜ್ಯ ಅರಣ್ಯ ಇಲಾಖೆ ಸಹಯೋಗ ಹೊಂದಲಿದೆ. ಮೈಕ್ರೋಚಿಪ್ ಅಳವಡಿಕೆಯಿಂದ ಆ ಆಮೆಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತವೆ, ಯಾವ ಪ್ರದೇಶದಲ್ಲಿ ಎಷ್ಟು ಸಮಯ ಉಳಿದುಕೊಳ್ಳಲಿವೆ, ಅಂತಿಮವಾಗಿ ಯಾವ ಕರಾವಳಿ ಭಾಗಕ್ಕೆ ತೆರಳಲಿವೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ.
ಆ ಮೂಲಕ ರಾಜ್ಯಕ್ಕಾಗಮಿಸುವ ಕಡಲಾಮೆಗಳ ಜೀವನ ಶೈಲಿಯನ್ನು ಪತ್ತೆ ಮಾಡಿ ಮುಂದಿನ ವರ್ಷ ಬರುವ ಕಡಲಾಮೆಗಳ ನಡವಳಿಕೆಯಂತೆ ಅರಣ್ಯ ಇಲಾಖೆ ಕಾರ್ಯಯೋಜನೆ ರೂಪಿಸಲಿದೆ.
ಹೊನ್ನಾವರದಲ್ಲಿಯೇ 26,500 ಮೊಟ್ಟೆಗಳು ಪತ್ತೆ
ಮಂಗಳೂರಿನಿಂದ ಹೊನ್ನಾವರವರೆಗಿನ ಕರಾವಳಿ ಭಾಗದಲ್ಲಿ ಪ್ರತಿವರ್ಷ ಸಾವಿರಾರು ಹೆಚ್ಚಿನ ಕಡಲಾಮೆಗಳ ಮರಿಗಳು ಸಮುದ್ರ ಸೇರುತ್ತವೆ. ಆದರೆ, ಕಳೆದ ವರ್ಷ ಹೊನ್ನಾವರ ಭಾಗದಲ್ಲಿಯೇ 26,500 ಕಡಲಾಮೆ ಮೊಟ್ಟೆಗಳನ್ನು ಪತ್ತೆ ಮಾಡಿ ಸಂರಕ್ಷಿಸಲಾಗಿದೆ. ಅವುಗಳಿಂದ ಹೊರಬಂದ ಮರಿಗಳನ್ನು ನಂತರ ಸಮುದ್ರಕ್ಕೆ ಬಿಡಲಾಗಿದೆ.
ರಾಜ್ಯದ ಕರಾವಳಿ ಪ್ರದೇಶಕ್ಕೆ ಬರುವ ಕಡಲಾಮೆಗಳ ಮತ್ತು ಅವುಗಳ ಮೊಟ್ಟೆ, ಮರಿಗಳನ್ನು ಸಂರಕ್ಷಿಸಲು ಪುನರ್ವಸತಿ-ಸಂರಕ್ಷಣಾ ಕೇಂದ್ರ ನಿರ್ಮಿಸಲು ಯೋಜಿಸಲಾಗಿದೆ. ಅದರ ಜತೆಗೆ ಕಡಲಾಮೆಗಳ ಚಲನವಲನದ ಮೇಲೆ ನಿಗಾವಹಿಸಲು ಸ್ಯಾಟಲೈಟ್ ಟ್ಯಾಗಿಂಗ್ ಇರುವ ಮೈಕ್ರೋಚಿಪ್ ಅಳವಡಿಸಿ ಅಧ್ಯಯನ ನಡೆಸಲಾಗುವುದು.
ಸಿ.ಕೆ. ಯೋಗೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊನ್ನಾವರ ವಿಭಾಗ