ಭರತಖಂಡ ವಿಶ್ವಭ್ರಾತೃತ್ವ ರಾಷ್ಟ್ರ: ಐಕನಹಳ್ಳಿ ಕೃಷ್ಣೇಗೌಡ

| Published : Jan 27 2025, 12:47 AM IST

ಸಾರಾಂಶ

ಹರಿದು ಹೋಗಿದ್ದ ಪ್ರಾಂತ್ಯಗಳನ್ನು ಗಣತಂತ್ರದ ಮೂಲಕ ಒಗ್ಗೂಡಿಸಿದ ಪವಿತ್ರ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸುವುದು ಎಲ್ಲರ ಕರ್ತವ್ಯವಾಗಿದೆ. ಆಚಾರ, ವಿಚಾರ, ಉಡುಗೆ, ತೊಡುಗೆ, ಭಾಷೆ, ಸಂಪ್ರದಾಯ, ಆಹಾರ ಶೈಲಿಯಿಂದ ಹಿಡಿದು ಎಲ್ಲವೂ ವಿಭಿನ್ನವಾಗಿರುವ ರಾಷ್ಟ್ರ ನಮ್ಮದು. ಎಷ್ಟೆ ವಿಭಿನ್ನವಾದರೂ ಏಕತೆಯನ್ನು ಹೊಂದಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪ್ರಪಂಚದಲ್ಲಿಯೇ ವಿಶ್ವ ಭ್ರಾತೃತ್ವವನ್ನು ಹೊಂದಿರುವ ರಾಷ್ಟ್ರ ನಮ್ಮದಾಗಿರುವುದು ಹೆಮ್ಮೆಯಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಹೇಳಿದರು.

ಪಟ್ಟಣದಕೆಪಿಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಬಲು ದೀರ್ಘ ಹಾಗೂ ಸಮಾನತೆ ಸಾರುವ ಸಂವಿಧಾನವನ್ನು ಇಡೀ ವಿಶ್ವವೇ ಮೆಚ್ಚಿದೆ. ಅನೇಕತೆಯಲ್ಲಿ ಏಕತೆಯನ್ನು ಹೊಂದಿ ಸೋದರತ್ವ, ಸರ್ವರಿಗೂ ಸಮಪಾಲು, ಸಮಬಾಳು ದೊರಕಿಸಲು ನಮ್ಮ ಸಂವಿಧಾನ ಬ್ರಹ್ಮಾಸ್ತ್ರವಾಗಿದೆ ಎಂದರು.

ಹರಿದು ಹೋಗಿದ್ದ ಪ್ರಾಂತ್ಯಗಳನ್ನು ಗಣತಂತ್ರದ ಮೂಲಕ ಒಗ್ಗೂಡಿಸಿದ ಪವಿತ್ರ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸುವುದು ಎಲ್ಲರ ಕರ್ತವ್ಯವಾಗಿದೆ. ಆಚಾರ, ವಿಚಾರ, ಉಡುಗೆ, ತೊಡುಗೆ, ಭಾಷೆ, ಸಂಪ್ರದಾಯ, ಆಹಾರ ಶೈಲಿಯಿಂದ ಹಿಡಿದು ಎಲ್ಲವೂ ವಿಭಿನ್ನವಾಗಿರುವ ರಾಷ್ಟ್ರ ನಮ್ಮದು. ಎಷ್ಟೆ ವಿಭಿನ್ನವಾದರೂ ಏಕತೆಯನ್ನು ಹೊಂದಿದೆ ಎಂದರು.

ವಿಶ್ವವೇ ಮೆಚ್ಚಿರುವ ನಮ್ಮ ಸಂವಿಧಾನ, ಸಂವಿಧಾನ ಶಿಲ್ಪಿಯನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಪ್ರಜಾಪ್ರಭುತ್ವ ರಾಷ್ಟ್ರದ ಪ್ರತಿಯೋರ್ವ ವ್ಯಕ್ತಿ ನೆಮ್ಮದಿಯ ಬದುಕು ಸಾಗಿಸಲು ಅಂಬೇಡ್ಕರ್‌ ಅವರ ಸಂವಿಧಾನದಡಿಯಲ್ಲಿ ಬದುಕಬೇಕಿದೆ ಎಂದರು.

ಈ ವೇಳೆ ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಮುಖ್ಯಶಿಕ್ಷಕಿ ಮಮತಾ, ಭಾರತಿ, ಪುಷ್ಪಲತಾ, ಎಸ್‌ಡಿಎಂಸಿ ಸದಸ್ಯ ಬಾಬು, ಕುಮಾರಸ್ವಾಮಿ, ಬಸವರಾಜು ಇದ್ದರು. ವಿವಿಧೆಡೆ ಆಚರಣೆ:

ಕೆ.ಎಂ.ದೊಡ್ಡಿ ಸ್ನೇಹ ವಿದ್ಯಾ ಸಂಸ್ಥೆ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಸಂಸ್ಥೆ ಸಂಸ್ಥಾಪಕ ದಾಸೇಗೌಡ, ಅಧ್ಯಕ್ಷೆ ಶಶಿಕಲಾ ದಾಸೇಗೌಡ, ಮುಖ್ಯ ಶಿಕ್ಷಕ ರವಿಶಂಕರ್ ಸೇರಿದಂತೆ ಶಿಕ್ಷಕರು ಇದ್ದರು.

ಮದ್ದೂರು ಕ್ರೀಡಾ ಬಳಗದ ವತಿಯಿಂದ 76ನೇ ಗಣರಾಜ್ಯೋತ್ಸವದಲ್ಲಿ ಬಳಗದ ಅಧ್ಯಕ್ಷ ನಿವೃತ್ತ ಪ್ರೊ.ಕಾಂತರಾಜು ಧ್ವಜಾರೋಹಣ ನೆರವೇರಿಸಿದರು.

ಮದ್ದೂರು ಛಲವಾದಿ ಮಹಾಸಭಾ ತಾಲ್ಲೂಕು ಸಮಿತಿ ವತಿಯಿಂದ 76ನೇ ಗಣರಾಜ್ಯೋತ್ಸವ, ಸಂವಿಧಾನದ ದಿನಾಚರಣೆ ಅಂಗವಾಗಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ತಾಲೂಕು ಅಧ್ಯಕ್ಷ ಕೆ.ಶಂಕರ್, ಸಮಿತಿ ನಿರ್ದೇಶಕರಾದ ರಾಜೇಂದ್ರ, ಪ್ರಸನ್ನ, ಗುರುಲಿಂಗಯ್ಯ, ನಾಗಭೂಷಣ್, ಅಮರ, ಮಹಾದೇವಯ್ಯ, ನಾಗರಾಜು, ರವಿ ಇದ್ದರು.

ಹಲಗೂರು ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ನಡೆಯಿತು. ಅಧ್ಯಕ್ಷೆ ಶಶಿಕಲಾ, ಸದಸ್ಯರಾದ ಎಚ್.ಕೆ.ಮೂರ್ತಿ, ನಾರಾಯಣಗೌಡ, ರವೀಶ್, ಕಾರ್ಯದರ್ಶಿ ಶಿವಕುಮಾರ್, ಬಿಲ್ ಕಲೆಕ್ಟರ್ ಆನಂದ್, ಸಿಬ್ಬಂದಿ ಶಿವನಂಜು, ರಾಜಣ್ಣ, ಸಿಬ್ಗತ್ ಸೇರಿದಂತೆ ಹಲವರು ಇದ್ದರು.