ದಾನ, ಧರ್ಮದಿಂದ ಜನ್ಮ ಸಾರ್ಥಕ: ಕಳಕನಗೌಡ ಪಾಟೀಲ

| Published : Jan 21 2025, 12:31 AM IST

ಸಾರಾಂಶ

ಎಲ್ಲರೂ ದುಡಿದು ಸಂಪಾದನೆ ಮಾಡಿದ ಹಣದಲ್ಲಿ ತಮ್ಮ ಜೀವನೋಪಾಯಕ್ಕೆ ಉಳಿಸಿಕೊಂಡು ಉಳಿದ ಹಣವನ್ನು ದಾನ, ಧರ್ಮ ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಎಲ್ಲರೂ ದುಡಿದು ಸಂಪಾದನೆ ಮಾಡಿದ ಹಣದಲ್ಲಿ ತಮ್ಮ ಜೀವನೋಪಾಯಕ್ಕೆ ಉಳಿಸಿಕೊಂಡು ಉಳಿದ ಹಣವನ್ನು ದಾನ, ಧರ್ಮ ಮಾಡಿದಾಗ ಮಾತ್ರ ಜನ್ಮ ಸಾರ್ಥಕವಾಗುತ್ತದೆ ಎಂದು ತುಮ್ಮರಗುದ್ದಿ ಗ್ರಾಪಂ ಮಾಜಿ ಸದಸ್ಯ ಕಳಕನಗೌಡ ಪಾಟೀಲ ಹೇಳಿದರು.

ತಾಲೂಕಿನ ತುಮ್ಮರಗುದ್ದಿ ಗ್ರಾಮದ ಆದಿಶಕ್ತಿ ಆಗ್ರದಮ್ಮ ದೇವಿಯ ೪೪ನೇ ಶಿವಾನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶರಣ-ಸಂತರು ನಾಡಿನ ಒಳಿತಿಗಾಗಿ ಶ್ರಮಿಸಿದ್ದಾರೆ. ಜಗತ್ತಿನಲ್ಲಿ ಧರ್ಮ ಕಾರ್ಯಗಳು ಆಗಬೇಕಿದೆ ಎಂದರು.

ಇಂದಿನ ದಿನಮಾನಗಳಲ್ಲಿ ಸತ್ಸಂಗ, ಭಜನೆ, ಶಿವಾನುಭವದಂತಹ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿವೆ. ಪ್ರತಿಯೊಬ್ಬರು ತಾವು ಸಂಪಾದನೆ ಮಾಡುವ ಹಣವನ್ನು ಇಂತಹ ಸತ್ಕಾರ್ಯಗಳಿಗೆ ಉಪಯೋಗಿಸಿದಲ್ಲಿ ಪುಣ್ಯಪ್ರಾಪ್ತಿಯಾಗಲಿದೆ ಎಂದು ಹೇಳಿದರು.

ಉಪನ್ಯಾಸಕ ಬಾಬಾ ಖಲಂದರ ಗೊಂಡಬಾಳ ಉಪನ್ಯಾಸ ನೀಡಿ, ಬದುಕು ಮತ್ತು ಜೀವನಕ್ಕೆ ತುಂಬಾ ವ್ಯತ್ಯಾಸವಿದೆ. ಕಾಣದ ವಸ್ತುವಿನಲ್ಲಿ ಪರಮಾತ್ಮ ಅಡಗಿದ್ದಾನೆ. ಜ್ಞಾನ, ಪ್ರಸಾದ ಮತ್ತು ಆಧ್ಯಾತ್ಮದಲ್ಲಿ ದೇವರನ್ನು ಕಾಣುವ ಕೆಲಸವಾಗಬೇಕು. ಪ್ರತಿಯೊಬ್ಬರು ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದಲ್ಲಿ ಯಶಸ್ಸು ಕಂಡಿತವಾಗಿ ದೊರೆಯುತ್ತದೆ ಎಂದರು.

ಬಸವರಾಜ ಮಾಲಿಗೌಡ್ರ, ಭರಮಣ್ಣ ಜಿನ್ನಾಪೂರ, ನೀಲಕಂಠಪ್ಪ ರೊಡ್ಡರ್ ಸಂಗೀತ ಸೇವೆ ಸಲ್ಲಿಸಿದರು.

ಮುಖಂಡರಾದ ರುದ್ರಯ್ಯ ಹಿರೇಮಠ, ರಾಜಶೇಖರ ಹಿರೇಮಠ, ಶಿವರಾಜ ಚಿಕ್ಕೋಪ್ಪ, ಬಸಪ್ಪ ಹಳ್ಳದ, ಶೇಖಸಾಬ ನೂರಬಾ, ತಿರುಗುಣೆಪ್ಪ ಶಾಶ್ವಿಹಾಳ, ಬಸಪ್ಪ ಕುದ್ರಿಕೋಟಗಿ, ಈರಪ್ಪ ಮುಶಿಗೇರಿ, ಶಂಕ್ರಪ್ಪ ಕುಂಭಾಳವತಿ, ದುರಗಪ್ಪ ಪರಂಗಿ, ವೀರಭದ್ರಪ್ಪ ಚಿಕ್ಕೊಪ್ಪ, ಭರಮಪ್ಪ ಅಗಸಿಮುಂದಿನ, ಶಿವಪ್ಪ ಮುಧೋಳ ಮತ್ತಿತರರು ಇದ್ದರು.