ಹಾಸನ: ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ೪೪ ಸಿಆರ್‌ಪಿಎಫ್ ಯೋಧರ ಸ್ಮರಣಾರ್ಥವಾಗಿ ನಿವೃತ್ತ ಅರೆಸೇನಾ ಪಡೆ ಒಕ್ಕೂಟದ ನೇತೃತ್ವದಲ್ಲಿ ಶನಿವಾರ ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ದೇಶಭಕ್ತಿ ಘೋಷಣೆಗಳು, ತ್ರಿವರ್ಣ ಧ್ವಜಗಳ ರಭಸ ಹಾಗೂ ಯೋಧರ ಭಾವಚಿತ್ರಗಳೊಂದಿಗೆ ನಗರದಲ್ಲಿ ರ್ಯಾಲಿ ಸಂಚರಿಸಿ ಜನರಲ್ಲಿ ದೇಶಪ್ರೇಮದ ಅರಿವು ಮೂಡಿಸಿತು.

ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ವಿ. ನಾಗೇಶ್ ಮಾತನಾಡಿ, ೨೦೧೯ರ ಫೆಬ್ರವರಿ ೧೪ರಂದು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಯೋಧರ ಬೆಂಗಾವಲು ವಾಹನಗಳ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ ೪೪ ಯೋಧರು ಪ್ರಾಣ ತ್ಯಾಗ ಮಾಡಿದರು. ಆ ದುರ್ಘಟನೆಯನ್ನು ಸ್ಮರಿಸಿ, ದೇಶರಕ್ಷಣೆಗೆ ಬಲಿದಾನವಾದ ವೀರರಿಗೆ ಕೃತಜ್ಞ ನಮನ ಸಲ್ಲಿಸುವುದು ಮತ್ತು ಯುವಪೀಳಿಗೆಗೆ ದೇಶಭಕ್ತಿಯ ಸಂದೇಶ ತಲುಪಿಸುವುದೇ ಈ ರ್ಯಾಲಿಯ ಉದ್ದೇಶ ಎಂದು ಹೇಳಿದರು. ಯೋಧರ ತ್ಯಾಗವು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು, ದೇಶದ ಭದ್ರತೆ ಮತ್ತು ಏಕತೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಒಕ್ಕೂಟದ ಉಪಾಧ್ಯಕ್ಷ ಎಂ.ಜಿ. ರಮೇಶ್ ಮಾತನಾಡಿ, ರಾಲಿ ಡೇರಿ ಸರ್ಕಲ್‌ನಿಂದ ಆರಂಭವಾಗಿ ತನ್ನಿ-ತ್ರಿಷಾ ಕಲ್ಯಾಣ ಮಂಟಪ, ಸುಬೇದಾರ್‌ ನಾಗೇಶ್ ವೃತ್ತ, ಸಾಲಗಾಮೆ ರಸ್ತೆ, ಮಲೆನಾಡು ಎಂಜಿನಿಯರಿಂಗ್ ಕಾಲೇಜು, ಸಹ್ಯಾದ್ರಿ ಸರ್ಕಲ್, ಹೇಮಾವತಿ ಪ್ರತಿಮೆ, ಎನ್. ಆರ್‌. ಸರ್ಕಲ್, ಡಿಸಿ ಕಚೇರಿ, ರೈಲ್ವೆ ನಿಲ್ದಾಣ ಮಾರ್ಗವಾಗಿ ಮತ್ತೆ ಡೇರಿ ಸರ್ಕಲ್ ಮೂಲಕ ಕೆಂಚಟಹಳ್ಳಿಯ ನಿವೃತ್ತ ಸೈನಿಕರ ಭವನದವರೆಗೆ ಸಾಗಿತು ಎಂದು ಹೇಳಿದರು. ಫೆಬ್ರವರಿ ೧೪ ಅನ್ನು ಕೇವಲ ಪ್ರೇಮಿಗಳ ದಿನವನ್ನಾಗಿ ನೋಡದೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುವ ದಿನವನ್ನಾಗಿ ಆಚರಿಸಬೇಕು ಎಂದು ಮನವಿ ಮಾಡಿದರು.ರ್ಯಾಲಿಯಲ್ಲಿ ಜಿಲ್ಲೆಯ ನಿವೃತ್ತ ಸೈನಿಕರು, ಪ್ಯಾರಾಮಿಲಿಟರಿ ಪಡೆಗಳ ಮಾಜಿ ಯೋಧರು ಹಾಗೂ ದೇಶಭಕ್ತರು ಭಾಗವಹಿಸಿದರು. ಸಿಆರ್‌ಪಿಎಫ್ ಸೇರಿ ಬಿಎಸ್‌ಎಫ್, ಸಿಐಎಸ್‌ಎಫ್, ಎಸ್‌ಎಸ್‌ಬಿ ಮೊದಲಾದ ಕೇಂದ್ರ ಸಶಸ್ತ್ರ ಪಡೆಗಳ ಮಾಜಿ ಯೋಧರು ಹಾಜರಿದ್ದು, ಯೋಧರ ಏಕತೆ ಮತ್ತು ಶೌರ್ಯವನ್ನು ಸ್ಮರಿಸಿದರು. ಈ ಬೈಕ್ ರ್ಯಾಲಿ ನಗರದಲ್ಲಿ ದೇಶಭಕ್ತಿ ವಾತಾವರಣವನ್ನು ಸೃಷ್ಟಿಸಿ, ಯೋಧರ ತ್ಯಾಗವನ್ನು ಜನಮನದಲ್ಲಿ ಮತ್ತೊಮ್ಮೆ ಜೀವಂತಗೊಳಿಸಿತು. ರಾಷ್ಟ್ರದ ಭದ್ರತೆಗಾಗಿ ಪ್ರಾಣ ಅರ್ಪಿಸಿದ ವೀರಯೋಧರ ಸ್ಮರಣೆ, ಯುವಪೀಳಿಗೆಗೆ ದೇಶಸೇವೆಯ ದಿಕ್ಕು ತೋರಿಸುವ ಪ್ರೇರಣೆಯಾಗಿ ಮೂಡಿಬಂತು.

ಈ ವೇಳೆ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ಎ.ಎಸ್. ಪ್ರದೀಪ್ ಸಾಗರ್, ನಾರಾಯಣಪ್ಪ, ನಾಗಪ್ಪ, ಸಿಆರ್‌ಪಿಎಫ್ ಅಧ್ಯಕ್ಷ ಎಚ್. ಕುಮಾರ್, ಕಾರ್ಯದರ್ಶಿ ಎಚ್.ಆರ್‌. ವಿಜಯಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.