ಸಾರಾಂಶ
ಭಗವದ್ಗೀತೆ ಎಲ್ಲರ ಮನ ಮತ್ತು ಮನೆ ತಲುಪಬೇಕೆನ್ನುವ ಉದ್ದೇಶದಿಂದ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ಭಟ್ಕಳ: ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಮತ್ತು ಗಜಾನನ ಗಣಪತಿ ಕೊಲ್ಲೆ ರಾಯ್ಕರ ಫೌಂಡೇಶನ್ ಸಹಯೋಗದಲ್ಲಿ ಏರ್ಪಡಿಸಿದ್ದ ಭಗವದ್ಗೀತೆ ಕಂಠಪಾಠ ಸ್ಪರ್ಧೆಯನ್ನು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಗವದ್ಗೀತೆ ಎಲ್ಲರ ಮನ ಮತ್ತು ಮನೆ ತಲುಪಬೇಕೆನ್ನುವ ಉದ್ದೇಶದಿಂದ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ಸಲ ನಾಲ್ಕನೇ ವರ್ಷದ ಅಭಿಯಾನವನ್ನು ಭಟ್ಕಳ, ಹೊನ್ನಾವರ, ಕುಮಟಾ ಮತ್ತು ಬೈಂದೂರು ತಾಲೂಕಿನ ಆಯ್ದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಕರಾವಳಿ ಭಾಗದ ಶಿಕ್ಷಣ(ಬಿಎಡ್) ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ಒಟ್ಟು ೩೩ ವಿಭಾಗಗಳಲ್ಲಿ ಪ್ರತ್ಯೇಕವಾಗಿ ೩೩ ಪ್ರಥಮ ೩೩ ದ್ವಿತೀಯ ಮತ್ತು ೯೯ ತೃತೀಯ ಬಹುಮಾನವನ್ನು ನೀಡಲಿದ್ದು, ಬಹುಮಾನದ ಒಟ್ಟು ಮೊತ್ತ ₹೧,೪೮,೫೦೦ ಆಗಲಿದೆ ಎಂದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಮಾತನಾಡಿ, ಈ ವರ್ಷದ ಅಭಿಯಾನದಲ್ಲಿ ಸುಮಾರು ೪೦೦ ಶಾಲಾ- ಕಾಲೇಜುಗಳ ೧೦,೦೦೦ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸ್ಪರ್ಧೆಯ ಮಾಹಿತಿ ನೀಡಲಾಗಿತ್ತು. ಈಗ ಸುಮಾರು ೨೧೮ ಸಂಸ್ಥೆಗಳ ೧೫೫೪ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ಪವಿತ್ರವಾದ ಭಗವದ್ಗೀತೆಯ ಸ್ಫರ್ಧೆಯನ್ನು ಅತ್ಯಂತ ಪಾರದರ್ಶಕವಾಗಿ ಯಶಸ್ವಿಗೊಳಿಸಲಾಗುತ್ತಿದೆ ಎಂದರು.ಟ್ರಸ್ಟಿ ರಮೇಶ ಖಾರ್ವಿ ಮಾತನಾಡಿ, ಎಲ್ಲರ ಸಹಕಾರದಿಂದ ಇಂತಹ ಒಂದು ಬೃಹತ್ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ವಿರೇಂದ್ರ ಶ್ಯಾನಭಾಗ ಸ್ವಾಗತಿಸಿದರು. ಉಪನ್ಯಾಸಕ ಶಿವಾನಂದ ಭಟ್ಟ ವಂದಿಸಿದರು. ಉಪನ್ಯಾಸಕ ನಾಗೇಂದ್ರ ಪೈ ಮತ್ತು ವಿಶ್ವಾಸ ಪ್ರಭು ನಿರ್ವಹಿಸಿದರು.