ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನಲ್ಲಿ ಶನಿವಾರ ರಾತ್ರಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಅನೇಕ ಕಡೆಗಳಲ್ಲಿ ಹಾನಿಯಾಗಿರುವ ಕುರಿತು ವರದಿಯಾಗಿದೆ.

ಶಿರಾಲಿ ಗ್ರಾಮದಲ್ಲಿ ಶನಿವಾರ ರಾತ್ರಿ ಬಂದ ಭಾರೀ ಗಾಳಿ ಸಹಿತ ಮಳೆಯ ಪರಿಣಾಮ ವಿವಿಧ ಕಡೆ ಹಾನಿಯಾಗಿರುವ ಕುರಿತು ವರದಿಯಾಗಿದೆ. ವಿದ್ಯುತ್ ಕಂಬವೊಂದು ಮುರಿದು ಸ್ಕೂಟಿಯ ಮೇಲೆ ಬಿದ್ದು ಓರ್ವ ವ್ಯಕ್ತಿ ಗಾಯಗೊಂಡ ಘಟನೆ ನಡೆಯಿತು. ಹಲವು ಕಡೆಗಳಲ್ಲಿ ಮರಗಳು ಮುರಿದು ಮನೆಯ ಮೇಲೆ ಬಿದ್ದು ಹಾನಿಯಾಗಿರುವ ಕುರಿತೂ ವರದಿಯಾಗಿದೆ. ಶಿರಾಲಿ-೨ ಗ್ರಾಮದ ಕೋಟೆಬಾಗಿಲು ಆಸ್ಪತ್ರೆ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಸ್ಕೂಟಿಯ ಮೇಲೆ ಬಿದ್ದ ಪರಿಣಾಮ ಮೂಡಶಿರಾಲಿ ನಿವಾಸಿ ವೆಂಕಟರಮಣ ಮಾಸ್ತಿ ನಾಯ್ಕ (೩೫) ಗಾಯಗೊಂಡಿದ್ದಾರೆ. ಘಟನೆ ವೇಳೆ ಅವರು ಪ್ರಜ್ಞೆ ತಪ್ಪಿದ್ದು, ಸ್ಥಳೀಯರು ತಕ್ಷಣ ಅವರನ್ನು ಭಟ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂಧಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು ಗುಣಮುಖರಾಗಿದ್ದಾರೆನ್ನಲಾಗಿದೆ. ಶಿರಾಲಿ-೧ ಗ್ರಾಪಂ ವ್ಯಾಪ್ತಿಯಲ್ಲಿನ ಗುಡಿಹಿತ್ಲದಲ್ಲಿ ಅಬ್ದುಲ್ ಅಜೀಜ್ ಎನ್ನುವವರ ಮನೆಯ ಮೇಲೆ ಕಾಡು ಜಾತಿಯ ಮರ ಮುರಿದು ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಕಾಯ್ಕಿಣಿ ಗ್ರಾಪಂ ವ್ಯಾಪ್ತಿಯ ಮಲ್ಲಿಕಾನ ಪ್ರದೇಶದ ವೆಂಕಟರಮಣ ಬೆರ್ಮ ನಾಯ್ಕ ಎನ್ನುವವರ ದನದ ಕೊಟ್ಟಿಗೆಯ ಮೇಲೆ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಕೊಟ್ಟಿಗೆಗೆ ಹಾನಿಯಾಗಿದೆ. ಘಟನೆಯ ವೇಳೆಯಲ್ಲಿ ಯಾವುದೇ ಜನರಿಗೆ, ಜಾನುವಾರುಗಳಿಗೆ ಹಾನಿಯಾಗಿಲ್ಲ. ಮುಂಡಳ್ಳಿ ಗ್ರಾಮದ ಹಳ್ಳೆರಕೇರಿ ನಿವಾಸಿ ಸುಕ್ರಯ್ಯ ದೇವಪ್ಪ ಹಳ್ಳೇರ ಎನ್ನುವವರ ವಾಸ್ತವ್ಯದ ಮನೆಯ ಮೇಲ್ಛಾವೇಣಿ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಕೆಕ್ಕೋಡ ಗ್ರಾಮದ ನಿವಾಸಿ ಯಂಕಿ ಮಾಗ್ತು ಮರಾಠಿ ಅವರ ವಾಸ್ತವ್ಯದ ಮನೆಗೆ ಕೂಡಾ ಗಾಳಿಯಿಂದಾಗಿ ಭಾಗಶಃ ಹಾನಿಯಾಗಿದೆ. ಭಾರಿ ಗಾಳಿ ಮತ್ತು ಮಳೆಗೆ ಹೆಬಳೆ ಗ್ರಾಮದ ಬಬ್ಬನಕಲ್ ಮಜಿರೆಯ ಮಾದೇವ ಮಾಸ್ತಿ ನಾಯ್ಕ ಎನ್ನುವವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಹಾರಿಹೋಗಿ ಹಾನಿಯಾಗಿದೆ. ಹೆಬಳೆ ಗ್ರಾಮದ ತೆಂಗಿನಗುAಡಿ ಮಜಿರೆಯ ನಿವಾಸಿ ದುರ್ಗಯ್ಯ ತಿಮ್ಮಪ್ಪ ಗೊಂಡ ಇವರ ವಾಸ್ತವ್ಯದ ಮನೆಯ ಮೇಲ್ಛಾವೇಣಿಯ ಮೇಲೆ ತೆಂಗಿನಮರ ಬಿದ್ದು ಭಾಗಶಃ ಹಾನಿಯಾಗಿದ್ದು, ಮನೆಯಲ್ಲಿದ್ದವರಿಗೆ ಅದೃಷ್ಟವಶಾತ್ ಅಪಾಯವಾಗಿಲ್ಲ. ಹೆಬಳೆ ಗ್ರಾಮದ ತೆಂಗಿನಗುಂಡಿ ಮಜಿರೆಯ ನಿವಾಸಿ ಯೂಸುಫ್ ಅಹಮದ್ ಇಬ್ಬು ಇವರ ವಾಸ್ತವ್ಯದ ಮನೆಯ ಮೇಲ್ಛಾವೇಣಿಯ ಮೇಲೆ ಹಲಸಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ ಇಲ್ಲಿಯೂ ಕೂಡಾ ಜನರಿಗೆ ಯಾವುದೇ ಅಪಾಯವಾಗಿಲ್ಲ. ತಲಗೋಡ ಗ್ರಾಮದ ಕೋಟಿಮನೆ ಮಜಿರೆಯ ನಿವಾಸಿಯಾದ ವಿಠ್ಠಲ ಹೊನ್ನಪ್ಪ ನಾಯ್ಕ ಇವರ ವಾಸ್ತವ್ಯದ ಮನೆಯ ಮೇಲ್ಛಾವೇಣಿಯ ಮೇಲೆ ಮಾವಿನ ಮರ ಬಿದ್ದು ಭಾಗಶಃ ಹಾನಿಯಾಗಿದ್ದು ಮನೆಯಲ್ಲಿದ್ದವರಿಗೆ ಯಾವುದೇ ರೀತಿಯ ಅಪಾಯವಿಲ್ಲದೇ ಪಾರಾಗಿದ್ದಾರೆ ಎನ್ನಲಾಗಿದೆ. ಹಾನಿಯಾದ ಪ್ರದೇಶಗಳಿಗೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಹಾನಿಯ ಅಂದಾಜು ಮಾಡಿದ್ದಾರೆ.