- ವಿಶ್ವ ಸೈಕಲ್ ದಿನ ಅಂಗವಾಗಿ ಜಿಲ್ಲಾಡಳಿತ ನೇತೃತ್ವದಲ್ಲಿ ಸೈಕಲ್ ಜಾಥಾ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾರ್ಥಿಗಳು, ಯುವಜನರಲ್ಲಿ ಸೈಕಲ್ ಬಳಕೆ ಹೆಚ್ಚಾಗಬೇಕು. ಇದರಿಂದ ಪರಿಸರ ರಕ್ಷಣೆ ಸಾಧ್ಯ ಎಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ್ ಹೇಳಿದರು.

ಭಾನುವಾರ ಬೆಳಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಬೈಸಿಕಲ್ ಕ್ಲಬ್, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಸಹಯೋಗದಲ್ಲಿ ವಿಶ್ವ ಸೈಕಲ್ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾವು ಸಹ ವಿದ್ಯಾರ್ಥಿ ದೆಸೆಯಲ್ಲಿ ಸೈಕಲನ್ನೇ ಬಳಸುತ್ತಿದ್ದು, ನಿತ್ಯ ಸುಮಾರು 11 ಕಿಲೋಮೀಟರ್ ದೂರ ಹೋಗಿ ಬರುತ್ತಿದ್ದುದಾಗಿ ತಿಳಿಸಿದರು.


ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಮಾತನಾಡಿ, ಸೈಕಲ್ ಬಳಸುವುದರಿಂದ ದೈಹಿಕ ಆರೋಗ್ಯ, ಇಂಧನ ಉಳಿತಾಯದಿಂದ ರಾಷ್ಟ್ರದ ಹಿತ ಹಾಗೂ ವಾಯು, ಶಬ್ದ ಮಾಲಿನ್ಯ ನಿಯಂತ್ರಣದಿಂದ ಪರಿಸರ ಸಂರಕ್ಷಣೆ ಸಾಧ್ಯವಿದೆ. ನಮ್ಮ ದೇಶದಲ್ಲಿ ವಾರ್ಷಿಕ 245 ಮಿಲಿಯನ್ ಮೆಟ್ರಿಕ್ ಟನ್ನಿನಷ್ಟು ಪೆಟ್ರೋಲಿಯಂ ಬಳಕೆಯಾಗುತ್ತಿದೆ. ಪ್ರತಿನಿತ್ಯ ದೇಶದಲ್ಲಿ 6 ಕೋಟಿ ಬ್ಯಾರಲ್‌ಗಳಷ್ಟು ಪೆಟ್ರೋಲಿಯಂ ಖರ್ಚಾಗುತ್ತಿದೆ. ಇದರಲ್ಲಿ ಶೇ.62ರಷ್ಟು ಪೆಟ್ರೋಲ್ ಬಳಕೆ ದ್ವಿಚಕ್ರ ವಾಹನಗಳಿಂದ ಆಗುತ್ತಿದೆ. ವಾರದಲ್ಲಿ ಒಂದು ದಿನವಾದರೂ ಸ್ಕೂಟರ್‌, ಬೈಕ್ ಬದಲು ಸೈಕಲ್ ಬಳಸುವುದರಿಂದ ವಾರ್ಷಿಕ 320 ಕೋಟಿ ಬ್ಯಾರಲ್‌ಗಳಷ್ಟು ಪೆಟ್ರೋಲ್ ಉಳಿಸಬಹುದು. ಸೈಕಲ್ ಬಳಕೆಯಿಂದ ಸಮಯ ವ್ಯರ್ಥವಾಗುತ್ತದೆ ಎಂಬ ಭಾವನೆ ತಪ್ಪು, ಸಮಯದ ಸದ್ಬಳಕೆ ಅರಿವು ಉಂಟಾಗುತ್ತದೆ ಎಂದರು.

ಈ ಸಂದರ್ಭ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾ ದೇವಿ, ಗ್ರಾಹಕರ ಕೋರ್ಟಿನ ನ್ಯಾಯಾಧೀಶರಾಗಿದ್ದ ಶಿವಕುಮಾರ, ದಾವಣಗೆರೆ ಬೈಸಿಕಲ್ ಕ್ಲಬ್ ಕಾರ್ಯದರ್ಶಿ ಕೆ.ಮಹೇಶ್, ಸದಸ್ಯ ಕಿರಣ್ ಬಾಳೆಹೊಲದ, ಪ್ರಸಾದ್, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಕಾರ್ಯದರ್ಶಿ ಎನ್.ಕೆ. ಕೊಟ್ರೇಶ್, ಸದಸ್ಯರಾದ ಚಂದ್ರಮೌಳಿ, ಮಧುಸೂದನ್, ಚನ್ನಬಸವ ಶೀಲವಂತ್, ಬ್ರಿಜೇಶ್, ಪರೀಕ್ಷಿತ್, ಕ್ರೀಡಾ ಇಲಾಖೆಯ ಸೂಪರಿಂಟೆಂಡೆಂಟ್ ಅರ್ಪಿತಾ, ಖೋಖೋ ತರಬೇತುದಾರ ಜೆ.ರಾಮಲಿಂಗಪ್ಪ, ಮಹಮ್ಮದ್ ಬಾಷ, ಅಶೋಕ್, ಪೊಲೀಸ್ ಸಿಬ್ಬಂದಿ, ಇತರರು ಇದ್ದರು.

ಸೈಕಲ್ ಜಾಥಾ ಜಿಲ್ಲಾ ಕ್ರೀಡಾಂಗಣದಿಂದ ಆರಂಭಗೊಂಡು ಬಾಪೂಜಿ ಆಸ್ಪತ್ರೆ, ಡೆಂಟಲ್ ಕಾಲೇಜು ರಸ್ತೆ, ಕುವೆಂಪು ಕನ್ನಡ ಭವನ ರಸ್ತೆ, ವಿದ್ಯಾನಗರ, ಹದಡಿ ರಸ್ತೆ, ವಿದ್ಯಾರ್ಥಿ ಭವನ ಸರ್ಕಲ್, ಜಿಲ್ಲಾಸ್ಪತ್ರೆ, ಎಂ.ಸಿ.ಮೋದಿ ವೃತ್ತದಿಂದ ಮರಳಿ ಜಿಲ್ಲಾ ಕ್ರೀಡಾಂಗಣ ತಲುಪಿತು.

- - -

-7ಕೆಡಿವಿಜಿ31:

ದಾವಣಗೆರೆಯಲ್ಲಿ ವಿಶ್ವ ಬೈಸಿಕಲ್ ದಿನ ಅಂಗವಾಗಿ ನಡೆದ ಸೈಕಲ್ ಜಾಥಾಗೆ ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಚಾಲನೆ ನೀಡಿದರು.