ಸಂವಿಧಾನ ಮೇಲೆ ಬಿಜೆಪಿ ಬುಲ್ಡೋಜರ್‌: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ

| Published : Dec 24 2024, 12:47 AM IST / Updated: Dec 24 2024, 12:53 PM IST

ಸಂವಿಧಾನ ಮೇಲೆ ಬಿಜೆಪಿ ಬುಲ್ಡೋಜರ್‌: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ನಾಯಕರು ಬಾಬಾಸಾಹೇಬ ಅಂಬೇಡ್ಕರ್‌ ಅವರನ್ನು ಅವಹೇಳನ ಮಾಡಿ ಸಂವಿಧಾನದ ಮೇಲೆ ಬುಲ್ಡೋಜರ್‌ ಹರಿಸುವ ಕೆಲಸ ಮಾಡುತ್ತಿದ್ದಾರೆ. ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಆರೋಪಿಸಿದರು.

 ಬೆಳಗಾವಿ : ಬಿಜೆಪಿ ನಾಯಕರು ಬಾಬಾಸಾಹೇಬ ಅಂಬೇಡ್ಕರ್‌ ಅವರನ್ನು ಅವಹೇಳನ ಮಾಡಿ ಸಂವಿಧಾನದ ಮೇಲೆ ಬುಲ್ಡೋಜರ್‌ ಹರಿಸುವ ಕೆಲಸ ಮಾಡುತ್ತಿದ್ದಾರೆ. ಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಆರೋಪಿಸಿದರು.

ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡು ರಾಹುಲ್‌ ಗಾಂಧಿ ವಿರುದ್ಧವೂ ಅಪಪ್ರಚಾರ ಮಾಡುತ್ತಿದ್ದಾರೆ. ಅಂಬೇಡ್ಕರ್‌ ಹೆಸರನ್ನು ಕೂಡ ಬಾಬಾಸಾಹೇಬ್ ಅಂಬೇಡ್ಕರ್ ಎಂದು ಗೌರವಯುತವಾಗಿ ಮಾತನಾಡುತ್ತೇವೆ. ಅಮಿತ್ ಶಾ ಅವರ ಹೆಸರನ್ನು ಬಳಸುವಾಗಲೂ ನಾವು ಶ್ರೀ ಅಮಿತ ಶಾ ಎಂದು ಗೌರವಪೂರ್ವಕವಾಗಿ ಹೇಳುತ್ತೇವೆ. ವಿಶ್ವಮಾನ್ಯ ಸಂವಿಧಾನ ರಚಿಸಿದವರನ್ನೇ ಅವಹೇಳನ ಮಾಡುವ ಅವರು ಖರ್ಗೆ ಮತ್ತು ರಾಹುಲ್ ಗಾಂಧಿಯವರನ್ನು ಟೀಕಿಸದೇ ಇರುತ್ತಾರೆಯೇ ಎಂದು ಪ್ರಶ್ನಿಸಿದರು.

ಮಹಾತ್ಮ ಗಾಂಧಿಜೀಯವರನ್ನು ಇದೇ ವಿಚಾರವಾದಿ ಶಕ್ತಿಗಳು ಹತ್ಯೆಗೈದಿದ್ದವು. ಜೀವಿತಾವಧಿಯಲ್ಲಿಯೂ ಅವರನ್ನು ಇದೇ ಶಕ್ತಿಗಳು ವಿರೋಧಿಸಿದ್ದವು. ಮಹಾತ್ಮ ಗಾಂಧಿಜೀಯವರು ಸೋಲನ್ನು ಸ್ವೀಕರಿಸಿಲ್ಲ. ರಾಹುಲ್ ಗಾಂಧಿ ಕೂಡ ಸ್ವೀಕರಿಸುವುದಿಲ್ಲ ಎಂದು ಹೇಳಿದರು.

