ಸಾರಾಂಶ
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಜೂ.೨೨ ರಂದು ಬೆಳಗ್ಗೆ ೧೦ ಗಂಟೆಗೆ ೨೦೨೪ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಆಲೆಮನೆ ಕೃತಿ ಬಿಡುಗಡೆ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ ಜೂ.೨೨ ರಂದು ಬೆಳಗ್ಗೆ ೧೦ ಗಂಟೆಗೆ ೨೦೨೪ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಆಲೆಮನೆ ಕೃತಿ ಬಿಡುಗಡೆ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಎಚ್.ಆರ್.ಸುಜಾತಾ ಹೇಳಿದರು.ಲೇಖಕ ಅನಿಲ್ ಗುನ್ನಾಪೂರ ಅವರ ಸರ್ವೆ ನಂಬರ್-೯೭ ಕೃತಿಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಹಿರಿಯ ಸಂಶೋಧಕ ನಾಡೋಜ ಡಾ.ಹಂ.ಪ.ನಾಗರಾಜಯ್ಯ ಅವರು ಡಾ.ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿ ಪ್ರದಾನ ಮಾಡುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ತ್ರೀವಾದಿ ಚಿಂತಕಿ ಡಾ.ಎಚ್.ಎಸ್.ಶ್ರೀಮತಿ, ಪ್ರತಿಷ್ಠಾನದ ಆಜೀವ ಪೋಷಕಿ ಡಿ.ಪಿ.ರಾಜಮ್ಮ ರಾಮಣ್ಣ ಅವರು ಭಾಗವಹಿಸುವರು. ಪ್ರಶಸ್ತಿಯು ೨೫ ಸಾವಿರ, ಪ್ರಶಸ್ತಿ ಫಲಕ ಮತ್ತು ಪತ್ರವನ್ನು ಒಳಗೊಂಡಿದೆ, ಮುಂದಿನ ದಿನಗಳಲ್ಲಿ ಪ್ರಶಸ್ತಿಯ ಮೊತ್ತವನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕನ್ನಡ ಕಥಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಅಪರೂಪದ ಕತೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಅವರು ಗ್ರಾಮೀಣ ಬದುಕಿನ ಸಂಕೀರ್ಣತೆಯನ್ನು ಮನಮುಟ್ಟುವಂತೆ ಕಥನದ ಮೂಲಕ ಕಟ್ಟಿದವರು. ಮಾನವೀಯ ಮೌಲ್ಯಗಳನ್ನು ಶೋಧಿಸಿದವರು. ಕನ್ನಡ ಕಥಾ ಕ್ಷೇತ್ರಕ್ಕೆ ನೀಡಿದ ಇವರ ಕೊಡುಗೆಯನ್ನು ಅಮರಗೊಳಿಸಲು ೨೦೦೩ ರಿಂದ ಅವರ ಹೆಸರಿನಲ್ಲಿ ಆಯಾ ವರ್ಷ ಪ್ರಕಟವಾದ ಅತ್ಯುತ್ತಮ ಕಥಾ ಸಂಕಲನಕ್ಕೆ ಪ್ರಶಸ್ತಿ ನೀಡಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಬಾಗವಹಿಸುವಂತೆ ಮನವಿ ಮಾಡಿದರು.
ಉಪಾಧ್ಯಕ್ಷ ಸುದರ್ಶನ್, ಕಾರ್ಯದರ್ಶಿ ರಾಜೇಂದ್ರ ಪ್ರಸಾದ್, ಲೋಕಾನಂದ, ಎಸ್.ರಾಕೇಶ್ ಇದ್ದರು.