ಸಾರಾಂಶ
ಸಿದ್ದಾಪುರ: ಶಿಕ್ಷಕ ಅಥವಾ ಶಿಕ್ಷಕಿ ಓರ್ವ ವ್ಯಕ್ತಿಯಾಗಿ ವ್ಯವಸ್ಥೆಗಿಂತ ಮುಂದೆ ಹೋಗಿ ಹೃದಯವಂತ ಶಿಕ್ಷಕರಾದಾಗ ಸಮಾಜ ಉತ್ತಮವಾಗುತ್ತದೆ ಎಂದು ವಿದ್ಯಾಪೋಷಕ ಸಂಸ್ಥೆಯ ಅಧ್ಯಕ್ಷ ಆರ್.ಎನ್. ತಿಕೋಟಾ ಅಭಿಪ್ರಾಯಪಟ್ಟರು.
ಸ್ಥಳೀಯ ಶಂಕರಮಠದ ಸಭಾಂಗಣದಲ್ಲಿ ಶ್ರೀ ಶೃಂಗೇರಿ ಶಂಕರಮಠ ಮತ್ತು ಧಾರವಾಡದ ವಿದ್ಯಾಪೋಷಕದ ಸಹಯೋಗ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಕಾರದಲ್ಲಿ, ಸುವರ್ಣಭಾರತಿ ಮಹೋತ್ಸವದ ಅಂಗವಾಗಿ ಜರುಗಿದ ಬೋಧಕ- ಬೋಧಿನಿ ಎನ್ನುವ ತಾಲೂಕಿನ ಪ್ರಾಥಮಿಕ ಶಾಲೆಗಳ ಎಲ್ಲ ಶಿಕ್ಷಕರ ಎರಡು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸಮಾಜ ವ್ಯವಸ್ಥೆ ಹೇಗೆ ಇದ್ದರೂ ಅದನ್ನು ಮೀರಿ ಮುಂದಿನ ಸಮಾಜಕ್ಕೆ ಉತ್ತಮ ಮತ್ತು ಅಗತ್ಯವಾದ ಶಿಕ್ಷಣ ನೀಡುವುದು ಶಿಕ್ಷಕ ವೃಂದದ ಗುರಿಯಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ ಮಾತನಾಡಿ, ಪ್ರತಿ ವ್ಯಕ್ತಿಯೂ ಸಮಾಜಮುಖಿಯಾದ ತನ್ನ ಅನಿಸಿಕೆಗಳನ್ನು ಬಹುಮುಖ್ಯವಾದ ಕೊಡುಗೆಯಾಗಿ ನೀಡುವುದು ಅತ್ಯಂತ ಮುಖ್ಯವಾದದ್ದು. ಆ ನಿಟ್ಟಿನಲ್ಲಿ ವಿದ್ಯಾಪೋಷಕ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿದ್ದು, ಬೇರೆಡೆಯಿಂದ ದೊರಕುವ ಅಮೂಲ್ಯ ಜ್ಞಾನವನ್ನು ಪಡೆದುಕೊಂಡು, ಮುಂದಿನ ಪೀಳಿಗೆಗೆ ನೀಡುವಲ್ಲಿ ಕ್ರಿಯಾಶೀಲರಾಗಬೇಕು ಎಂದರು.ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ತಮ್ಮಣ್ಣ ಬೀಗಾರ ಮಾತನಾಡಿ, ಸಮಾಜದ ಜವಾಬ್ದಾರಿಯುತ ವ್ಯಕ್ತಿತ್ವಗಳ ನಿರ್ಮಾಣವೇ ಶಿಕ್ಷಕರ ಗುರಿ. ಯಾವುದೇ ಪೂರ್ವಾಗ್ರಹವಿಲ್ಲದೇ ಎಲ್ಲರನ್ನೂ ಪ್ರೀತಿಸುವ, ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಂವಹನ, ಅಧ್ಯಯನ ಶಿಕ್ಷಕರಿಗೆ ಅಗತ್ಯ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರಾದ ನಾವು ಕಾರಣರಾಗೋಣ. ಈ ಕಾರ್ಯಕ್ರಮದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳೋಣ ಎಂದರು.ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾಪೋಷಕದ ವಿದ್ಯಾರ್ಥಿನಿಯರು ಸ್ವಾಗತಗೀತೆ ಹಾಡಿದರು. ಶಿಕ್ಷಕ ಎಂ.ಆರ್. ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಆನಂತರ ಶಿಕ್ಷಕರಿಗಾಗಿ ಅಗತ್ಯವಿರುವ ಸಂವಹನ ಕೌಶಲ್ಯಗಳು ಎನ್ನುವ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಮಹೇಶ ಮಾಶಾಳ ಧಾರವಾಡ, ಸುರೇಶ ಕುಲಕರ್ಣಿ ಧಾರವಾಡ, ಡಾ. ರವೀಂದ್ರ ಬೆಳಗಾವಿ ಅವರು ಕಾರ್ಯಾಗಾರ ನಡೆಸಿಕೊಟ್ಟರು.