ಸಾರಾಂಶ
‘ತನ್ನ ಮಗಳು ಅನನ್ಯಾ ಭಟ್ ಎಂಬಿಬಿಎಸ್ ವ್ಯಾಸಂಗ ಮಾಡುವಾಗ 2003ರಲ್ಲಿ ಧರ್ಮಸ್ಥಳದಲ್ಲಿ ಕೊಲೆಯಾಗಿದೆ ಎಂದು ಆರೋಪಿಸುತ್ತಿರುವ ಸುಜಾತಾ ಭಟ್ಗೆ ಮಕ್ಕಳು ಇಲ್ಲ. . ಆಕೆ ಬಾಯಿ ತೆಗೆದರೇ ಬರೀ ಸುಳ್ಳನ್ನೇ ಹೇಳುತ್ತಾಳೆ’ ಎಂದು ಸುಜಾತಾ ಭಟ್ ಅವರ ಅಕ್ಕನ ಪತಿ ಮಹಾಬಲೇಶ್ವರ್ ಹೇಳಿದ್ದಾರೆ.
ಬೆಂಗಳೂರು : ‘ತನ್ನ ಮಗಳು ಅನನ್ಯಾ ಭಟ್ ಎಂಬಿಬಿಎಸ್ ವ್ಯಾಸಂಗ ಮಾಡುವಾಗ 2003ರಲ್ಲಿ ಧರ್ಮಸ್ಥಳದಲ್ಲಿ ಕೊಲೆಯಾಗಿದೆ ಎಂದು ಆರೋಪಿಸುತ್ತಿರುವ ಸುಜಾತಾ ಭಟ್ಗೆ ಯಾವುದೇ ಮಕ್ಕಳು ಇಲ್ಲ. ಮಗಳ ಕೊಲೆಯಾಗಿದೆ ಎಂಬುದು ಸುಳ್ಳು. ಆಕೆ ಬಾಯಿ ತೆಗೆದರೇ ಬರೀ ಸುಳ್ಳನ್ನೇ ಹೇಳುತ್ತಾಳೆ’ ಎಂದು ಸುಜಾತಾ ಭಟ್ ಅವರ ಅಕ್ಕನ ಪತಿ ಮಹಾಬಲೇಶ್ವರ್ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಗಳೊಂದಿಗೆ ಮಾತನಾಡಿ, ಸುಜಾತಾ ಭಟ್ ನನ್ನ ನಾದಿನಿ. ಆಕೆಯ ತಂದೆ-ತಾಯಿಗೆ ಇಬ್ಬರು ಗಂಡ ಮತ್ತು ಇಬ್ಬರು ಹೆಣ್ಣು ಮಕ್ಕಳು. ಸುಜಾತಾ ಭಟ್ ಕೊನೆಯವಳು. ನಾನು 1988ರಲ್ಲಿ ಸುಜಾತಾ ಭಟ್ಳ ಅಕ್ಕನನ್ನು ಮದುವೆಯಾಗಿದ್ದೇನೆ. ಆಗ ಸುಜಾತಾ ಭಟ್ಗೆ 21 ವರ್ಷ. ನನ್ನ ಮದುವೆ ಸಮಯದಲ್ಲಿ ಆಕೆಗೆ ಹೊಟ್ಟೆ ದಪ್ಪವಾಗಿತ್ತು. ಈ ಬಗ್ಗೆ ಕೇಳಿದ್ದಕ್ಕೆ ಗ್ಯಾಸ್ಟ್ರಿಕ್ ಭಾವ ಎಂದಿದ್ದಳು. ಬಳಿಕ ಆಕೆ ಅನೈತಿಕ ಸಂಬಂಧಕ್ಕೆ ಬಸುರಿಯಾಗಿದ್ದ ವಿಚಾರ ಗೊತ್ತಾಯಿತು. ಬಳಿಕ ಆಕೆ ಗರ್ಭಪಾತ ಮಾಡಿಕೊಂಡು ಸೀತಾ ಬದಿಗೆ ಎಸೆದಿದ್ದಳು. ಬಳಿಕ ಪರಿಚಿತ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದಳು ಎಂದರು.
