ಕನಕಗಿರಿ/ ನವಲಿ: ₹7.44 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತಾಲೂಕಿನ ನಾನಾ ಗ್ರಾಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬುಧವಾರ ಭೂಮಿ ಪೂಜೆ ನೆರವೇರಿಸಿದರು.

ಸಮೀಪದ ಬೆನಕನಾಳ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ತಾಲೂಕಿನ ಈಚನಾಳ ಗ್ರಾಮದಿಂದ ಸೋಮನಾಳದ ವರೆಗೆ ಸಣ್ಣ ನೀರಾವರಿ ಇಲಾಖೆಯಡಿ ಸರಣಿ ಚೆಕ್ ಡ್ಯಾಂ ನಿರ್ಮಾಣಕ್ಕೆ ₹6.69 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನವಲಿ ಗ್ರಾಮದ ಜಡಿ ಸಿದ್ದೇಶ್ವರ ಮಠದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ, ಜೀರಾಳ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನ ನಿರ್ಮಾಣಕ್ಕಾಗಿ ₹25 ಲಕ್ಷ , ಬೆನಕನಾಳ ಗ್ರಾಮದ ಗಂಗಾಪರಮೇಶ್ವರಿ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ಹಾಗೂ ಇದೇ ಗ್ರಾಮ ಶರಣಬಸವೇಶ್ವರ ಸಮುದಾಯ ಭವನ ನಿರ್ಮಾಣಕ್ಕೆ ₹30 ಲಕ್ಷ ಒಟ್ಟು ₹744 ಕೋಟಿ ಅನುದಾನದಲ್ಲಿ ನಾನಾ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.

ಬಿಜೆಪಿಯವರಿಂದ ಸಚಿವರ ಗುಣಗಾನ

ತಾಲೂಕಿನ ನವಲಿ ಹಾಗೂ ಬೆನಕನಾಳ ಗ್ರಾಮದಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಲು ಆಗಮಿಸಿದ್ದಾಗ ಇಬ್ಬರು ಬಿಜೆಪಿ ಮುಖಂಡರು ಸಚಿವ ತಂಗಡಗಿ ಅವರನ್ನು ಹಾಡಿ ಹೋಗಳಿದರು. ಕೆರೆಗೆ ನೀರು ತುಂಬಿಸಿ ರೈತರ ಬಾಳು ಹಸನು ಮಾಡಿದ್ದಾರೆಂದು ಸುಳೇಕಲ್ ಗ್ರಾಪಂ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಶಿವಾನಂದ ವಂಕಲಕುಂಟಿ ಗುಣಗಾನ ಮಾಡಿದರೇ ನವಲಿ ಗ್ರಾಮದ ಬಿಜೆಪಿ ಪ್ರಭಾವಿ ಮುಖಂಡ ಜಡಿಯಪ್ಪ ಮುಕ್ಕುಂದಿ ಕ್ಷೇತ್ರದ ಅಭಿವೃದ್ಧಿಗೆ ಸಚಿವರ ಪಾತ್ರ ದೊಡ್ಡದಿದೆ. ನವಲಿ ಜನರು ಶುಭ, ಸಮಾರಂಭಗಳನ್ನು ಮಾಡಲು ಕನಕಗಿರಿ-ಕಾರಟಗಿಗೆ ತೆರಳಬೇಕಾಗಿತ್ತು. ಆದರೆ, ಸಚಿವ ತಂಗಡಗಿಯವರು ನವಲಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕೋಟಿ ನೀಡಿ ಒಳ್ಳೆಯ ಕಾರ್ಯ ಮಾಡಿದ್ದಾರೆ. ಇಂತಹ ಅನೇಕ ಜನಪರ ಕಾರ್ಯಕ್ರಮಗಳು ಆಗಿವೆ ಎಂದು ಸಚಿವ ತಂಗಡಗಿ ಅವರನ್ನು ಗುಣಗಾನ ಮಾಡಿದರು.

ಈ ವೇಳೆ ತಾಪಂ ಇಒ ರಾಜಶೇಖರ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರಣ್ಣ ನಕ್ರಳ್ಳಿ, ಲಕ್ಷ್ಮಣ ನಾಯಕ, ಗಂಗಾವತಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ನಿರ್ದೇಶಕ ರಮೇಶ ನಾಯಕ ಹುಲಿಹೈದರ, ಗಂಗಾಧರಸ್ವಾಮಿ, ವಿರೇಶ ಸಮಗಂಡಿ, ಮಲಕನಗೌಡ, ಬಸವಂತಗೌಡ, ನಾಗರಾಜ ತಳವಾರ, ಸಿದ್ರಾಮಗೌಡ ಉಪ್ಪಳ, ಶಿವರೆಡ್ಡಿ ಖ್ಯಾಡೇದ, ವಿರೂಪಣ್ಣ ಕಲ್ಲೂರು, ಆಪ್ತ ಕಾರ್ಯದರ್ಶಿ ವೆಂಕಟೇಶ ಗೋಡಿನಾಳ ಸೇರಿದಂತೆ ಇತರರು ಇದ್ದರು.