ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಬೆಂಗಳೂರು ಕೇಂದ್ರ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಬಿ.ಆರ್.ರವಿಕಾಂತೇಗೌಡ ಅವರಿಗೆ ತಾಲೂಕು ನಾಡಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘ ಹಾಗೂ ಚುಂಚಶ್ರೀ ಗೆಳೆಯರ ಬಳಗದ ವತಿಯಿಂದ ಬಿಜಿಎಸ್ ಆಡಳಿತ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಪಟ್ಟಣದ ಶಿವಪುರದ ಪೂರ್ಣಪ್ರಜ್ಞ ಶಾಲೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಕೆ.ಎಂ.ಉದಯ್ ಹಾಗೂ ಸಂಘದ ಪದಾಧಿಕಾರಿಗಳು ರವಿಕಾಂತೇಗೌಡರಿಗೆ ಬಿಜಿಎಸ್ ಸೇವಾ ರತ್ನ ಪ್ರಶಸ್ತಿಯೊಂದಿಗೆ ಫಲತಾಂಬೂಲ ನೀಡಿ ಗೌರವ ಸಮರ್ಪಿಸಿದರು.
ಪ್ರಶಸ್ತಿ ಪ್ರದಾನದ ಬಳಿಕ ಮಾತನಾಡಿದ ಶಾಸಕ ಉದಯ್, ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಶ್ರೀಗಳು ಸ್ಥಾಪನೆ ಮಾಡಿದ ಆದಿಚುಂಚನಗಿರಿ ಮಠ ಆರೋಗ್ಯ. ಅಕ್ಷರ ಹಾಗೂ ಅನ್ನದಾಸೋಹದ ಮೂಲಕ ಇಡೀ ವಿಶ್ವದಲ್ಲೇ ಮಾನ್ಯತೆ ಪಡೆದುಕೊಂಡಿದೆ. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದರು.ಮನುಷ್ಯನ ಜೀವನದಲ್ಲಿ ರಾಜಕೀಯ ಅಥವಾ ಅಧಿಕಾರದ ಸ್ಥಾನಮಾನ ದೊರೆತಾಗ ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ರವಿಕಾಂತ್ ಗೌಡರು ಪೊಲೀಸ್ ಅಧಿಕಾರಿಯಾಗಿ ತಾವು ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಕಾರ್ಯದಕ್ಷತೆಯಿಂದ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಮಂಡ್ಯ ಕೃಷಿ ಫೌಂಡೇಶನ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾತನಾಡಿ, ಮದ್ದೂರು ತಾಲೂಕು ಕೀರ್ತಿ ಶೇಷ ಎಚ್.ಕೆ.ವೀರಣ್ಣಗೌಡ, ಹಿರಿಯ ಮುತ್ಸದ್ದಿಗಳಾದ ಎಸ್.ಎಂ.ಕೃಷ್ಣ, ಜಿ.ಮಾದೇಗೌಡ, ಚಿತ್ರನಟ ಅಂಬರೀಶ್, ಎಂ.ಎಸ್.ಸಿದ್ದರಾಜು ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.ಅದೇ ರೀತಿ ಪೊಲೀಸ್ ಅಧಿಕಾರಿಯಾಗಿ ರವಿಕಾಂತೇಗೌಡರು ತಮ್ಮ ಕರ್ತವ್ಯದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆ ಮೆರೆದು ಇಡೀ ರಾಜ್ಯದಲ್ಲಿಯೇ ಹೆಸರು ಗಳಿಸಿದ್ದಾರೆ ಎಂದು ಬಣ್ಣಿಸಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ ಪ್ರಶಸ್ತಿ ಪುರಸ್ಕೃತ ಡಾ.ರವಿಕಾಂತೇಗೌಡರ ಕುರಿತು ಕುರಿತು ಅಭಿನಂದನಾ ಭಾಷಣ ಮಾಡಿದರು. ಚುಂಚಶ್ರೀ ಗೆಳೆಯರ ಬಳಗದ ಅಧ್ಯಕ್ಷ ಡಾ.ಬಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಎಚ್.ಸಿ.ಕಾಳಿರಯ್ಯ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಶಿವಪ್ಪ, ಪೂರ್ಣಪ್ರಜ್ಞ ವಿದ್ಯಾ ಸಂಸ್ಥೆ ಅಧ್ಯಕ್ಷ ಪಿ.ಕಸ್ತೂರಿ ಅನಂತಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಯೋಗೇಶ್ ಕನ್ಯಾಡಿ, ಒಕ್ಕಲಿಗರ ಸಂಘ ಹಾಗೂ ಚುಂಚಶ್ರೀ ಗೆಳೆಯರ ಬಳಗದ ಪದಾಧಿಕಾರಿಗಳು ಇದ್ದರು.