ಸುಜಾತಾ ಭಟ್ ಚಾರಿತ್ರ್ಯ ಸರಿಯಿಲ್ಲದ ಪರಿಣಾಮ ಕುಟುಂಬ ಆಕೆಯನ್ನು ದೂರ ಇರಿಸಿತ್ತು. ಅನೈತಿಕ ಚಟುವಟಿಕೆ ವಿಚಾರಕ್ಕೆ ಆಕೆಯನ್ನು ರಿಮ್ಯಾಂಡ್ ಹೋಮ್ನಲ್ಲಿ ಇರಿಸಿದ್ದರು. ಬಳಿಕ ಅಲ್ಲಿಂದಲೂ ಆಕೆ ತಪ್ಪಿಸಿಕೊಂಡಿದ್ದಳು. ಉಡುಪಿ, ಮಣಿಪಾಲ್ದಲ್ಲಿ ಸುತ್ತಾಡಿಕೊಂಡು ಅನೈತಿಕ ಚಟುವಟಿಕೆ ನಡೆಸುತ್ತಿದ್ದಳು. ಒಮ್ಮೊಮ್ಮೆ ತಂದೆಯ ಬಳಿ ಬಂದು ಕಣ್ಣೀರಿಟ್ಟು ಊಟಕ್ಕೆ ಹಣ ಪಡೆದು ಹೋಗುತ್ತಿದ್ದಳು. ಬಳಿಕ ನಾನು ಆಕೆಯನ್ನು ನೋಡಿರಲಿಲ್ಲ ಎಂದು ತಿಳಿಸಿದರು.
ಅನೇಕ ವರ್ಷಗಳ ಬಳಿಕ ಧರ್ಮಸ್ಥಳ ವಿಚಾರವಾಗಿ ಟಿ.ವಿ.ಗಳಲ್ಲಿ ಆಕೆಯನ್ನು ನೋಡಿದೆ. ಆಕೆ ಹೇಳುತ್ತಿರುವುದೆಲ್ಲ ಸುಳ್ಳು. ಆಕೆಗೆ ಯಾವ ಮಕ್ಕಳೂ ಇಲ್ಲ. ನಾವಂತು ಒಮ್ಮೆಯೂ ನೋಡಿಲ್ಲ. ಇನ್ನು ಆಕೆ ಎಸ್ಸೆಸ್ಸೆಲ್ಸಿ ಅಷ್ಟೇ ಓದಿದ್ದಾಳೆ. ಆಕೆ ಕೊಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಸ್ಟೇನೋ ಆಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾಳೆ. ಇದು ಶುದ್ಧ ಸುಳ್ಳು. ಎಸ್ಸೆಸ್ಸೆಲ್ಸಿ ಓದಿದವರು ಸ್ಟೇನೋ ಆಗಲು ಸಾಧ್ಯವೇ? ಅದೂ ಕೋಲ್ಕತ್ತದಲ್ಲಿ. ಇದು ಸಾಧ್ಯವೇ ಇಲ್ಲ. ಆಕೆ ಹೇಳುತ್ತಿರುವುದು ಶುದ್ಧ ಸುಳ್ಳು. ಚಿಕ್ಕಂದಿನಿಂದಲೂ ಆಕೆ ಸುಳ್ಳು ಹೇಳಿಕೊಂಡೇ ಬರುತ್ತಿದ್ದಾಳೆ. ಧರ್ಮಸ್ಥಳದ ಬಗ್ಗೆ ಆಕೆ ಹೀಗೆ ಮಾತನಾಡಲು ಯಾರದೋ ಕುಮ್ಮಕ್ಕು ಇರುವ ಸಾಧ್ಯತೆಯಿದೆ. ಆಕೆಯ ಹಿಂದೆ ಯಾರೋ ಇದ್ದಾರೆ. ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದರೆ ನಿಜಾಂಶ ಹೊರಗೆ ಬರುತ್ತದೆ ಎಂದು ಮಹಾಬಲೇಶ್ವರ್ ಹೇಳಿದರು.