ಸಾರಾಂಶ
ಬಾಗಲಕೋಟೆ ತಾಲೂಕಿನ ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದಲ್ಲಿ ಮಂಗಳವಾರ ಲಿಂ.ರುದ್ರಮುನಿ ಶಿವಾಚಾರ್ಯರ ನೂತನ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ವೈಭವಯುತವಾಗಿ ಜರುಗಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ತಾಲೂಕಿನ ಬಿಲ್ ಕೆರೂರಿನ ಬಿಲ್ವಾಶ್ರಮ ಹಿರೇಮಠದಲ್ಲಿ ಮಂಗಳವಾರ ಲಿಂ.ರುದ್ರಮುನಿ ಶಿವಾಚಾರ್ಯರ ನೂತನ ರಥೋತ್ಸವ ಭಕ್ತರ ಹರ್ಷೋದ್ಘಾರದ ಮಧ್ಯೆ ವೈಭವಯುತವಾಗಿ ಜರುಗಿತು.ಪ್ರಥಮ ಬಾರಿಗೆ ನಡೆದ ಅದ್ಧೂರಿ ರಥೋತ್ಸವಕ್ಕೆ ಉಜ್ಜಯನಿ, ಕಾಶೀ ಜಗದ್ಗುರುಗಳು ಸೇರಿ ಅನೇಕ ಜನ ಮಠಾಧೀಶರು, ಅಪಾರ ಸಂಖ್ಯೆಯ ಜನಸ್ತೋಮ ಸಾಕ್ಷಿಯಾದರು. ರಥವನ್ನು ಉಜ್ಜಯನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು, ಕಾಶೀ ಪೀಠದ ಚಂದ್ರಶೇಖರ ಶಿವಾಚಾರ್ಯರು ಲೋಕಾರ್ಪಣೆಗೊಳಿಸಿದರು. ಶ್ರೀಮಠದ ಸಿದ್ಧಲಿಂಗ ಶಿವಾಚಾರ್ಯರು, ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಶಿವಗಂಗೆ, ಮುತ್ತತ್ತಿ, ನಿಡ ಗುಂದಿ, ಬೀಳಗಿ, ಬಾಗೇವಾಡಿ ಶ್ರೀ ಗಳು, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವಿವಿಧ ಗ್ರಾಮಗಳಿಂದ ರಥದ ಹಗ್ಗ, ಕಳಸ, ಬಾಜಾ ಭಜಂತ್ರಿ, ಬಾಳೆಕಂಬ, ನಂದಿಕೋಲುಗಳನ್ನು ಮೆರವಣಿಗೆ ಮೂಲಕ ಶ್ರೀಮಠಕ್ಕೆ ತರಲಾಯಿತು. ಸಾಯಂಕಾಲ 5-30 ಗಂಟೆಗೆ ಶ್ರೀಮಠದ ಆವರಣದಲ್ಲಿ ನಿರ್ಮಿಸಲಾದ ನೂತನ ರಥ ಬೀದಿಯಲ್ಲಿ ರಥೋತ್ಸವ ಜರುಗಿತು.ಭಕ್ತ ಸಮೂಹ ತೇರು ಸಾಗಿ ಬರುತ್ತಿದ್ದಂತೆ ಉತ್ತತ್ತಿ, ಹೂವು, ಹಣ್ಣು ಎಸೆದು ಹರಕೆ ತೀರಿಸಿದರು. ಬಿಲ್ ಕೆರೂರ, ಭಗವತಿ, ನಾಯನೇಗಲಿ, ವಿಜಯಪುರ, ಬೇವೂರ, ಹಳ್ಳೂರ, ರಾಂಪುರ, ಬೆನಕಟ್ಟಿ ಮತ್ತಿತರ ಕಡೆಗಳಿಂದ ಭಕ್ತರು ಆಗಮಿಸಿದ್ದರು.