ಭೀಮಣ್ಣ ಖಂಡ್ರೆ ಸರಳತೆಯ ಬದುಕು ನಡೆಸಿದವರು. ಸತ್ಯ ಮತ್ತು ನಿಷ್ಠೆಯ ಮೂಲಕ ಮಾದರಿ ಜೀವನದ ಆದರ್ಶನೀಯರಾದವರು. ಅವರ ಅಗಲಿಕೆ ಸಮಾಜ ಹಾಗೂ ಸಮುದಾಯಕ್ಕೆ ಅಪಾರ ನಷ್ಟವಾಗಿದೆ
ಬಳ್ಳಾರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಗೌರವ ಅಧ್ಯಕ್ಷರಾಗಿದ್ದ ದಿ.ಡಾ.ಭೀಮಣ್ಣ ಖಂಡ್ರೆ ಸಮಾಜ ಸೇವಕರಾಗಿ ಮಾನವೀಯತೆ, ಮೌಲ್ಯಗಳ ಪ್ರತಿಪಾದಕರಾಗಿದ್ದರು ಎಂದು ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಪಂಚಾಕ್ಷರಪ್ಪ ತಿಳಿಸಿದರು.
ನಗರದ ಜಗದ್ಗುರು ಕೊಟ್ಟೂರು ಸ್ವಾಮಿ ಮಠದ ಪ್ರೌಢದೇವರಾಯ ಸಭಾ ಮಂಟಪದ ಆವರಣದಲ್ಲಿ ಲೋಕ ನಾಯಕ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಗೌರವ ಅಧ್ಯಕ್ಷ ಡಾ.ಭೀಮಣ್ಣ ಖಂಡ್ರೆ ರವರ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಭೀಮಣ್ಣ ಖಂಡ್ರೆ ಸರಳತೆಯ ಬದುಕು ನಡೆಸಿದವರು. ಸತ್ಯ ಮತ್ತು ನಿಷ್ಠೆಯ ಮೂಲಕ ಮಾದರಿ ಜೀವನದ ಆದರ್ಶನೀಯರಾದವರು. ಅವರ ಅಗಲಿಕೆ ಸಮಾಜ ಹಾಗೂ ಸಮುದಾಯಕ್ಕೆ ಅಪಾರ ನಷ್ಟವಾಗಿದೆ ಎಂದರು.
ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಎಂ. ಮಹೇಶ್ವರಯ್ಯ ಸ್ವಾಮಿ ಭೀಮಣ್ಣ ಖಂಡ್ರೆ ನೀಡಿದ ಕೊಡುಗೆ ಸ್ಮರಿಸಿದರು.ಮಹಾಸಭಾ ಪ್ರಮುಖ ಕೊಂಡಿಗಳಾದ ಎನ್. ತಿಪ್ಪಣ್ಣ, ಶ್ಯಾಮನೂರು ಶಿವಶಂಕರಪ್ಪ, ಡಾ.ಭೀಮಣ್ಣ ಖಂಡ್ರೆ ಹೀಗೆ ಸಾಲು ಸಾಲು ಮಹನೀಯರು ನಮ್ಮನ್ನು ಅಗಲಿರುವುದು ಈ ನಾಡಿಗೆ ಸಮಾಜಕ್ಕೆ ದೊಡ್ಡ ಆಘಾತ ಮತ್ತು ನೋವಿನ ಸಂಗತಿಯಾಗಿದೆ ಎಂದರು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮಗೌಡ ದರೂರು, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಸಿದ್ಧರಾಮ ಕಲ್ಮಠ ಮಾತನಾಡಿದರು.ಖಂಡ್ರೆ ಗುರುವಿರಕ್ತರನ್ನು ಒಂದುಗೂಡಿಸಿದ ಮೇರು ನಾಯಕರು. ನಮ್ಮ ಸಮಾಜದ ಏಳು ಬೀಳುಗಳನ್ನು ಕಷ್ಟ ನಿಷ್ಟೂರಗಳನ್ನು ದೌರ್ಬಲ್ಯಗಳನ್ನು ನಿಭಾಯಿಸುವ ಶಕ್ತಿ ಅವರಲ್ಲಿತ್ತು ಎಂದು ಕಲ್ಮಠ ಅವರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಲಿಂ.ಲೋಕನಾಯಕ ಡಾ.ಭೀಮಣ್ಣ ಖಂಡ್ರೆ ಅವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಮೌನಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು. ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರಾದ ಕೋಳೂರು ಚಂದ್ರಶೇಖರ ಗೌಡ, ವಕೀಲ ಕಣೇಕಲ್ ಎರಿಸ್ವಾಮಿ, ಎಚ್ ಕೆ.ಗೌರಿಶಂಕರ ಸ್ವಾಮಿ ಅವರು ಅಗಲಿದ ನಾಯಕನಿಗೆ ನುಡಿ ನಮನ ಸಲ್ಲಿಸಿದರು.ವೀರಶೈವ ಲಿಂಗಾಯತ ಮಹಾಸಭಾ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆಎಂ ಪುಟ್ಟರಾಜ, ಎಸ್ ಎಂ ನಾಗರಾಜ ಸ್ವಾಮಿ ಸಿರಿಗೇರಿ, ಡಿ ಅರುಣ್ ಕುಮಾರ್ ದಾಸಪುರ, ಮುಖಂಡರಾದ ಕೇಣಿ ಬಸವರಾಜ್, ಬಿಸ್ಲಳ್ಳಿ ಬಸವರಾಜ್, ಲಿಂಗರೆಡ್ಡಿ, ಮೌಲ್ಯ ಮಂಜುನಾಥ, ಜಾಲಿಹಾಳ್ ಶ್ರೀಧರ್, ಕೊಂಚಗೇರಿ ಮಂಜುನಾಥ, ವಿಕೆ ತಿಪ್ಪೇಶ್ ಗೌಡ ಕಪ್ಪಗಲ್, ದಿವಾಕರ ಗೌಡ, ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಈಚೆಗೆ ನಿಧನರಾದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಗೌರವ ಅಧ್ಯಕ್ಷ ಡಾ.ಭೀಮಣ್ಣ ಖಂಡ್ರೆ ಅವರಿಗೆ ಬಳ್ಳಾರಿಯ ಕೊಟ್ಟೂರು ಸ್ವಾಮಿ ಮಠದ ಸಭಾ ಮಂಟಪದಲ್ಲಿ ಶ್ರದ್ಧಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ಜರುಗಿತು.