ಪೂರ್ವ ಪ್ರಾಥಮಿಕ ಹಂತದಿಂದಲೇ ಕನ್ನಡದ ಸಂವರ್ಧನೆ ಆಗಬೇಕಾಗಿದೆ. ದ್ವಿಭಾಷಾ, ತ್ರಿಭಾಷಾ ಗೊಂದಲಗಳಿಗೆ ತೆರೆಬಿದ್ದು ಕನ್ನಡಕ್ಕೆ ಆದ್ಯತೆ ಸಿಗಬೇಕು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.

ಹಾವೇರಿ:ಪೂರ್ವ ಪ್ರಾಥಮಿಕ ಹಂತದಿಂದಲೇ ಕನ್ನಡದ ಸಂವರ್ಧನೆ ಆಗಬೇಕಾಗಿದೆ. ದ್ವಿಭಾಷಾ, ತ್ರಿಭಾಷಾ ಗೊಂದಲಗಳಿಗೆ ತೆರೆಬಿದ್ದು ಕನ್ನಡಕ್ಕೆ ಆದ್ಯತೆ ಸಿಗಬೇಕು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದರು.ಇಲ್ಲಿನ ದಾನೇಶ್ವರಿ ನಗರದಲ್ಲಿರುವ ಪದವಿ ಪೂರ್ವ ನೌಕರರ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸಂಯುಕ್ತ ಆಶ್ರಯದಲ್ಲಿ `ಕನ್ನಡ ಸಂವರ್ಧನೆ : ವರ್ತಮಾನದ ಸವಾಲುಗಳು'''''''' ಎಂಬ ಒಂದು ದಿನದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಉತ್ತರಕ್ಕೆ ಬೇಕಾದ ಹಿಂದಿಮಯ ತ್ರಿಭಾಷಾ ಸೂತ್ರ, ತಮಿಳರಿಗೆ ಬೇಕಾದ ದ್ವಿಭಾಷಾ ಸೂತ್ರಗಳ ಚರ್ಚೆ ಆಗಬೇಕಾಗಿದೆ. ಒಂದೂವರೆ ಲಕ್ಷ ವಿದ್ಯಾರ್ಥಿಗಳು ಕನ್ನಡದಲ್ಲಿಯೇ ಅನುತ್ತೀರ್ಣರಾಗುತ್ತಾರೆ. ಇದಕ್ಕೆ ಕಾರಣವನ್ನು ಹುಡುಕಿ, ನ್ಯೂನತೆಗಳನ್ನು ಸರಿ ಮಾಡಲು ನಿರಂಜನಾರಾಧ್ಯ ಅವರ ಸಮಿತಿ ರಚಿಸಲಾಗಿದ್ದು, ಸದ್ಯದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಪ್ರಾಧಿಕಾರದ ಉದ್ದೇಶ ಶಿಕ್ಷಣ ಕ್ರಮಕ್ಕೆ ಕನ್ನಡ ಕಲಿಕೆಗೆ ಆದ್ಯ ದೊರಕಿಸುವುದೇ ಆಗಿದೆ ಎಂದರು.ನಲಿಕಲಿ ಅಂತಹ ಉತ್ತಮ ಶಿಕ್ಷಣ ವಿಧಾನ ಕರ್ನಾಟಕದಲ್ಲಿ ವಿಫಲವಾಗಿದೆ. ಕಾರಣ 50 ವರ್ಷಗಳ ಹಿಂದಿನ ಶಿಕ್ಷಣ ಕಲಿಕಾ ವಿಧಾನವೇ ಕಾರಣ. ನಲಿಕಲಿ ಒಂದು ಅತ್ಯುತ್ತಮ ಯೋಜನೆಯಾಗಿದ್ದರೂ ಸೋಲಲು ಕಾರಣಗಳನ್ನು ಹುಡುಕ ಬೇಕಾಗಿದೆ. ನನಗೆ ಪೊಲೀಸ್ ಕಾವಲುಗಾರರನ್ನು ಕೊಟ್ಟಿದ್ದಾರೆ, ಕನ್ನಡಕ್ಕೆ ಕಾವಲುಗಾರ ಬೇಕೇ ಹೊರತು ಪ್ರಾಧಿಕಾರಕ್ಕೆ ಬೇಕಾಗಿಲ್ಲ ಎಂದು ನುಡಿದರು.ಪ್ರಾಧಿಕಾರದ ಸದಸ್ಯ ಡಾ. ಎ.ಬಿ. ರಾಮಚಂದ್ರಪ್ಪ ಮಾತನಾಡಿ, ಕನ್ನಡ ನಾಡಿನಲ್ಲಿರುವ ಉಪಭಾಷೆಗಳೇ ಕನ್ನಡದ ಶಕ್ತಿಯಾಗಿವೆ. ಭಾಷೆಯನ್ನು ಸಂವರ್ಧಿಸಲು ದೈವಾರಾಧನೆಯ ಅಗತ್ಯವಿಲ್ಲ. ಕನ್ನಡವನ್ನು ಅನುಷ್ಠಾನಗೊಳಿಸಲು ಶಕ್ತಿಯನ್ನು ಕಂಡುಕೊಳ್ಳಬೇಕಾಗಿದೆ. ಕರ್ನಾಟಕದಲ್ಲಿ ಕನ್ನಡ ಮಾತನಾಡುವವರು ಕಡಿಮೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಡಾ. ಚಾಮರಾಜ ಕಮ್ಮಾರ, ಜಿ.ಎಂ. ಓಂಕಾರಣ್ಣನವರ, ಡಾ. ಪುಷ್ಪಾವತಿ ಶಲವಡಿಮಠ, ಕುಮಾರ ಮಡಿವಾಳರ, ಹೊನ್ನಪ್ಪ ಹೊನ್ನಪ್ಪನವರ ಇತರರಿದ್ದರು.