ಸಾರಾಂಶ
ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಭಾರಿ ಸೋಲು ಕಂಡಿದೆ. ಆದರೆ ಇದಾದ ಬಳಿಕ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ಲಭಿಸಿದೆ
ನವದೆಹಲಿ : ‘ತಮಿಳಿನಿಂದ ಕನ್ನಡ ಹುಟ್ಟಿದೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರ ಈಗಾಗಲೇ ಬಾಕ್ಸ್ ಆಫೀಸಿನಲ್ಲಿ ಭಾರಿ ಸೋಲು ಕಂಡಿದೆ. ಆದರೆ ಇದಾದ ಬಳಿಕ ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ಲಭಿಸಿದೆ. ಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅವಕಾಶ ಸಿಕ್ಕಿಲ್ಲ ಎಂಬ ಬಗ್ಗೆ ಕಿಡಿಕಾರಿರುವ ಸುಪ್ರೀಂ ಕೋರ್ಟ್, ‘ಚಿತ್ರಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅವಕಾಶ ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಅಲ್ಲದೆ, ‘ಗುಂಪು ಬೆದರಿಕೆಗಳಿಗೆ ಕಾನೂನಿನ ನಿಯಮವನ್ನು ಒತ್ತೆಯಾಗಿ ಇಡಲು ಸಾಧ್ಯವಿಲ್ಲ. ಚಿತ್ರಮಂದಿರಗಳಲ್ಲಿ ಏನು ಪ್ರದರ್ಶಿಸಬೇಕೆಂದು ಉದ್ರಿಕ್ತ ಗುಂಪುಗಳು ನಿರ್ಧರಿಸಲು ಅವಕಾಶ ನೀಡಲಾಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದೆ.
ಕನ್ನಡದ ಬಗ್ಗೆ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಕರ್ನಾಟಕದಾದ್ಯಂತ ಆಕ್ರೋಶ ಭುಗಿಲೆದ್ದ ಬೆನ್ನಲ್ಲೆ, ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ಪ್ರದರ್ಶನಕ್ಕೆ ಚಿತ್ರಪ್ರದರ್ಶಕರು ತಡೆ ವಿಧಿಸಿದ್ದರು. ಇದನ್ನು ಪ್ರಶ್ನಿಸಿ ಎಂ. ಮಹೇಶ್ ರೆಡ್ಡಿ ಎಂಬುವವರು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಉಜ್ವಲ್ ಭುಯಾನ್ ಮತ್ತು ನ್ಯಾ. ಮನಮೋಹನ್ ಅವರಿದ್ದ ಪೀಠ ಕರ್ನಾಟಕದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದೆ.
‘ಸ್ವಯಂಘೋಷಿತ ಕಾರ್ಯಕರ್ತರ ಗುಂಪುಗಳು ಬೀದಿಗಳಲ್ಲಿ ಓಡಾಡಲು ನಾವು ಅವಕಾಶ ನೀಡುವುದಿಲ್ಲ. ಕಾನೂನಿನ ನಿಯಮ ಜಾರಿಯಲ್ಲಿರಬೇಕು. ಯಾರಾದರೂ ಹೇಳಿಕೆ ನೀಡಿದರೆ, ಅದನ್ನು ಹೇಳಿಕೆಯ ಮೂಲಕ ಎದುರಿಸಿ. ಯಾರಾದರೂ ಏನನ್ನಾದರೂ ಬರೆದಿದ್ದರೆ, ನೀವು ಅದನ್ನು ಬರವಣಿಗೆಯ ಮೂಲಕ ಎದುರಿಸಿ. ಚಿತ್ರ ಬಿಡುಗಡೆಯಾದರೆ ಜನರು ಚಿತ್ರವನ್ನು ನೋಡದೇ ಇರಬಹುದು. ಆದರೆ ಚಿತ್ರಮಂದಿರಗಳಿಗೆ ಬೆಂಕಿ ಹಾಕುತ್ತೇವೆ ಎಂದು ಅವರಲ್ಲಿ ಭಯ ಹುಟ್ಟುಹಾಕಲು ಸಾಧ್ಯವಿಲ್ಲ’ ಎಂದು ಹೇಳಿತು.
