ಬೆಸ್ಕಾಂ ಹಗರಣ ಎಫೆಕ್ಟ್‌: ವರ್ಗಾವಣೆಗೆ ತುದಿಗಾಲಲ್ಲಿ ಅಧಿಕಾರಿಗಳು!

| Published : Nov 14 2025, 02:00 AM IST

ಬೆಸ್ಕಾಂ ಹಗರಣ ಎಫೆಕ್ಟ್‌: ವರ್ಗಾವಣೆಗೆ ತುದಿಗಾಲಲ್ಲಿ ಅಧಿಕಾರಿಗಳು!
Share this Article
  • FB
  • TW
  • Linkdin
  • Email

ಸಾರಾಂಶ

ರು. ೩.೮೫ ಕೋಟಿ ಹಗರಣ ನಡೆದಿರುವ ನಗರದ ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಆರಂಭವಾಗಿದೆ. ರಾಜಕಾರಣಿಗಳ ಹಾಗೂ ಹಿರಿಯ ಅಧಿಕಾರಿಗಳಿಗೆ ದುಂಬಾಲು ಬಿದ್ದು ಬೇರೆ ಸ್ಥಳಕ್ಕೆ ಹೋಗುವ ಆದೇಶ ಪಡೆಯುವ ಧಾವಂತ ಎದ್ದುಕಾಣುತ್ತಿದೆ.

ಕನ್ನಡಪ್ರಭ ವಾರ್ತೆ ಹರಿಹರ

₹೩.೮೫ ಕೋಟಿ ಹಗರಣ ನಡೆದಿರುವ ನಗರದ ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಆರಂಭವಾಗಿದೆ. ರಾಜಕಾರಣಿಗಳ ಹಾಗೂ ಹಿರಿಯ ಅಧಿಕಾರಿಗಳಿಗೆ ದುಂಬಾಲು ಬಿದ್ದು ಬೇರೆ ಸ್ಥಳಕ್ಕೆ ಹೋಗುವ ಆದೇಶ ಪಡೆಯುವ ಧಾವಂತ ಎದ್ದುಕಾಣುತ್ತಿದೆ.

ಬೆಸ್ಕಾಂ ವಿಭಾಗೀಯ ಉಗ್ರಾಣದಲ್ಲಿ ಕೋಟ್ಯಂತರ ಮೌಲ್ಯದ ಸಾಮಗ್ರಿಗಳ ದುರುಪಯೋಗ ಹಗರಣದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಸೆ.೨೯ರಂದು ಸ್ವತ್ತಿನ ದುರುಪಯೋಗ, ಮೋಸ, ವಂಚನೆ ಮುಂತಾದ ಆರೋಪಗಳಡಿ ದೂರು ದಾಖಲಿಸಲಾಗಿತ್ತು. ಬೆಸ್ಕಾಂ ಆಂತರಿಕ ಪರಿಶೋಧನಾ ವಿಭಾಗದಿಂದ ಉಗ್ರಾಣದ ವಿದ್ಯುತ್ ಉಪಕರಣಗಳ ಎಣಿಕೆ ಕಾರ್ಯ ಆರಂಭವಾದಾಗಲೇ ಎಫ್‌ಐಆರ್ ದಾಖಲಾಗುವ ಮುಂಚೆಯೇ, ಉಗ್ರಾಣದ ಅಧಿಕಾರಿಯಾಗಿದ್ದ ರವೀಂದ್ರ ಪವಾರ್ ಗುತ್ತೂರು ಕೆಪಿಟಿಸಿಎಲ್ ೪೦೦ ಕೆ.ವಿ. ಸ್ವೀಕರಣಾ ಕೇಂದ್ರಕ್ಕೆ ವರ್ಗಾವಣೆ ಮಾಡಿಸಿಕೊಂಡು ಜಾಗ ಖಾಲಿ ಮಾಡಿದರು. ಇವರು ಇಲ್ಲಿ ೩ ವರ್ಷ ಸೇವೆ ಸಲ್ಲಿಸಿದ್ದರು.

