ಕನ್ನಡಪ್ರಭ ವಾರ್ತೆ ಶಿರಾ
ತಾಲೂಕಿನ ಪ್ರತಿ ಗ್ರಾಮಗಳಿಗೂ ನೀರಾವರಿ ಸೌಲಭ್ಯ ಒದಗಿಸಬೇಕು ಎಂಬ ಉದ್ದೇಶದಿಂದ ಬಿಜೆಪಿ ಪಕ್ಷದ ವತಿಯಿಂದ ನೀರಾವರಿ ಹೋರಾಟ ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು.ಅವರು ನಗರದ ಸೇವಾ ಸದನದಲ್ಲಿ ಶಿರಾ ತಾಲೂಕಿನ ಕಳ್ಳಂಬೆಳ್ಳ, ಗೌಡಗೆರೆ, ಕಸಬಾ, ಹುಲಿಕುಂಟೆ ಹೋಬಳಿಗಳ ರೈತರೊಂದಿಗೆ ನೀರಾವರಿ ಹೋರಾಟದ ಬಗ್ಗೆ ಪೂರ್ವಭಾವಿ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ೧೨ರಂದು ನಮ್ಮ ಹೋರಾಟ ಪ್ರಾರಂಭವಾಗುತ್ತದೆ. ತಾಲೂಕಿನ ತಾವರೆಕೆರೆಯಿಂದ ಭೂತಪ್ಪನಗುಡಿ, ಗೌಡಗೆರೆ, ಚಂಗಾವರ ಗ್ರಾಮಗಳ ಮೂಲಕ ಒಂದು ತಂಡ ಬೈಕ್ ರ್ಯಾಲಿ ಮೂಲಕ ಪಟ್ಟನಾಯಕನಹಳ್ಳಿಗೆ ಕ್ರಾಸ್ಗೆ ಬರುತ್ತದೆ. ಹಾಗೂ ಹುಲಿಕುಂಟೆ ಹೋಬಳಿಯಿಂದ ಒಂದು ತಂಡ ಪಟ್ಟನಾಯಕನಹಳ್ಳಿ ಕ್ರಾಸ್ ಗೆ ಬರುತ್ತದೆ. ಈ ಎರಡು ತಂಡಗಳು ನಂತರ ಶಿರಾಕ್ಕೆ ಬಂದು ಶಿರಾ ತಾಲೂಕು ಕಚೇರಿಗೆ ಮನವಿ ಸಲ್ಲಿಸುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಚಿಕ್ಕಣ್ಣ, ಉಪಾಧ್ಯಕ್ಷ ಮದ್ದೆವಳ್ಳಿ ರಾಮಕೃಷ್ಣ, ಶಿರಾ ಗ್ರಾಮಾಂತರ ಅಧ್ಯಕ್ಷ ಈರಣ್ಣ ಪಟೇಲ್, ನಿವೃತ್ತ ಎಇಇ ಜಯರಾಮಯ್ಯ, ಮುಖಂಡರಾದ ಮಹಾಂತೇಶ್, ಸ್ನೇಹಪ್ರಿಯ ಶಿವು, ನಾಗರಾಜ್ ಗೌಡ, ಡಿ.ಎಚ್.ಗೌಡಪ್ಪ, ಬೊಪ್ಪರಾಯಪ್ಪ, ರಾಜಣ್ಣ, ಲೋಕೇಶ್, ನಾದೂರು ಕುಮಾರ್, ರಂಗಾಶಮಣ್ಣ, ಜಯರಾಮಯ್ಯ, ಮೂಗನಹಳ್ಳಿ ರಾಮು ಸೇರಿದಂತೆ ಹಲವರು ಹಾಜರಿದ್ದರು.