ಕೊಪ್ಪಳ: ಭಜನೆ ಎಂದರೆ ಭಕ್ತಿಗೀತೆಗಳ ಮೂಲಕ ದೇವರನ್ನು ಸ್ತುತಿಸುವ,ಮಾನಸಿಕ ಶಾಂತಿ ಮತ್ತು ಆತ್ಮಸಾಕ್ಷಾತ್ಕಾರ ಪಡೆಯುವ ಪವಿತ್ರ ಆಚರಣೆ ಎಂದು ಡಾ.ಪಿ.ಎಂ. ಬಸವರಾಜ ಹೇಳಿದರು.
ತಾಲೂಕಿನ ವದಗನಾಳ ಗ್ರಾಮದಲ್ಲಿ ಶ್ರೀ ಹಮ್ಮಿಗೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಜನೆ ಅನ್ನೋದು ಭಕ್ತ ಮತ್ತು ಭಗವಂತನ ನಡುವಿನ ಸೇತುವೆಯಾಗಿದ್ದು. ಸಾಮೂಹಿಕವಾಗಿ ಹಾಡುವುದರಿಂದ ಸಮುದಾಯದಲ್ಲಿ ಏಕತೆ,ಪೂಜ್ಯಭಾವನೆ ಮತ್ತು ಆಧ್ಯಾತ್ಮಿಕ ಶಕ್ತಿ ವೃದ್ಧಿಸುತ್ತದೆ ಎಂದರು.ಈ ಭಜನಾ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು 10 ಭಜನಾ ಕಲಾ ತಂಡ ಭಾಗವಹಿಸಿದ್ದವು. ಸ್ಪರ್ಧೆಯಲ್ಲಿ ಶ್ರೀಗುರುಶಾಂತ ಕಲಾ ತಂಡ ಶಲೂಡಿ ಪ್ರಥಮ ಸ್ಥಾನ ಪಡೆದು ₹11,111 ನಗದು ಬಹುಮಾನ ತಮ್ಮದಾಗಿಸಿಕೊಂಡರು. ರೋಣದ ಶ್ರೀಬಸವೇಶ್ವರ ಭಜನಾ ಸಂಘ ಎರಡನೇ ಸ್ಥಾನ ಪಡೆದು ₹5555 ಹಾಗೂ ತೊಂಡಿಹಾಳದ ಶ್ರೀದುರ್ಗಾದೇವಿ ಭಜನಾ ಸಂಘ ತೃತೀಯ ಸ್ಥಾನ ಪಡೆಯುವ ಮೂಲಕ ₹3333 ನಗದು ಬಹುಮಾನ ಪಡೆದುಕೊಂಡರು.
ಸಮಾರಂಭದಲ್ಲಿ ಡಾ.ಮಹಾಂತೇಶ ಮಾಲಿಪಾಟೀಲ್, ಆರ್.ಜಿ.ತಿಮ್ಮನಗೌಡ, ಶಿವರಾಜ ಹುಡೇದ, ಸಿ.ಕೆ.ಪಾಟೀಲ್, ಶಿಕ್ಷಕ ದೇವಪ್ಪ ಸಂಗಟಿ, ದೇವಣ್ಣ ಉಪ್ಪಾರ, ಗದಿಗೆಪ್ಪ ವಾಲ್ಮೀಕಿ, ಭರಮಪ್ಪ ಬೇಳೂರು, ಪ್ರಭು ಶಿವನಗೌಡ್ರ, ವೀರೇಶ ಕಾಸನಕಂಡಿ, ಭಜನಾ ಕಲಾ ತಂಡದವರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.ಸ್ಪರ್ಧೆಯಲ್ಲಿ ವಿಜೇತವಾದ ತಂಡಗಳಿಗೆ ನಗದು ಬಹುಮಾನ ಜತೆಗೆ ದೇವಸ್ಥಾನದ ಕಮೀಟಿಯಿಂದ ಅಭಿನಂದನೆ ಪತ್ರ ಹಾಗೂ ಶೀಲ್ಡ್ ನೀಡಿ ಗೌರವಿಸಲಾಯಿತು ಎಂದು ಪ್ರಚಾರದ ಉಸ್ತುವಾರಿ ದೇವೇಂದ್ರಗೌಡ ಜಿರ್ಲಿ ತಿಳಿಸಿದ್ದಾರೆ.