ಸಾರಾಂಶ
ಭಗವಾನ್ ಬಿರ್ಸಾ ಮುಂಡ ಜಯಂತಿ (ಜನಜಾತೀಯ ಗೌರವ್ ದಿವಸ್) ಧರ್ತಿ ಆಬಾ ಜನ ಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೆಲ ಕಾಲ ಬದುಕಿ ಚಿರ ಕಾಲ ಉಳಿದ ಭಗವಾನ್ ಬಿರ್ಸಾ ಮುಂಡಾರವರ ಜೀವನ ಸ್ಫೂರ್ತಿದಾಯಕವಾದುದು. ಬುಡಕಟ್ಟು ಸಮುದಾಯದ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶುಕ್ರವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಭಗವಾನ್ ಬಿರ್ಸಾ ಮುಂಡ ಜಯಂತಿ (ಜನಜಾತೀಯ ಗೌರವ್ ದಿವಸ್) ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಅನೇಕ ವೀರರನ್ನು, ಸ್ವಾತಂತ್ರ್ಯ ಹೋರಟಗಾರರ ಚರಿತ್ರೆಯನ್ನು ಇತಿಹಾಸದ ಮೂಲಕ ತಿಳಿದುಕೊಳ್ಳಬಹುದು. ಸ್ವಾತಂತ್ರ್ಯದ ಜೊತೆಗೆ ಸ್ವಾಭಿಮಾನ ಹಾಗೂ ಬುಡಕಟ್ಟು ಸಮುದಾಯದ ಜನರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಕ್ಕುಗಳಿಗೆ ಹೋರಾಡಿ ಬುಡಕಟ್ಟು ಸಂಸ್ಕೃತಿ ಪುನರುಜ್ಜೀವನಗೊಳಿಸಿದ ಬಿರ್ಸಾ ಮುಂಡಾರವರ ಜೀವನ ಸಾಧನೆಗಳು ಶ್ಲಾಘನೀಯ ಎಂದರು.ಬುಡಕಟ್ಟು ಜನರನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶ ದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜಿಲ್ಲಾಡಳಿತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವ ಬುಡಕಟ್ಟು ಜನಾಂಗದವರಿಗೆ ಮೂಲಭೂತ ಸೌಕರ್ಯ ಒದಗಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲಾಗುತ್ತಿದೆ. ಏಕಲವ್ಯ, ಆಶ್ರಮ ಶಾಲೆ, ನವೋದಯದಂತಹ ವಸತಿ ಶಾಲೆಗಳನ್ನು ತೆರೆದು ಉಚಿತ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡ ಲಾಗುತ್ತಿದೆ. ಶಿಕ್ಷಣದಿಂದ ತಮ್ಮ ಕನಸಿನ ಹುದ್ದೆಗಳನ್ನು ಪಡೆಯಬಹುದು ಎಂದು ಹೇಳಿದರು.
ಜೀವನದ ಗುಣಮಟ್ಟ ಉತ್ತಮಗೊಳಿಸಲು ಶಿಕ್ಷಣ ಒಂದೇ ಸೂಕ್ತ ಮಾರ್ಗ. ಬುಡಕಟ್ಟು ಸಮುದಾಯದ ಪ್ರತಿಯೊಬ್ಬರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರನ್ನು ಬೆಳೆಸಬೇಕು. ತಮ್ಮ ವೃತ್ತಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದ ಅವರು, ಸರ್ಕಾರದ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ಬುಡಕಟ್ಟು ಜನರ ಜೀವನ ಕ್ರಮ, ಆಚಾರ ವಿಚಾರ ಹಾಗೂ ಸಂಸ್ಕೃತಿ ಸಂಪ್ರದಾಯ ವಿಶೇಷವಾದದ್ದು, ಭಗವಾನ್ ಬಿರ್ಸಾ ಮುಂಡಾ ಬುಡಕಟ್ಟು ಸಮುದಾಯ ಜನರ ಹಕ್ಕು ಹಾಗೂ ಉತ್ತಮ ಸಾಮಾಜಿಕ ಜೀವನ ನಿರ್ವಹಣೆಗೆ ಬ್ರಿಟಿಷರಿಗೆ ತಾನೊಬ್ಬನೇ ಒಂದು ದಂಡಾಗಿ ಕಾಣಿಸಿಕೊಳ್ಳುವಂತೆ ವ್ಯವಸ್ಥೆ ವಿರುದ್ಧ ಹೋರಾಡಿದ್ದಾರೆ. ಸ್ವಾಭಿಮಾನಕ್ಕಾಗಿ ಶಿಕ್ಷಣದಿಂದ ವಂಚಿತರಾದ ಅವರು ಸಮುದಾಯಕ್ಕಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು ಎಂದರು.
ರಾಷ್ಟ್ರೀಯ ಆದಿವಾಸಿ ಅಂದೋಲನ ಹಾಗೂ ಜಿಲ್ಲಾ ಬುಡಕಟ್ಟು ಕೃಷಿಕ ಸಂಘದ ಮುಖಂಡರಾದ ಜ್ಯೋತಿ ಮತ್ತು ತಾಲೂಕಿನ ಸತ್ತಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವನಾಥ್ ಭಗವಾನ್ ಬಿರ್ಸಾ ಮುಂಡರ ಜೀವನ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಬಿರ್ಸಾ ಮುಂಡ ಜಯಂತಿ ಅಂಗವಾಗಿ ಏಕಲವ್ಯ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬಹುಮಾನ ನೀಡಲಾಯಿತು.ಕಾರ್ಯಕ್ರದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯೋಜನಾ ಸಮನ್ವಯಾಧಿಕಾರಿ ಭಾಗೀರಥಿ, ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೇಶ್, ಆದಿವಾಸಿ ಪರಿಷತ್ ಸಂಘಟನಾ ಕಾರ್ಯದರ್ಶಿ ಶ್ರೀನಿ ವಾಸ್ ಗೌಡ, ಮೇದಾ ಸಮುದಾಯದ ಮುಖಂಡರಾದ ಶೋಭಾ, ದಲಿತ ಮುಖಂಡರಾದ ಕೆ.ಟಿ ರಾಧಕೃಷ್ಣ, ಹುಣಸೆಮಕ್ಕಿ ಲಕ್ಷ್ಮಣ್, ಮರ್ಲೆ ಅಣ್ಣಯ್ಯ ಉಪಸ್ಥಿತರಿದ್ದರು. 15 ಕೆಸಿಕೆಎಂ 1ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಭಗವಾನ್ ಬಿರ್ಸಾ ಮುಂಡ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಎಚ್.ಎಸ್. ಕೀರ್ತನಾ, ಪಿ. ರಾಜೇಶ್, ಶೋಭಾ ಇದ್ದರು.