ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ: ಎ.ಎಸ್. ಪೊನ್ನಣ್ಣ

| Published : Jun 02 2024, 01:45 AM IST

ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ: ಎ.ಎಸ್. ಪೊನ್ನಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಉಚಿತ ನೋಟ್‌ ಪುಸ್ತಕ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. 250 ಬಡ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕಗಳ ಕಿಟ್‌ ವಿತರಣೆ ಮಾಡಲಾಯಿತು.

ಕನ್ನಡಪ್ರಭವಾರ್ತೆ ವಿರಾಜಪೇಟೆ

ಶಿಕ್ಷಣದಿಂದ ಮಾತ್ರ ಉತ್ತಮ ಸಮಾಜ ರೂಪಿತವಾಗಬಲ್ಲದು. ಹಲವಾರು ಮಂದಿ ದಾನ ಧರ್ಮಗಳನ್ನು ಮಾಡುತ್ತಾ ಸೇವೆ ಮಾಡುತ್ತ ಬಂದಿದ್ದಾರೆ. ಶಿಕ್ಷಣ ಪಡೆದ ವ್ಯಕ್ತಿ ಸುಶಿಕ್ಷಿತ ಸಮಾಜ ನಿರ್ಮಾಣ ಮಾಡಬಲ್ಲ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ಗೋಣಿಕೊಪ್ಪಲು ರಸ್ತೆ ವಿರಾಜಪೇಟೆ ವತಿಯಿಂದ ನಗರದ ಸುಣ್ಣದ ಬೀದಿ ಈದ್ಗಾ ಮೈದಾನದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 10ನೇ ವರ್ಷದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಪ್ರಪಂಚದದ್ಯಾಂತ ಹಲವು ಹೆಸರಾಂತ ಉದ್ಯಮಿಗಳು ತಮ್ಮ ಆದಾಯವನ್ನು ಬಡ ಜನರ ಸೇವೆಗೆಂದು ಮುಡುಪಾಗಿಟ್ಟಿದ್ದಾರೆ. ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಎಲ್ಲ ಸೇವೆಗಳನ್ನು ನೀಡಲು ಶಕ್ತವಾಗಿರುವುದಿಲ್ಲ. ಆದರೆ ಸಂಘ ಸಂಸ್ಥೆಗಳು ಕೆಲವು ವ್ಯಕ್ತಿಗಳು ಬಡ ಜನತೆಯ ಬಳಿ ತೆರಳಿ ಅವರ ಆಶೋತ್ತರಗಳನ್ನು ಪೂರೈಕೆ ಮಾಡಲು ಮುಂದಾಗುತ್ತದೆ. ಅದರಂತೆ ನಾನು ತಂದೆ ಮತ್ತು ತಾಯಿ ಹೆಸರಿನಲ್ಲಿ ಟ್ರಸ್ಟ್‌ ಸ್ಥಾಪಿಸಿ ಬಡ ವಿದ್ಯಾರ್ಥಿಗಳಿಗಾಗಿ ಮೂರು ವರ್ಷದ ಅವಧಿಗೆ ವಿದ್ಯಾರ್ಥಿ ವೇತನ ನೀಡುತ್ತಿದ್ದೇನೆ. ಸಂಘ ಸಂಸ್ಥೆಗಳು ಇಂತಹಾ ಕಾರ್ಯಕ್ರಮಗಳಿಂದ ಜನಮನ್ನಣೆಯನ್ನು ಗಳಿಸಿ ಸಮಾಜದಲ್ಲಿ ಹೆಸರುವಾಸಿಯಾಗುತ್ತದೆ. ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ಸರ್ವ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು.ಕಾರ್ಯಕ್ರಮ ಉದ್ದೇಶಿಸಿ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಮಾತನಾಡಿ, ಉತ್ತಮ ಸಮಾಜಕ್ಕೆ ಶಿಕ್ಷಣ ಬಹು ಮುಖ್ಯ, ಬಡತನ ಒಂದು ಶಾಪವಲ್ಲಾ ಶಿಕ್ಷಣ ಪಡೆದ ವ್ಯಕ್ತಿ ತಾನು ಅರಿತ ವಿದ್ಯೆಯಿಂದ ಗಳಿಕೆಯ ಮಾರ್ಗ ಕಂಡು ಸಿರಿವಂತನಾಗುತ್ತಾನೆ. ಸೇವೆಯು ಜೀವನದ ಒಂದು ಭಾಗವಾಗಬೇಕು. ಅಲ್ಲದೆ ತನ್ನ ಗಳಿಕೆಯ ಆದಾಯದಲ್ಲಿ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಿದಲ್ಲಿ ಉತ್ತಮ ವ್ಯಕ್ತಿಯಾಗಿ ಸೃಷ್ಟಿಯಾಗುತ್ತಾನೆ. ಈ ನಿಟ್ಟಿನಲ್ಲಿ 10 ವರ್ಷಗಳಿಂದ ನಿರಂತರ ತನ್ನ ಸೇವೆ ಮಾಡಿಕೊಂಡು ಬರುತ್ತಿರುವ ಸಂಸ್ಥೆಗೆ ಶುಭವಾಗಲಿ ಎಂದು ಹರಸಿದರು.

