ಜನಪರ ರಾಜಕಾರಣಿ, ಶಾಸಕ ಕೃಷ್ಣಮೂರ್ತಿಯವರಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿ: ಚೇತನ್ ದೊರೆರಾಜು
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ಎ.ಆರ್.ಕೆ. ಅಭಿಮಾನಿ ಬಳಗದ ವತಿಯಿಂದ ಸೋಮವಾರ ಒತ್ತಾಯಿಸಲಾಯಿತು.
ತಾಲೂಕಿನ ಉತ್ತಂಬಳ್ಳಿ ಗ್ರಾಮದಿಂದ ಮುಡಿಗುಂಡ, ಬಾಪುನಗರದ ಮೂಲಕ ಕೊಳ್ಳೇಗಾಲದ ಅಂಬೇಡ್ಕರ್ ವೃತ್ತದವರೆಗೂ ಬೈಕ್ ರ್ಯಾಲಿಯು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್ ದೊರೆರಾಜು ನೇತೃತ್ವದಲ್ಲಿ ಜರುಗಿತು.ಮೊದಲಿಗೆ ಉತ್ತಂಬಳ್ಳಿ ಬಳಿ ನಡೆದ ಬೈಕ್ ರ್ಯಾಲಿಗೆ ಚೇತನ್ ದೊರೆರಾಜು ಚಾಲನೆ ನೀಡಿ ಮಾತನಾಡಿ, ಎ.ಆರ್. ಕೃಷ್ಣಮೂರ್ತಿ ಅವರು ಜನಪರ ರಾಜಕಾರಣಿ, ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಅಭಿವೃದ್ಧಿಗಾಗಿ ₹580 ಕೋಟಿ ಅನುದಾನ ತಂದಿದ್ದಾರೆ. ಇದನ್ನು ಮನಗಂಡು ಹೈಕಮಾಂಡ್ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಅಭಿಮಾನಿ ಸಂಘದ ಅಧ್ಯಕ್ಷ ಕಂದಳ್ಳಿ ನಂಜುಂಡಸ್ವಾಮಿ ಮಾತನಾಡಿ, ಬಿ. ರಾಚಯ್ಯ ಅವರು ಸಮರ್ಥ ಹಾಗೂ ಜನಪರ ರಾಜಕಾರಣಿ, ಅದೇ ರೀತಿ ಅವರ ಪುತ್ರ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಅನುಭವಿ ರಾಜಕಾರಣಿಗಳಾಗಿ, ಕೊಳ್ಳೇಗಾಲ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಲಿಗೆ ಚಕ್ರಕಟ್ಟಿಕೊಂಡು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ, ಕೊಳ್ಳೇಗಾಲ ಕ್ಷೇತ್ರ ಉದಯವಾದ ಬಳಿಕ ಕ್ಷೇತ್ರದಲ್ಲಿ ಆರಿಸಿ ಬಂದ ಯಾವೊಬ್ಬ ರಾಜಕಾರಣಿಗೂ ಸಚಿವ ಸ್ಥಾನ ನೀಡಿಲ್ಲ, ಈ ಭಾಗದ ದಲಿತ ನಾಯಕರೂ, ರಾಚಯ್ಯ ಅವರ ಸುಪುತ್ರರಾದ ಕೃಷ್ಣಮೂರ್ತಿ ಅವರಿಗೆ ಹೈಕಮಾಂಡ್ ಮಂತ್ರಿ ಸ್ಥಾನ ನೀಡಬೇಕು, ಅವರು ರಾಜಕೀಯ ಜೀವನದಲ್ಲಿ ಕಳಂಕ ರಹಿತ ರಾಜಕಾರಣಿಯಾಗಿದ್ದಾರೆ. ಇದನ್ನು ಹೈಕಮಾಂಡ್ ಮನಗಾಣಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಪ್ರಧಾನ ಕಾರ್ಯದರ್ಶಿ ಬಸ್ತೀಪುರ ರವಿ, ಯಳಂದೂರು ಆರೋಗ್ಯ ರಕ್ಷಾ ಸಮತಿ ಸದಸ್ಯ ದುಗ್ಗಟ್ಟಿ ಮಾದೇಶ್, ನಗರಸಭೆ ನಾಮ ನಿರ್ದೇಶಿತ ಸದಸ್ಯ ಅನ್ಸರ್ ಬೇಗ್, ದೇವಾನಂದ, ಸ್ವಾಮಿ ನಂಜಪ್ಪ ಮುಖಂಡರಾದ ಚಿನ್ನಸ್ವಾಮಿ ಮಾಳಿಗೆ, ಹರಳೆ ನಾಗರಾಜು, ಗೊಬ್ಬಳಿಪುರ ರಾಚಯ್ಯ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜೇಂದ್ರ, ಹನೂರು ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ ಮಾದೇಶ್, ಯುತ್ ಕಾಂಗ್ರೆಸ್ ಉಪಾಧ್ಯಕ್ಷ ಶಿವರಾಜು, ಮದ್ದೂರು ಶಿವಮೂರ್ತಿ, ಮದ್ದೂರು ಅಭಿಮನ್ಯು ಸೇರಿ ಇನ್ನಿತರರಿದ್ದರು.
---------ಕೃಷ್ಣಮೂರ್ತಿಯವರು ಸಜ್ಜನ, ಧೀಮಂತ ರಾಜಕಾರಣಿ ಎಂದೇ ಖ್ಯಾತರಾದ ದಿ. ಬಿ. ರಾಚಯ್ಯ ಅವರ ಸುಪುತ್ರರು. ಅವರಿಗೆ ಹೈಕಮಾಂಡ್ ಮಂತ್ರಿ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುವ ಶಕ್ತಿ ಇದೆ. ಇದನ್ನು ಮುಖ್ಯಮಂತ್ರಿಗಳು ಮನಗಾಣಬೇಕು, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ದೃಷ್ಟಿಯಿಂದ ಹೈಕಮಾಂಡ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು.
- ಜಿ. ಮಾದೇಶ್. ಯುವ ನಾಯಕರು. ದುಗ್ಗಟ್ಟಿ ಗ್ರಾಮ