ಮೇಳದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿರುವುದು ವಿಶೇಷ. ಕೇವಲ ಉನ್ನತ ವ್ಯಾಸಂಗ ಮಾಡಿದವರಿಗಷ್ಟೇ ಸೀಮಿತವಾಗದೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಪ್ಲೊಮೋ, ಐ.ಟಿ.ಐ ಇನ್ನಿತರ ಶಿಕ್ಷಣ ಪಡೆದವರಿಗೂ ವಿಶೇಷವಾಗಿ ವಿಕಲಚೇತನರಿಗೂ ಉದ್ಯೋಗ ಕಲ್ಪಿಸಲು ಸಂಸ್ಥೆ ಕ್ರಮ ವಹಿಸಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಬಿಜೆಪಿ ಮುಖಂಡ ಮತ್ತು ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಏ.21ರಂದು ಗ್ರಾಮೀಣ ಭಾಗದ ನಿರುದ್ಯೋಗಿ ಯುವಜನತೆಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಉದ್ಯೋಗ ಮೇಳದ ಪೋಸ್ಟರ್‌ ಬಿಡುಗಡೆಗೊಳಿಸಿ ಮಾತನಾಡಿ, ಶ್ರೀನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಅಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗಕಾಂಕ್ಷಿಗಳು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಮಾತನಾಡಿ, ತಮ್ಮ ಹುಟ್ಟುಹಬ್ಬದ ಅಂಗವಾಗಿ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಉದ್ಯೋಗ ಮೇಳ ಆಯೋಜಿಸಿದ್ದಾರೆ. ಈಗಾಗಲೇ ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮುಂದಾಗಿವೆ ಎಂದರು.

ಮೇಳದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಲು ಮುಂದಾಗಿರುವುದು ವಿಶೇಷ. ಕೇವಲ ಉನ್ನತ ವ್ಯಾಸಂಗ ಮಾಡಿದವರಿಗಷ್ಟೇ ಸೀಮಿತವಾಗದೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಪ್ಲೊಮೋ, ಐ.ಟಿ.ಐ ಇನ್ನಿತರ ಶಿಕ್ಷಣ ಪಡೆದವರಿಗೂ ವಿಶೇಷವಾಗಿ ವಿಕಲಚೇತನರಿಗೂ ಉದ್ಯೋಗ ಕಲ್ಪಿಸಲು ಸಂಸ್ಥೆ ಕ್ರಮ ವಹಿಸಿರುವುದಾಗಿ ಹೇಳಿದರು.

ಉತ್ಪಾದನೆ ವಲಯ, ಬ್ಯಾಂಕಿಂಗ್, ಮಾಹಿತಿ ತಂತ್ರಜ್ಞಾನ, ಕೈಗಾರಿಕೆ, ಗಾಮೆಂಟ್ಸ್, ಸೇವಾ ವಲಯ, ಪ್ರವಾಸೋದ್ಯಮ, ಹಣಕಾಸು ಹತ್ತು ಹಲವು ವಿಭಾಗಗಳಲ್ಲಿ ಅಭ್ಯರ್ಥಿಗಳು ತಮ್ಮ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ಪಡೆಯಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ವಿತರಿಸಲಾಗುವುದು ಎಂದರು.

18 ವರ್ಷದಿಂದ 30 ವರ್ಷದೊಳಗಿನ ಯುವಕ ಹಾಗೂ ಯುವತಿ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶೈಕ್ಷಣಿಕ ಅಗತ್ಯ ದಾಖಲಾತಿಗಳೊಂದಿಗೆ ಉದ್ಯೋಗ ಮೇಳದ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು, ಮೊಬೈಲ್ ಸಂಖ್ಯೆ ಸುಧಾಕರ್ (8792143221), ದೇವರಾಜ್ (7996163105) ಹಾಗೂ (7899488488) ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು ಎಂದರು.

ಈ ವೇಳೆ ಮುಖಂಡರಾದ ಮನುಕುಮಾರ್, ಕಾಂತರಾಜು, ಅಭಿಷೇಕ್, ಕುಮಾರ್ ಇತರರಿದ್ದರು.