ಜೀವವೈವಿಧ್ಯ ಸಂರಕ್ಷಣೆಯ ಕಾರ್ಯ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಭವಿಷ್ಯತ್ತಿಗಾಗಿ ಅದರ ಸಂರಕ್ಷಣೆ ಮಾಡಬೇಕಾಗಿದೆ.
ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ ನೂತನ ಸದಸ್ಯರ ಜೊತೆ ಸಂವಾದಕನ್ನಡಪ್ರಭ ವಾರ್ತೆ ಯಲ್ಲಾಪುರ
ಜೀವವೈವಿಧ್ಯ ಸಂರಕ್ಷಣೆಯ ಕಾರ್ಯ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಭವಿಷ್ಯತ್ತಿಗಾಗಿ ಅದರ ಸಂರಕ್ಷಣೆ ಮಾಡಬೇಕಾಗಿದೆ. ಆ ನೆಲೆಯಲ್ಲಿ ಮಂಡಳಿ ನಿಮ್ಮೊಂದಿಗೆ ಸದಾ ನಿಲ್ಲುತ್ತದೆ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಜಗದೀಶ ವಡ್ನಾಳ ಹೇಳಿದರು.ಸೋಮವಾರ ಪಟ್ಟಣದ ತಾಪಂ ಸಭಾಭವನದಲ್ಲಿ ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿಯ ನೂತನ ಸದಸ್ಯರ ಜೊತೆ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಪರೂಪದ ಸಸ್ಯ ಪ್ರಬೇಧಗಳು, ಔಷಧೀಯ ಸಸ್ಯಗಳ ಕುರಿತು ದಾಖಲೀಕರಣ ಆಗಬೇಕು. ಅವುಗಳ ಸುಸ್ಥಿರ ಬಳಕೆ, ಸಂರಕ್ಷಣೆಗೆ ಆದ್ಯತೆ ನೀಡಬೇಕು. ಜತೆಗೆ ಅಂತಹ ಗಿಡ-ಮರಗಳನ್ನು ಹೊಸದಾಗಿ ಬೆಳೆಸುವ ಕಾರ್ಯವೂ ಈ ಸಮಿತಿಗಳ ಮೂಲಕ ಆಗಬೇಕು ಎಂದ ಅವರು, ಅಭಿವೃದ್ಧಿಯೊಂದೇ ಮುಖ್ಯವಾಗಬಾರದು. ನಮಗೆ ಮುಖ್ಯವಾದದ್ದು ಶುದ್ದ ಗಾಳಿ, ಬೆಳಕು, ನೀರು. ಮುಂದಿನ ಪೀಳಿಗೆಗಾಗಿ ಅದನ್ನು ಉಳಿಸಿ, ಬೆಳೆಸುವ ಕಾರ್ಯ ನಮ್ಮೆಲ್ಲರ ಮೇಲಿದೆ ಎಂದರು.ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಸಮಿತಿಗಳು ಕೇವಲ ಭಾಷಣಕ್ಕೆ, ಸಭೆಗೆ ಸೀಮಿತವಾಗದೇ ನಮ್ಮ ಉದ್ದೇಶಗಳು ಜಾರಿಗೆ ಬಂದರೆ ನಮ್ಮ ಪ್ರಯತ್ನಕ್ಕೆ ಫಲ ದೊರೆತಂತೆ. ಸಮಿತಿಯ ಸಭೆಗಳು ಸದಾ ನಡೆಯುತ್ತಿರಬೇಕು. ಈ ತಾಲೂಕಿನಲ್ಲಿ ಸಮಿತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆ ಇದೆ. ನೀವು ಮಾದರಿಯಾಗಿ ಎಲ್ಲರೂ ಸೇರಿ ಕೆಲಸ ಮಾಡಿದಾಗ ಸಾರ್ಥಕತೆ ನಿಮಗೂ ಉಂಟಾಗುತ್ತದೆ ಎಂದರು.
ಮಂಡಳಿಯ ಹಿರಿಯ ಅಧಿಕಾರಿಗಳಾದ ಪವಿತ್ರಾ, ಪ್ರಸನ್ನ, ಪ್ರೀತಮ್, ಎಸಿಎಫ್ ಹಿಮವತಿ ಭಟ್ಟ, ತಾಪಂ ಯೋಜನಾಧಿಕಾರಿ ರಾಘವ, ಮಂಜುನಾಥ ಆಗೇರ ಉಪಸ್ಥಿತರಿದ್ದರು.ತಾಲೂಕು ಸಮಿತಿಯ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಪಶ್ಚಿಮ ಘಟ್ಟದ ಜೀವ ವೈವಿಧ್ಯ ಅರಣ್ಯ ಪರಿಸರ ಅಧ್ಯಯನಗಳ ಕುರಿತು ನಡೆದ ಕಾರ್ಯಗಾರದ ಮಾಹಿತಿಯ ಪುಸ್ತಕ ಹಾಗೂ ತಾಲೂಕಿನ ನಾಟಿ ವೈದ್ಯರ ವಿವರಗಳನ್ನೊಳಗೊಂಡ ಕೈಪಿಡಿಯನ್ನು ರಾಜ್ಯಾಧ್ಯಕ್ಷರು ಬಿಡುಗಡೆಗೊಳಿಸಿದರು.
ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ನರಸಿಂಹ ಸಾತೊಡ್ಡಿ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಇಒ ರಾಜೇಶ ಧನವಾಡಕರ್ ಸ್ವಾಗತಿಸಿದರು. ಸದಸ್ಯ ಕೆ.ಎಸ್. ಭಟ್ಟ ಆನಗೋಡ ನಿರ್ವಹಿಸಿದರು. ಪ್ರಗತಿ ಸಹಾಯಕರಾದ ಗಣಪತಿ ಭಾಗ್ವತ ವಂದಿಸಿದರು.