ಕರ್ನಾಟಕ ಸರ್ಕಾರಕ್ಕೆ ಸೂಚನೆ:
ಚಿತ್ರಕ್ಕೆ ಬೆದರಿಕೆ ಬಂದರೂ ಕರ್ನಾಟಕ ಸರ್ಕಾರ ಅದಕ್ಕೆ ತಡೆ ಒಡ್ಡುತ್ತಿಲ್ಲ ಎಂದು ರೆಡ್ಡಿ ವಕೀಲ ಎ.ವೇಲನ್ ಪೀಠದ ಗಮನಕ್ಕೆ ತಂದರು. ಆಗ ಕರ್ನಾಟಕ ಸರ್ಕಾರಕ್ಕೆ ಕೆಲವು ಸೂಚನೆ ನೀಡಿದ ಪೀಠ, ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಒಬ್ಬರು ವಿಭಿನ್ನ ಅಭಿಪ್ರಾಯ ಹೊಂದಿದ್ದಾರೆ ಎಂದ ಮಾತ್ರಕ್ಕೆ ಆ ಸಿನಿಮಾವನ್ನು ನಿಷೇಧಿಸಬೇಕು ಎಂದರ್ಥವಲ್ಲ. ಕಾನೂನಿನ ಅನ್ವಯ ಸೆನ್ಸಾರ್ ಮಂಡಳಿಯಿಂದ (ಸಿಬಿಎಫ್ಸಿಯಿಂದ) ಅನುಮತಿ ಪಡೆದ ಪ್ರತಿಯೊಂದು ಸಿನಿಮಾವನ್ನು ಎಲ್ಲಾ ರಾಜ್ಯಗಳಲ್ಲೂ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಪ್ರದರ್ಶನಕ್ಕೆ ಅನುವು ಮಾಡಿಕೊಡಬೇಕು. ಚಿತ್ರವನ್ನು ನೋಡಬೇಡಿ ಎಂದು ಪ್ರೇಕ್ಷಕರ ಹಣೆಗೆ ಬಂದೂಕು ಇಡುವುದು ಸಾಧ್ಯವಿಲ್ಲ. ಜನರು ಚಿತ್ರವನ್ನು ನೋಡದೇ ಇರಬಹುದು. ಅದು ಬೇರೆ ವಿಷಯ. ಜನರು ಚಿತ್ರವನ್ನು ನೋಡಲೇಬೇಕು ಎಂದು ನಾವು ಯಾವುದೇ ಆದೇಶವನ್ನು ಹೊರಡಿಸುತ್ತಿಲ್ಲ. ಆದರೆ ಚಿತ್ರವನ್ನು ಬಿಡುಗಡೆ ಮಾಡಬೇಕು. ಚಿತ್ರ ಬಿಡುಗಡೆ ಸಂಬಂಧ 24 ಗಂಟೆಯೊಳಗೆ ವಿವರಣೆ ನೀಡಬೇಕು’ ಎಂದು ಆದೇಶಿಸಿದೆ.
ಹೈಕೋರ್ಟ್ ಕ್ಷಮೆಗೆ ಆದೇಶಿಸುವಂತಿಲ್ಲ:
ಕನ್ನಡದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಕಮಲ್ ಹಾಸನ್ ಕನ್ನಡಿಗರ ಕ್ಷಮೆಯಾಚಿಸಬೇಕು ಎಂಬ ಕರ್ನಾಟಕ ಹೈಕೋರ್ಟ್ ಅಭಿಪ್ರಾಯಕ್ಕೂ ಸುಪ್ರೀಂ ಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
‘ಕ್ಷಮೆಯಾಚಿಸುವಂತೆ ಆದೇಶಿಸುವುದು ಹೈಕೋರ್ಟ್ನ ಕೆಲಸವಲ್ಲ. ಈ ವಿಷಯವು ಕಾನೂನಿನ ನಿಯಮ ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದೆ. ಆದ್ದರಿಂದ, ಈ ನ್ಯಾಯಾಲಯ ಮಧ್ಯಪ್ರವೇಶಿಸುತ್ತಿದೆ. ಸುಪ್ರೀಂ ಕೋರ್ಟ್ ಕಾನೂನಿನ ನಿಯಮ ಮತ್ತು ಮೂಲಭೂತ ಹಕ್ಕುಗಳ ರಕ್ಷಕನಾಗಲು ಉದ್ದೇಶಿಸಿದೆ. ಇದು ಕೇವಲ ಒಂದು ಚಲನಚಿತ್ರಕ್ಕೆ ಸಂಬಂಧಿಸಿದ್ದಲ್ಲ’ ಎಂದು ತಿಳಿಸಿತು. ಅಲ್ಲದೆ, ಹೈಕೋರ್ಟ್ ಮುಂದೆ ಇರುವ ಅರ್ಜಿಯನ್ನು ತನ್ನೆದುರು ವರ್ಗಾಯಿಸಿಕೊಳ್ಳುವ ಸುಳಿವು ನೀಡಿತು. ಹೈಕೋರ್ಟಲ್ಲಿ ಜೂ.20ಕ್ಕೆ ವಿಚಾರಣೆ ನಡೆಯಬೇಕಿದೆ.
