ಸಾರಾಂಶ
ರಾಜ್ಯದ ಜನರ ಬೆಚ್ಚಿ ಬೀಳಿಸಿದ್ದ ಬೀದರ್ನಲ್ಲಿ ನಡೆದ ಎಟಿಎಂಗೆ ತುಂಬಲು ತೆಗೆದುಕೊಂಡು ಹೋಗುತ್ತಿದ್ದ ಹಣ ದರೋಡೆ, ಮಂಗಳೂರು ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂಲಿಬೆಲೆಯಲ್ಲಿ ಬಾಲಿವುಡ್ ಸ್ಟೈಲ್ನಲ್ಲಿ ಎಟಿಎಂ ಕಳ್ಳತನ ನಡೆದಿದೆ.
ಸೂಲಿಬೆಲೆ (ಬೆಂ.ಗ್ರಾಮಾಂತರ) : ರಾಜ್ಯದ ಜನರ ಬೆಚ್ಚಿ ಬೀಳಿಸಿದ್ದ ಬೀದರ್ನಲ್ಲಿ ನಡೆದ ಎಟಿಎಂಗೆ ತುಂಬಲು ತೆಗೆದುಕೊಂಡು ಹೋಗುತ್ತಿದ್ದ ಹಣ ದರೋಡೆ, ಮಂಗಳೂರು ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೂಲಿಬೆಲೆಯಲ್ಲಿ ಬಾಲಿವುಡ್ ಸ್ಟೈಲ್ನಲ್ಲಿ ಎಟಿಎಂ ಕಳ್ಳತನ ನಡೆದಿದೆ.
ಕಳ್ಳರು ಪೊಲೀಸರಿಗೆ ಕಳ್ಳತನ ಜಾಡು ಸಿಗದಂತೆ ಚಳ್ಳೆಹಣ್ಣು ತಿನ್ನಿಸುವ ಪ್ಲಾನ್ ಮಾಡಿದ್ದಾರೆ. ಕಳ್ಳತನ ಮಾಡಲು ಬಳಸಿದ ಕಾರು ಯಾವುದೇ ಸಿಸಿ ಟಿವಿಯಲ್ಲಿ ಸೆರೆಯಾದರೂ ಎಲ್ಲಿ ಹೋಯಿತು ಎಂದು ತಿಳಿಯದಂತೆ ಮಾಡಲು ಯೋಜನೆ ರೂಪಿಸಿದ್ದಾರೆ. ನಾಲ್ವರು ಕಳ್ಳರ ಗ್ಯಾಂಗ್ ಎಸ್ಬಿಐ ಎಟಿಎಂ ಕಳ್ಳತನ ಮಾಡಲು ಸಿದ್ಧತೆ ಮಾಡಿಕೊಂಡೆದೆ. ಇದಕ್ಕಾಗಿ ಕಂಟೇನರ್ನಲ್ಲಿ ಕಾರನ್ನು ತಂದಿದ್ದಾರೆ. ಬಳಿಕ ಕಂಟೇನರನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ಅದರಲ್ಲಿದ್ದ ಕಾರನ್ನು ಕೆಳಗಿಳಿಸಿ ಅದೇ ಕಾರಿನಲ್ಲಿ ಸೂಲಿಬೆಲೆ ಎಸ್ಬಿಐ ಎಟಿಎಂಗೆ ತೆರಳಿದ್ದಾರೆ. ಎಟಿಎಂನಲ್ಲಿ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳವು ಮಾಡಿದ್ದಾರೆ. ತಮ್ಮ ಕೈಚಳಕ ಎಟಿಎಂನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗದಿರಲೆಂದು ಕಂಬಳಿ ಹೊದ್ದು ಬಂದಿರುವ ನಾಲ್ವರು ಎಟಿಎಂ ಕೇಂದ್ರದಲ್ಲಿರುವ 4 ಸಿಸಿ ಕ್ಯಾಮರಾಗಳಿಗೆ ಕಪ್ಪು ಬಣ್ಣದ ಸ್ಪ್ರೇ ಹಾಕಿದ್ದಾರೆ. ಬಳಿಕ ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ಕತ್ತರಿಸಿ ಎಟಿಎಂನಲ್ಲಿದ್ದ ಸುಮಾರು ₹30,21,800 ಲಕ್ಷ ಕದ್ದಿದ್ದಾರೆ.
ಕಳ್ಳತನ ಮುಗಿದ ನಂತರ ಪುನಃ ಅದೇ ಕಾರಿನಲ್ಲಿ ಸಂಚರಿಸಿ ನಂತರ ಹೆದ್ದಾರಿಯಲ್ಲಿ ನಿಲ್ಲಿಸಿ ಬಂದಿದ್ದ ಕಂಟೇರ್ಗೆ ಹತ್ತಿಸಿದ್ದಾರೆ. ಅಲ್ಲಿಂದ ಪರಾರಿ ಆಗಿದ್ದಾರೆ. ಎಟಿಎಂ ಕಳ್ಳತನ ಆಗಿದ್ದರ ಬಗ್ಗೆ ಬ್ಯಾಂಕ್ ಸಿಬ್ಬಂದಿ ಕೊಟ್ಟ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರಿಗೆ ತನಿಖೆ ವೇಳೆ ದರೋಡೆ ಗ್ಯಾಂಗ್ನ ಮಾಸ್ಟರ್ ಪ್ಲಾನ್ ಗೊತ್ತಾಗಿ ದಿಗಿಲಾಗಿದ್ದಾರೆ. ಆ ಕಾರು ಈಗ ಎಲ್ಲಿಯೂ ಸಂಚರಿಸುತ್ತಿಲ್ಲ. ಅಲ್ಲದೆ ಸಿಸಿ ಟಿವಿ ಇಲ್ಲದ ಕಡೆ ಕಂಟೇನರ್ ನಿಲ್ಲಿಸಿದ್ದರಿಂದ ಕಂಟೇನರ್ ಯಾವುದು ಎಂದು ಪತ್ತೆ ಮಾಡುವುದು ಕಷ್ಠ. ಹೀಗಾಗಿ ಪ್ರಕರಣ ಭೇದಿಸುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.