ಬಿಜೆಪಿ ಪ್ರತಿ ಬಾರಿಯೂ ಈ ದೇಶದ ನಾರಿಯರನ್ನು ಅಪಮಾನಿಸುತ್ತಿದೆ. ಬಿಜೆಪಿಯ ಸಿದ್ಧಾಂತವೇ ಮಹಿಳೆಯರು, ಯುವಕರು, ದಲಿತರು ಮತು ರೈತರನ್ನು ಅವಮಾನಿಸುವುದಾಗಿದೆ. ಮಹಿಳಾ ಸಚಿವರಿಗೆ ಅಪೇಕ್ಷಾರ್ಹ ಪದ ಬಳಸಿ ಬಿಜೆಪಿ ನಾಯಕ ಸಿ.ಟಿ.ರವಿ ಅವಮಾನಿಸಿದ್ದಾರೆ. ಅವರ ವಿರುದ್ಧ ರಾಜ್ಯ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈಗ ಮತ್ತೊಮ್ಮೆ 100 ವರ್ಷದ ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಸಭೆ ಮತ್ತು ಮತ್ತೊಮ್ಮೆ ಸಮಾಜವನ್ನು ಒಗ್ಗೂಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ. ಒಂದೆಡೆ ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್‌ ಹಾಗೂ ಸಂವಿಧಾನ ಅವಮಾನಿಸುತ್ತಿದ್ದರೆ, ಇನ್ನೊಂದೆಡೆ ಬೆಳಗಾವಿಯ ಈ ಅಧಿವೇಶನ ಭಾರತ ದೇಶ ಸಂವಿಧಾನದ ಮಾರ್ಗದಲ್ಲಿ ನಡೆಯಲಿದೆ ಎಂದು ಸಂಕಲ್ಪ ಕೈಗೊಳ್ಳಲಿದೆ ಎಂದು ಸುರ್ಜೆವಾಲಾ ಹೇಳಿದರು.

ಬೆಳಗಾವಿ ಹಿಂದುಸ್ಥಾನದ ಅವಿಸ್ಮರಣೀಯ ಸ್ಥಳ. ಸ್ವಾತಂತ್ರ್ಯ ಸಂಗ್ರಾಮದ ರಣಕಹಳೆಯನ್ನು ಮಹಾತ್ಮ ಗಾಂಧಿಜೀಯವರು ಇಲ್ಲಿಂದಲೇ ಮೊಳಗಿಸಿದ್ದರು. ಬೆಳಗಾವಿಯಲ್ಲಿ ಭೂತ, ವರ್ತಮಾನ ಮತ್ತು ಭವಿಷ್ಯ ಕಾಲದ ಮಿಶ್ರಣ ಸಿಗಲಿದೆ. ಬೆಳಗಾವಿ ಹಿಂದೂಸ್ಥಾನದ ಇತಿಹಾಸದ ಅವಿಭಾಜ್ಯ ಭಾಗವಾಗಿದೆ. ಭಾರತದ ಸ್ವಾತ್ರಂತ್ರ್ಯ ಸಂಗ್ರಾಮಕ್ಕೆ ಬೆಳಗಾವಿ ಅಧಿವೇಶನದಿಂದ ಹೊಸ ದಿಕ್ಕು-ದಿಸೆ ದೊರೆಯಿತು. ಬ್ರಿಟಿಷರ ವಿರುದ್ಧ ಮಹಾತ್ಮ ಗಾಂಧೀಜಿಯವರು ಬೆಳಗಾವಿಯಿಂದಲೇ ರಣಕಹಳೆ ಊದಿದ್ದರು. ಜಾತಿ-ಧರ್ಮದ ಬೇಧಭಾವ ತೊಡೆದು ಸಂಪೂರ್ಣ ದೇಶವನ್ನು ಒಂದುಗೂಡಿಸಿ ಸತ್ಯಾಗ್ರಹಕ್ಕೆ ಇಲ್ಲಿಂದಲೇ ಪ್ರೇರೇಪಿಸಿದ್ದರು.

-ರಣದೀಪ ಸುರ್ಜೇವಾಲಾ ಎಐಸಿಸಿ ಪ್ರಧಾನ ಕಾರ್ಯದರ್ಶಿ