ಸಾರಾಂಶ
ಭಾರತ ಸೇವಾದಳದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಚಾಲನೆ ನೀಡಿ, ಸಹ ಬಾಳ್ವೆ ಮತ್ತು ಭಾವೈಕ್ಯತೆಯಿಂದ ಬಾಳುವಂತಾಗಲು ಭಾರತ ಸೇವಾದಳದ ಕಾರ್ಯಕ್ರಮ ಪೂರಕ ಎಂದು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಮುಂದಿನ ಜನಾಂಗ ರಾಷ್ಟ್ರೀಯ ಭಾವನೆಯೊಂದಿಗೆ ಎಲ್ಲರೊಂದಿಗೆ ಸಹ ಬಾಳ್ವೆ ಮತ್ತು ಭಾವೈಕ್ಯತೆಯಿಂದ ಬಾಳುವಂತಾಗಲು ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡ ಭಾರತ ಸೇವಾದಳದ ಕಾರ್ಯಕ್ರಮ ಪೂರಕವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಶಿಕ್ಷಣ ಇಲಾಖೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಶಾಲಾ ಮೇಲೂಸ್ತುವಾರಿ ಸಮಿತಿಯ ಆಶ್ರಯದಲ್ಲಿ ಭಾರತ ಸೇವಾದಳದ ಶತಮಾನೋತ್ಸವದ ಅಂಗವಾಗಿ ಮಂಗಳವಾರ ಪಟ್ಟಣದ ಕೋಳಿ ಕಾಲು ಗುಡ್ಡದಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸಾಕ್ಷರತೆ ಕೇವಲ ಶೇ.15 ಇದ್ದು ಪ್ರಸ್ತುತ ಶೇ.78 ಇದೆ. ಆದರೆ, ಶಿಕ್ಷಣದಿಂದ ಸಮಾಜ ಬದಲಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಎಲ್ಲಾ ಜಾತಿ ಧರ್ಮದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಎಂದಿಗಿಂತಲೂ ಇಂದು ಅಗತ್ಯವಾಗಿದೆ. ದೇವರ ಸ್ವರೂಪವಾಗಿರುವ ಮಕ್ಕಳ ಮನಸ್ಸಿನಲ್ಲಿ ಕೆಟ್ಟ ಭಾವನೆಗಳು ಮೂಡದಂತೆ ಜಾಗ್ರತೆ ವಹಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಬೇರೆ ಬೇರೆ ಘೋಷಣೆಗಳ ಮೂಲಕ ಇಂದು ದೇಶವನ್ನು ಚಿದ್ರಗೊಳಿಸುವ ಪ್ರಯತ್ನ ನಡೆಯುತ್ತಿದೆ, ಈ ಸಂದರ್ಭ ದಲ್ಲಿ ಶತಮಾನವನ್ನು ಪೂರೈಸಿರುವ ದೇಶಭಕ್ತ ಸಂಘಟನೆಯಾಗಿ ಕಾರ್ಯಕ್ರಮ ಅರ್ಥಪೂರ್ಣವಾಗಿದೆ, ಬಹಳ ಮುಖ್ಯವಾಗಿ ಮಕ್ಕಳಲ್ಲಿ ಜಾತಿ ಧರ್ಮಗಳ ಚೌಕಟ್ಟನ್ನು ಮೀರಿ ಮಾನವೀಯ ಮೌಲ್ಯಗಳನ್ನ ಉದ್ದೀಪನ ಗೊಳಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ ಎಂದರು. ಬೆಳಗಿನ ನಡೆದ ಈ ಕಾರ್ಯಕ್ರಮದಲ್ಲಿ ತಾಲೂಕಿನಾದ್ಯಂತ ಬಂದಿದ್ದ 600ಕ್ಕೂ ಹೆಚ್ಚಿನ ಮಕ್ಕಳು ಅತ್ಯಂತ ಶಿಸ್ತುಬದ್ಧವಾಗಿ ಭಾಗವಹಿಸಿದ್ದರು. ಪ್ರಭಾತ್ ಪೆರಿ ಮತ್ತು ಚಟುವಟಿಕೆ ಅಭ್ಯಾಸ ಹಾಗೂ ಕವಾಯತು ನಡೆಯಿತು. ವೇದಿಕೆಯಲ್ಲಿ ಭಾರತ ಸೇವಾದಳ ಘಟಕದ ತಾಲೂಕು ಅಧ್ಯಕ್ಷ ಕೆಸ್ತೂರು ಮಂಜುನಾಥ್, ಉಪಾಧ್ಯಕ್ಷ ಟಿಕೆ ರಮೇಶ್ ಶೆಟ್ಟಿ, ಜಿಲ್ಲಾಧ್ಯಕ್ಷ ವೈಎಚ್.ನಾಗರಾಜ್, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಗೀತಾ ರಮೇಶ್, ಉಪಾಧ್ಯಕ್ಷ ರಹಮದ್ ಉಲ್ಲಾ ಅಸಾದಿ, ಬಿಇಓವೈ ಗಣೇಶ್, ಶಿವಮೂರ್ತಪ್ಪ, ಮಹಾಬಲೇಶ್ವರ ಹೆಗಡೆ, ಅಬ್ದುಲ್ ರೆಹಮಾನ್, ಪರ್ವೇಶ್ ಮತ್ತು ಕೆಳಕೆರೆ ಪೂರ್ಣೇಶ್ ಇದ್ದರು.