ಧಾರವಾಡ:
ಡಾ. ಬಿ.ಆರ್. ಅಂಬೇಡ್ಕರ್ ಧಾರವಾಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಜೀವನ ನಮಗೆ ಸಂದೇಶವಾಗಿದೆ. ಅವರ ಸಾಧನೆ ಪ್ರತಿ ನಿತ್ಯ ಮಾರ್ಗದರ್ಶನ ನೀಡುತ್ತಿವೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.ಇಲ್ಲಿಯ ಬುದ್ಧ ರಕ್ಕಿಥ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತವು ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಭೀಮ ಗಾಯನ ಉದ್ಘಾಟಿಸಿದ ಅವರು, ಈ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಇತಿಹಾಸದ ಒಂದು ಭಾಗ. ಹೀಗಾಗಿ ಅಂಬೇಡ್ಕರ್ ಅವರ ಕುರಿತು ಹೆಚ್ಚಿನ ವಿಷಯಗಳನ್ನು ಅರಿಯಬೇಕು. ಅಂಬೇಡ್ಕರ್ ಅವರಂತೆ ಪ್ರತಿ ವರ್ಷ ಸುಮಾರು 500 ವಿದ್ಯಾರ್ಥಿಗಳು ಇಲ್ಲಿ ಸಿದ್ಧರಾಗಬೇಕೆಂದರು.
ಶಿಕ್ಷಕರು, ವಿಜ್ಞಾನಿಗಳು, ಎಂಜಿನಿಯರ್ ಸೇರಿದಂತೆ ಉತ್ತಮ ಪ್ರಜೆಗಳಾಗುವ ಮೂಲಕ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಲು ವಿದ್ಯಾರ್ಥಿಗಳು ಮುಂದಾಗಬೇಕಿದೆ. ಶಾಲೆ ಬೆಳವಣಿಗೆಗೆ ಸರ್ಕಾರ ಕೂಡ ಪ್ರಾಮುಖ್ಯತೆ ನೀಡಿದೆ. ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.ಡಾ. ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಸಂತೋಷ ಜಕ್ಕಪ್ಪನವರ ಮಾತನಾಡಿ, ಬಾಂಬೆಯಲ್ಲಿ ಒಂದು ಹುಡುಗ ಪ್ರಾರಂಭಿಸಿದ ಹೋರಾಟದ ಪ್ರತಿ ಫಲವಾಗಿ ಈ ಶಾಲೆ ಆರಂಭಿಸಲಾಯಿತು. ಅಂಬೇಡ್ಕರ್ ಅವರು ಶಾಲೆ ಸ್ಥಾಪನೆಗೆ ಸಾಕಷ್ಟು ಶ್ರಮ ವಹಿಸಿದ್ದಾರೆ. ಮಾತೋಶ್ರೀ ರಮಾಬಾಯಿ ತಮ್ಮ ಆಭರಣಗಳನ್ನು ಮಾರಿ ವಿದ್ಯಾರ್ಥಿಗಳಿಗೆ ಊಟ ತಯಾರಿಸಿ ಊಣಬಡಿಸಿದರು. ಈ ಶಾಲೆಯಲ್ಲಿ ಭೀಮ ಗಾಯನ ಕಾರ್ಯಕ್ರಮ ನಡೆಯುತ್ತಿರುವ ಸಂತಸದ ವಿಷಯ ಎಂದು ಹೇಳಿದರು.
ವಾರ್ತಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ ವಾರ್ತಾ ಇಲಾಖೆಯು ಭೀಮ ಗಾಯನ ಕಾರ್ಯಕ್ರಮ ಆಯೋಜಿಸುತ್ತಿದೆ. ಅಂಬೇಡ್ಕರ್ ಅವರು ಕರ್ನಾಟಕದಲ್ಲಿ ಭೇಟಿ ನೀಡಿದ ಸುಮಾರು 10 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.
ಬುದ್ಧ ರಕ್ಕಿಥ ವಸತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಕೆ. ಹಲಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಣ್ಯರು ಬುದ್ಧ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಸಲ್ಲಿಸಿದರು. ಜಿಪಂ ಸಿಇಒ ಭುವನೇಶ ಪಾಟೀಲ ಸಂವಿಧಾನ ಪೀಠಿಕೆ ಬೋಧಿಸಿದರು. ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘದ ಕಲಾವಿದರು ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಬುದ್ಧ ರಕ್ಕಿಥ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬುದ್ಧ ವಂದನೆ ಸಲ್ಲಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಆರ್. ಸದಲಗಿ ಸ್ವಾಗತಿಸಿದರು. ನಾಗಪ್ಪ ಮಾದರ ವಂದಿಸಿದರು. ಬಸವರಾಜ ಚಿಕ್ಕೂರ ನಿರೂಪಿಸಿದರು. ಎಸ್ಪಿ ಗುಂಜನ್ ಆರ್ಯ, ಎಂ.ಬಿ. ಸಣ್ಣೇರಿ, ಮುದುಕೇಶ ಮಾದರ, ಎಸ್.ಆರ್. ಪಾಟೀಲ, ಅರ್ಜುನ ಕಟ್ಟಿಮನಿ, ಮಮತಾ, ವಿಕ್ರಮ ಹೊಸಮನಿ ಇದ್ದರು.