ಸಂತ ಅನ್ನಮ್ಮ ದೇವಾಲಯದ ಧರ್ಮಗುರು ರೆ.ಫಾ. ಮೊದಲೈ ಮುತ್ತು ಅವರು ಮಾತನಾಡಿ, ಶಿಕ್ಷಣಕ್ಕೆ ಮಹತ್ವ ನೀಡಿ ಉಚಿತ ನೋಟ್ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ. ಉಚಿತವಾಗಿ ಪಡೆದ ನೋಟ್ ಪುಸ್ತಕ ಮತ್ತು ಇತರ ಪರಿಕರಗಳನ್ನು ಪಡೆದುಕೊಂಡು ಉತ್ತಮ ವಿದ್ಯಾಭ್ಯಾಸ ಹೊಂದಬೇಕು. ನಂತರದಲ್ಲಿ ಸಮಾಜಕ್ಕೆ ನೀಡುವಂತಾಗಬೇಕು ಎಂದು ಹೇಳಿದರು.

ವಿರಾಜಪೇಟೆ ಶಾಫಿ ಜುಮಾ ಮಸೀದಿ. ಖತೀಬರಾದ ಜ. ಹಾರಿಸ್ ಬಾಖವಿ ಅವರು ಮಾತನಾಡಿ, ಎಲ್ಲ ಧರ್ಮಗಳಲ್ಲಿ ಶಿಕ್ಷಣಕ್ಕೆ ತನ್ನದೆಯಾದ ಸ್ಥಾನಮಾನಗಳನ್ನು ನೀಡಿದೆ. ಸಮಾಜಕ್ಕೆ ನೀನು ನೀಡುವ ಕೊಡುಗೆ ಅಥವಾ ಸೇವೆಯನ್ನು ಪರಿಗಣಿಸಿ ಸರ್ವಶಕ್ತನಾದ ದೇವರು ಸಕಲವನ್ನು ದಯಪಾಲಿಸುತ್ತಾನೆ. ಶಿಕ್ಷಣದ ಮಹತ್ವವನ್ನು ಅರಿತು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ನೀಡುತ್ತಿರುವ ಸಂಸ್ಥೆಯ ಸೇವೆಯು ನಿರಂತರವಾಗಿ ನಡೆಯಬೇಕು. ಜನಸಾಮಾನ್ಯರಿಗೆ ಮಾಡುವ ಸೇವೆಯಿಂದಲೇ ವ್ಯಕ್ತಿ ಉನ್ನತಿಯಾಗುತ್ತಾನೆ ಎಂದು ಹೇಳಿದರು.

ಕಾರ್ಯಕ್ರಮ ಉದ್ದೇಶಿಸಿ ಲಿಟಲ್ ಸ್ಕಾರ‍್ಸ್ ಅಕಾಡೆಮಿಯ ಅಧ್ಯಕ್ಷರಾದ ಪೂಜ ರವೀಂದ್ರ, ಪುರಸಭೆ ಸದಸ್ಯರಾದ ಎಚ್.ಎಸ್. ಮತೀನ್, ಹಿರಿಯರಾದ ಮುಸ್ತಾಕ್ ಅಹಮ್ಮದ್ ಮಾತನಾಡಿದರು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷರು ಮತ್ತು ಪುರಸಭೆ ಸದಸ್ಯರಾದ ಮೊಹಮ್ಮದ್ ರಾಫಿ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು. ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಲೀರ ಪವಿಲ್ ಉಸ್ಮಾನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿರಾಜಪೇಟೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 250 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕಗಳ ಕಿಟ್ ವಿತರಣೆ ಮಾಡಲಾಯಿತು. ಸಂಘಟನೆ ಒಂದರ ಅಧ್ಯಕ್ಷರಾದ ಮುಸ್ತಾಕ್ ಅಹಮ್ಮದ್ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಶಾಫಿ ಜುಮಾ ಮಸೀದಿ ಅಧ್ಯಕ್ಷರಾದ ಕೆ.ಪಿ ರಶೀದ್ ಹಾಜಿ, ಆರ್.ಎಸ್.ಎಲ್. ಮಾಲೀಕರಾದ ರಶೀದ್, ಡಿ.ಸಿ.ಟಿ ಯುವ ಘಟಕದ ಅದ್ಯಕ್ಷರಾದ ಮೊಹಮ್ಮದ್ ಫಾಯಿಝ್ ಎನ್.ಎಂ. ಉಪಸ್ಥಿತರಿದ್ದರು.

ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಸ್. ಇರ್ಷಾದ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಮೊಹಮ್ಮದ್ ರೆಜಿ ವಂದಿಸಿದರು.ಕಾರ್ಯಕ್ರಮದಲ್ಲಿ ಡೊನೇರ‍್ಸ್ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಗ್ರಾಮ ಮತ್ತು ನಗರ ಪ್ರದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು.