ಏನೇ ಆದ್ರೂ ನಾನು, ಸಿಎಂ ಕಾರಣವೇ- ರಾಜ್ಯದಲ್ಲಿ ಎಲ್ಲಾ ಘಟನೆಗೂ ನಾವೇ ಹೊಣೆಯೇ? : ಡಿಕೆಶಿ ಪ್ರಶ್ನೆ

| Published : Dec 21 2024, 11:28 AM IST

dk shivakumar

ಸಾರಾಂಶ

‘ಈ ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾರಾಮಯ್ಯ ಅವರೇ ಕಾರಣವೇ? ನಾವೇ ಎಲ್ಲದಕ್ಕೂ ಹೊಣೆಯೇ? ನಮ್ಮ ಬಗ್ಗೆ ಮಾತನಾಡುವ ಬದಲು ಮೊದಲು ಈ ನೆಲದ ಹೆಣ್ಣು ಮಕ್ಕಳಿಗೆ ಆಗಿರುವ ಅವಮಾನದ ಬಗ್ಗೆ ಉತ್ತರ ಕೊಡಲಿ’ ಎಂದ ಉಪಮುಖ್ಯಮಂತ್ರಿ 

ಬೆಂಗಳೂರು : ‘ಈ ರಾಜ್ಯದಲ್ಲಿ ಏನೇ ನಡೆದರೂ ಡಿ.ಕೆ. ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾರಾಮಯ್ಯ ಅವರೇ ಕಾರಣವೇ? ನಾವೇ ಎಲ್ಲದಕ್ಕೂ ಹೊಣೆಯೇ? ನಮ್ಮ ಬಗ್ಗೆ ಮಾತನಾಡುವ ಬದಲು ಮೊದಲು ಈ ನೆಲದ ಹೆಣ್ಣು ಮಕ್ಕಳಿಗೆ ಆಗಿರುವ ಅವಮಾನದ ಬಗ್ಗೆ ಉತ್ತರ ಕೊಡಲಿ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿ.ಟಿ.ರವಿ ಬಂಧನಕ್ಕೆ ಡಿ.ಕೆ.ಶಿವಕುಮಾರ್‌ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಪೊಲೀಸರ ಮೇಲೆ ಬೀರಿದ ಪ್ರಭಾವ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದರು.

‘ಕಾನೂನು ಉಂಟು, ಪೊಲೀಸರು ಉಂಟು. ಪೊಲೀಸರು ಯಾವ ಸೆಕ್ಷನ್‌ ಸೂಕ್ತವೋ ಅದನ್ನೇ ಹಾಕಿದ್ದಾರೆ. ಅವರು ಯಾವ ಸೆಕ್ಷನ್‌ ಹಾಕಿದ್ದಾರೆ ಎಂಬುದು ಗೊತ್ತಿಲ್ಲ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ಅವರು ಉಂಟು ಪೊಲೀಸರು ಉಂಟು ಅಷ್ಟೇ’ ಎಂದು ಹೇಳಿದರು.

ಜಾಮೀನು ಸಿಕ್ಕಿರುವುದು ಸರ್ಕಾರಕ್ಕೆ ಕಪಾಳ ಮೋಕ್ಷ ಎಂದಿರುವ ಸಿ.ಟಿ.ರವಿ ಹೇಳಿಕೆಗೆ, ‘ಅಯ್ಯಯ್ಯೋ ಮೊದಲು ತಾಯಿಗೆ, ಹೆಣ್ಣು ಕುಲಕ್ಕೆ, ನಮ್ಮ ಸಂಸ್ಕೃತಿಗೆ ಆಗಿರುವ ಅವಮಾನದ ಬಗ್ಗೆ ಉತ್ತರ ಕೊಡಲಿ’ ಎಂದು ತಿರುಗೇಟು ನೀಡಿದರು.