ಜಾರಿ ನಿರ್ದೇಶನಾಲಯ (ಇ.ಡಿ)ಗೆ ನನ್ನ ವಿರುದ್ಧ ದೂರು ನೀಡಿದವರು ಯಾರು ಎಂಬುದು ಗೊತ್ತಾಗಿದೆ. ಕಾಂಗ್ರೆಸ್‌ ಸಂಬಂದ ಇರುವ, ಆದರೆ ಬಿಜೆಪಿ ಮತದಾರನಾಗಿರುವ ಈ ವ್ಯಕ್ತಿ ನನ್ನ ಬಗ್ಗೆ ಇ.ಡಿ.ಗೆ ದೂರು ನೀಡಿದ್ದಾರೆ.

ಬೆಂಗಳೂರು : ಜಾರಿ ನಿರ್ದೇಶನಾಲಯ (ಇ.ಡಿ)ಗೆ ನನ್ನ ವಿರುದ್ಧ ದೂರು ನೀಡಿದವರು ಯಾರು ಎಂಬುದು ಗೊತ್ತಾಗಿದೆ. ಕಾಂಗ್ರೆಸ್‌ ಸಂಬಂದ ಇರುವ, ಆದರೆ ಬಿಜೆಪಿ ಮತದಾರನಾಗಿರುವ ಈ ವ್ಯಕ್ತಿ ನನ್ನ ಬಗ್ಗೆ ಇ.ಡಿ.ಗೆ ದೂರು ನೀಡಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಮುಂದಿನದ್ದು ಮುಖ್ಯಮಂತ್ರಿಗಳು ಪರಿಶೀಲಿಸುತ್ತಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಕಿಹೊಳೆ, ಇ.ಡಿಗೆ ದೂರು ನೀಡಿದವರು ಯಾವ ಪಕ್ಷದವರು ಎಂಬ ಪ್ರಶ್ನೆಗೆ ಉತ್ತರಿಸಿದರು.ನಾನು ಯಾವ ಪಕ್ಷದವರು ಎಂದು ಹೇಳಿಲ್ಲ. ಅವರು ನಮ್ಮ ಪಕ್ಷದವರೂ ಇರಬಹುದು ಅಥವಾ ಇಲ್ಲದಿರಬಹುದು. ಅವರ ಸಂಬಂಧ ಇರುವುದು ಕಾಂಗ್ರೆಸ್‌ನಲ್ಲಿ. ಆದರೆ ಅವರ ಮತದಾರರು ಬಿಜೆಪಿಯಲ್ಲಿದ್ದಾರೆ. 50-50 ಇದೆ. ಹೀಗಾಗಿ ಯಾವ ರೀತಿ ನಿರ್ಧಾರ ಮಾಡುವಿರಿ ನೋಡಿ ಎಂದು ಮುಖ್ಯಮಂತ್ರಿ ಅವರಿಗೆ ಹೇಳಿದ್ದೇನೆ. ಇದು ಎಲ್ಲಾ ಪಕ್ಷದಲ್ಲೂ ಇರುವುದೇ. ಅದನ್ನು ಮೀರಿ ಬೆಳೆಯಬೇಕು ಎಂದು ಜಾರಕಿಹೊಳಿ ಹೇಳಿದರು.

ಶೇ.40 ರಷ್ಟು ಪಾಲು ಸಾಬೀತು ಮಾಡಲಿ:

ಆಫ್ರಿಕಾ ಚಿನ್ನದ ಗಣಿಗಾರಿಕೆ ಕಂಪೆನಿಯಲ್ಲಿ ನನ್ನದು ಶೇ.40 ರಷ್ಟು ಪಾಲಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ದಾಖಲೆ ಇದ್ದರೆ ಸಾಬೀತು ಮಾಡಲಿ ಎಂದು ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದರು.

ಇ.ಡಿ ಅವರ ಹೇಳಿಕೆಯಲ್ಲೂ ಗಣಿಗಾರಿಕೆ ಕಂಪೆನಿಯಲ್ಲಿ ನಮ್ಮ ಪಾಲಿದೆ ಎಂದಿದ್ದಾರೆ. ಅದು ಅನುಮಾನದ ಆರೋಪವೇ ಹೊರತು ಅಂತಿಮವಲ್ಲ. ಲಂಚದ ಬಗ್ಗೆಯೂ ಆರೋಪವಿದೆ ಎಂದಿದ್ದಾರೆ. ಅವರ ಬಳಿ ದಾಖಲೆಯಿದ್ದರೆ ಸಾಬೀತು ಮಾಡಲಿ. ನಮಗೆ ನೋಟಿಸ್‌ ನೀಡಿದರೆ ನಾವು ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಇ.ಡಿ ಪತ್ರಿಕಾ ಹೇಳಿಕೆಯಲ್ಲಿ ಹೂಡಿಕೆ, ಲೋಕೋಪಯೋಗಿ ಇಲಾಖೆಯ ಅಂಶಗಳ ಬಗ್ಗೆ ಇದೆ. ನಮಗೆ ನೋಟಿಸ್‌ ನೀಡಿದರೆ ನಮ್ಮ ದಾಖಲೆ ನಾವು ಕೊಡುತ್ತೇವೆ. ಅದಕ್ಕೆ ಇನ್ನೂ ಸಮಯವಿದೆ. ಅದು ದೀರ್ಘ ಪ್ರಕ್ರಿಯೆ ಅವರು ಕರೆದರೆ ಎಲ್ಲದಕ್ಕೂ ನಮ್ಮ ಬಳಿ ಸ್ಪಷ್ಟೀಕರಣವಿದೆ ಎಂದರು.

ಇ.ಡಿ ದಾಳಿ ರಾಜಕೀಯ ಇಮೇಜಿಗೆ ಧಕ್ಕೆ ತರುತ್ತಾ ಎಂಬ ಪ್ರಶ್ನೆಗೆ, ಸಾಧಾರಣವಾಗಿ ಧಕ್ಕೆ ಆಗುತ್ತದೆ. ಶಂಕೆ ಅಂತ ಹೇಳಿದ್ದಾರೆ ನೋಡೋಣ. ನಮಗೆ ಇ.ಡಿಗೂ ಮೊದಲು ಸಾರ್ವಜನಿಕರು ಹಾಗೂ ನ್ಯಾಯಾಲಯ ಮುಖ್ಯ ಎಂದರು.

ನಮ್ಮ ಫ್ಯಾನ್‌ ಕ್ಲಬ್‌ ಸೇರಿದ ಮಲ್ಯಗೆ ಥ್ಯಾಂಕ್ಸ್‌ ಹೇಳುವೆ

ಉದ್ಯಮಿ ವಿಜಯ್ ಮಲ್ಯ ಅವರು ತಮ್ಮನ್ನು ಬೆಂಬಲಿಸಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ‘ಅವರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಅವರು ನಮ್ಮ ಫ್ಯಾನ್‌ ಕ್ಲಬ್‌ ಸೇರಿದಂತೆ ಆಯಿತು’ ಎಂದು ನಗೆ-ಚಟಾಕಿ ಹಾರಿಸಿದರು.