ಅನಂತರ, ಸಹಾಯಕ ಲೆಕ್ಕಾಧಿಕಾರಿಯಾಗಿದ್ದ ಎಂ.ಡಿ. ಮಾಳಾಪುರ್ ದಾವಣಗೆರೆ ಬೆಸ್ಕಾಂ ವಿಭಾಗೀಯ ಕಚೇರಿಯ ಆಂತರಿಕ ಪರಿಶೋಧನಾ ವಿಭಾಗಕ್ಕೆ ಲೆಕ್ಕಾಧಿಕಾರಿ ಹುದ್ದೆಗೆ ನಿಯೋಜನೆ ಮೇಲೆ ಅ.೧೬ ಹೋಗಿದ್ದಾರೆ. ಅನಂತರದಲ್ಲಿ ಪೊಲೀಸರಿಗೆ ದೂರು ನೀಡಿದ ಸ್ವಯಂ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕಿರಣ್ ಚಿಕ್ಕಮಗಳೂರು ಜಿಲ್ಲೆ ಕಡೂರು ವಿಭಾಗೀಯ ಕಚೇರಿಗೆ ಅ.೨೮ಕ್ಕೆ ವರ್ಗಾವಣೆ ಆಗಿದ್ದಾರೆ.

ಈ ಮುಂಚೆ ಅವಧಿ ಮೀರಿದರೂ ಇಲ್ಲಿಯೇ ಸೇವೆ ಮುಂದುವರಿಸಲು ಹತ್ತಾರು ಬಾರಿ ಬೆಂಗಳೂರಿಗೆ ಪ್ರಯಾಣ ಮಾಡಿ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಸಂತುಷ್ಟಗೊಳಿಸಿ, ಮನವೊಲಿಸಿ ಮರಳುತ್ತಿದ್ದ ಅಧಿಕಾರಿಗಳು ಈ ಹಗರಣ ಬೆಳಕಿಗೆ ಬಂದ ನಂತರ, ಬೇರೆಡೆಗೆ ವರ್ಗಾವಣೆ ಅಥವಾ ನಿಯೋಜನೆ ಮಾಡಿಸಿಕೊಳ್ಳಲು ಅಧಿಕಾರಸ್ಥರ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

ಬೆಸ್ಕಾಂ ಇಇ, ಎಇಇ, ಎಎಒ ಈಗಾಗಲೇ ಇಲ್ಲಿಯ ಸೇವೆಯ ಭಾರದಿಂದ ತಪ್ಪಿಸಿಕೊಂಡಿದ್ದರೆ, ಉಳಿದ ಹಲವರು ಕೂಡ ವರ್ಗಾವಣೆ, ನಿಯೋಜನೆಗಾಗಿ ಬೆಂಗಳೂರಿಗೆ ಹೋಗಿ ಬರುವ ಪ್ರಹಸನ ಆರಂಭಿಸಿದ್ದಾರೆ ಎಂಬುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

- - -

(ಕೋಟ್ಸ್‌)

-12 ZHRR03:

ಕೋಟ್ಪ 01ಹಗರಣದ ತನಿಖೆ ಪೂರ್ಣಗೊಳ್ಳುವವರೆಗೆ ಈ ಕಚೇರಿ ಯಾವ ಸಿಬ್ಬಂದಿಗೂ ವರ್ಗಾವಣೆ, ನಿಯೋಜನೆ ಮಾಡಬಾರದು, ಬೇರೆಡೆಗೆ ಹೋದವರನ್ನು ಮತ್ತೆ ವಾಪಸ್ ಕರೆಯಿಸಿಕೊಳ್ಳಬೇಕೆಂದು ಆಗ್ರಹಿಸಿ ಇಂಧನ ಸಚಿವರಿಗೆ ಪತ್ರ ಬರೆಯಲಾಗುವುದು. ಬೆಸ್ಕಾಂ ಭ್ರಷ್ಟಾಚಾರ ಮುಕ್ತವಾದರೆ ಗ್ರಾಹಕರಿಗೆ ಈಗಿನ ದರಕ್ಕಿಂತ ಅರ್ಧ ದರದಲ್ಲಿ ವಿದ್ಯುತ್ ಸರಬರಾಜು ಮಾಡಬಹುದು.

- ನಾಗರಾಜ್ ಭಂಡಾರಿ, ರಾಜ್ಯ ಉಪಾಧ್ಯಕ್ಷ, ವಿಶ್ವ ಕರವೇ.

- - - ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಬೆಸ್ಕಾಂಗೆ ಪತ್ರ ಬರೆದಿದ್ದು, ಆ ದಾಖಲೆಗಳು ಸಿಕ್ಕ ನಂತರ ಆರೋಪ ಪಟ್ಟಿ ಸಲ್ಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ.

- ಪೊಲೀಸ್ ಅಧಿಕಾರಿ, ಹರಿಹರ.

- - -

(12 HRR. 02) ಹರಿಹರ: ಹರಿಹರದ ಬೆಸ್ಕಾಂ ವಿಭಾಗೀಯ ಕಚೇರಿ.