ಕಮಲ್ ಹೇಳಿಕೆ ವೇದವಾಕ್ಯವಲ್ಲ:
‘ಈ ವ್ಯವಸ್ಥೆಯಲ್ಲಿ ಏನೋ ತಪ್ಪಿದೆ. ಒಬ್ಬ ವ್ಯಕ್ತಿ ಹೇಳಿಕೆ ನೀಡುತ್ತಾನೆ ಮತ್ತು ಅದನ್ನೇ ವೇದವಾಕ್ಯ ಎಂದು ಪರಿಗಣಿಸಲಾಗುತ್ತದೆ. ಈ ವಿಷಯದ ಬಗ್ಗೆ ಚರ್ಚೆ ನಡೆಯಲಿ. ಜನರು ಕಮಲ್ ಹಾಸನ್ ನೀಡಿದ ಹೇಳಿಕೆ ತಪ್ಪು ಎಂದು ಹೇಳಲಿ. ಬೆಂಗಳೂರಿನ ಎಲ್ಲಾ ಪ್ರಬುದ್ಧ ಜನರು ಅವರ ಹೇಳಿಕೆ ತಪ್ಪು ಎನ್ನಬಹುದು. ಆದರೆ ಬೆದರಿಕೆಗಳನ್ನೇಕೆ ಆಶ್ರಯಿಸಬೇಕು?’ ಎಂದು ಸುಪ್ರೀಂ ಪ್ರಶ್ನಿಸಿದೆ.
ಅಲ್ಲದೆ, ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
‘ಥಗ್ಲೈಫ್’ ಸಿನಿಮಾ ಬಿಡುಗಡೆ ಕುರಿತು ಕೋರ್ಟಿನಲ್ಲಿ ಏನೇ ತೀರ್ಪು ಬಂದರೂ ತಾವು ಮಾತ್ರ ಕರ್ನಾಟಕದಲ್ಲಿ ಈ ಸಿನಿಮಾ ವಿತರಣೆ ಮಾಡುವುದಿಲ್ಲ ಎಂದು ಈ ಸಿನಿಮಾದ ವಿತರಣೆ ಹಕ್ಕು ಪಡೆದ ವಿತರಕರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಕನ್ನಡಪ್ರಭಕ್ಕೆ ಹೇಳಿಕೆ ನೀಡಿದ ವಿತರಕರಾದ ಅರವಿಂದ್, ‘ಕರ್ನಾಟಕದಲ್ಲಿ ಥಗ್ ಲೈಫ್ ಹಂಚಿಕೆ ಮಾಡದೇ ಇರಲು ನಾವು ಈಗಾಗಲೇ ನಿರ್ಧರಿಸಿದ್ದೇವೆ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಆದೇಶ ಗೌರವಿಸುತ್ತೇವೆ, ನಮ್ಮ
ಹೋರಾಟ ನಡೆಸ್ತೇವೆ: ಕರವೇ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ‘ಥಗ್ಲೈಫ್’ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿರುವ ಸುಪ್ರೀಂ ಕೋರ್ಟ್ ಸೂಚನೆ ಗೌರವಿಸುತ್ತೇವೆ. ಆದರೆ, ಈ ನೆಲದ ಹಕ್ಕಿನ ಅನ್ವಯ ಕಮಲ್ ಹಾಸನ್ ವಿರುದ್ಧದ ಹೋರಾಟ ಮುಂದುವರೆಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ. ಚಿತ್ರ ಸಿನಿಮಾ ಬಿಡುಗಡೆಗೆ ಸರ್ಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಗೊತ್ತಿಲ್ಲ. ಆದರೆ ನಾವು ಹೋರಾಟ ಮುಂದುವರೆಸುತ್ತೇವೆ. ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.