ಸಾರಾಂಶ
ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ವತಿಯಿಂದ ಇತ್ತಿಚೆಗೆ ನಿಧನರಾದ ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಸತ್ಯವನ್ನೇ ನುಡಿಯುತ್ತಾ ತತ್ವಶಾಸ್ತ್ರವನ್ನು ಬೋಧಿಸಿ, ಬೋಧಿಸಿದಂತೆಯೇ ಪ್ರಾಮಾಣಿಕವಾಗಿ ಬದುಕಿದ ಶ್ರೇಷ್ಠ ಸಾಹಿತಿ ಎಸ್.ಎಲ್. ಭೈರಪ್ಪ ಎಂದು ಎಕ್ಸ್ಪರ್ಟ್ ಕಾಲೇಜಿನ ಉಪನ್ಯಾಸಕ ಡಾ. ಶ್ರೀಕೃಷ್ಣ ಭಟ್ ಸುಣ್ಣಂಗುಳಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಏರ್ಪಡಿಸಿದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಪಾರ ಜನಪ್ರಿಯತೆ ಪಡೆದ ಮೇರು ಸಾಹಿತಿಯಾಗಿ ಮೆರೆದ ಭೈರಪ್ಪ ಅವರ ಕಾದಂಬರಿಗಳಿಗಾಗಿ ಓದುಗರು ಕಾಯುತ್ತಿದ್ದರು. ಇತರ ಅನೇಕ ಭಾಷೆಗಳಿಗೆ ಅನುವಾದಗೊಂಡು ದೇಶ ಹಾಗೂ ವಿಶ್ವದೆಲ್ಲೆಡೆ ಅವರು ಓದುಗರನ್ನು ಹೊಂದಿದ್ದರು. ಕನ್ನಡಿಗರು ಓದುವುದು ಕಡಿಮೆ ಎಂಬ ಮಾತನ್ನು ಸುಳ್ಳು ಮಾಡಿದ್ದರು. ಪ್ರಶಸ್ತಿಗಳನ್ನು ಎಂದೂ ಬಯಸಿದವರಲ್ಲ, ಅರಸಿ ಬಂದ ಪ್ರಶಸ್ತಿ ಮೊತ್ತವನ್ನೆಲ್ಲ ಅಲ್ಲಲ್ಲಿಯೇ ಸದುದ್ದೇಶಗಳಿಗೆ ದಾನಗೈದಿದ್ದರು ಎಂದು ದೃಷ್ಟಾಂತಗಳ ಮೂಲಕ ವಿವರಿಸಿದರು.ಭೈರಪ್ಪರ ನೇರ ಶಿಷ್ಯ, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಮಾತನಾಡಿ, ಭೈರಪ್ಪ ಅವರ ಅಧ್ಯಯನಶೀಲತೆ, ಸಂಶೋಧನೆ, ಕೃತಿಗಳಿಗೆ ಪೂರ್ವ ತಯಾರಿ, ಸತ್ಯ ಹೇಳುವ ಎದೆಗಾರಿಕೆ ಮುಂತಾದ ಗುಣಗಳನ್ನು ತಿಳಿಸುತ್ತಾ, ಅವರಿಂದ ತತ್ವಶಾಸ್ತ್ರದ ಪಾಠ ಹೇಳಿಸಿಕೊಂಡಿರುವುದು ಜೀವನದ ಸೌಭಾಗ್ಯ ಎಂದರು.
ಘಟಕದ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣ್ಕರ್ ಪುಷ್ಪ ನಮನ ಸಲ್ಲಿಸಿದರು. ಗೌರವ ಕಾರ್ಯದರ್ಶಿಗಳಾದ ಡಾ. ಮುರಲೀಮೋಹನ್ ಚೂಂತಾರು , ಗಣೇಶ್ ಪ್ರಸಾದ್ , ಕೋಶಾಧಿಕಾರಿ ಎನ್. ಸುಬ್ರಾಯ ಭಟ್ , ಹೇಮಲತಾ ರೇವಣ್ಕರ್ ಮತ್ತು ಅಭಿಮಾನಿಗಳು ಇದ್ದರು.