ಸಾರಾಂಶ
ತಿಪಟೂರು: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ, ಇಲ್ಲಿನ ಮುಖಂಡ ಲೋಕೇಶ್ವರ ತಮ್ಮ ಬೆಂಬಲಿಗರರೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣನವರನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ದೇಶದ ಹಿತದೃಷ್ಟಿಯಿಂದ ಹಾಗೂ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿ ಮಾಡಿ ದೇಶದ ಅಭಿವೃದ್ದಿ, ಕೀರ್ತಿ, ಭದ್ರತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಬಿಜೆಪಿ ಬೆಂಬಲಿಸಲು ನಿರ್ಧಾರ ಮಾಡಿದ್ದೇನೆ.
ಇತ್ತೀಚೆಗೆ ಬೆಂಗಳೂರಿನ ಯಡಿಯೂರಪ್ಪ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ, ಈ ಸಂಬಂಧವಾಗಿ ಚರ್ಚಿಸಿದ್ದು ಅವರೂ ಸಹ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು. ನರೇಂದ್ರ ಮೋದಿಯವರನ್ನು ೩ನೇ ಬಾರಿಗೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ೨೮ ಕ್ಷೇತ್ರಗಳನ್ನು ಗೆದ್ದು ರಾಜ್ಯದ ಕೊಡುಗೆ ನೀಡಲು ನಿರ್ಧರಿಸಿದ್ದೇನೆ. ಈ ಕಾರ್ಯದಲ್ಲಿ ಕೈಜೋಡಿಸಿ ತುಮಕೂರಿ ನಲ್ಲಿ ಬಿಜೆಪಿ ಗೆಲ್ಲಿಸಲು ಸೂಚನೆ ನೀಡಿದ್ದಾರೆ. ಅದರಂತೆ ತಿಪಟೂರಿನಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣನವರಿಗೆ ಹೆಚ್ಚಿನ ಮತಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದಿದ್ದಾರೆ.ಸೋಮಣ್ಣನವರು ನನಗೆ ಬಹಳ ವರ್ಷಗಳಿಂದ ಚಿರಪರಿಚಿತರಿದ್ದಾರೆ. ಕ್ರಿಯಾಶೀಲ ವ್ಯಕ್ತಿಯಾಗಿರುವ ಅವರು ಅಭಿವೃದ್ಧಿಗೆ ಹೇಳಿ ಮಾಡಿಸಿದಂತವರು. ಅವರನ್ನು ಗೆಲ್ಲಿಸುವುದರಿಂದ ತುಮಕೂರು ಕ್ಷೇತ್ರದ ಜೊತೆಗೆ ತಿಪಟೂರು ವಿಧಾನಸಭಾ ಕ್ಷೇತ್ರವೂ ಸಹ ಮತ್ತಷ್ಟು ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ನಾನು ಬಿಜೆಪಿಗೆ ಯಾವುದೇ ಷರತ್ತಿಲ್ಲದೇ ಬೆಂಬಲಿಸುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಉತ್ತಮ ಲೀಡ್ ದೊರಕಿಸಿಕೊಡುತ್ತೇನೆ. ಬಿಜೆಪಿ ಮುಖಂಡರು ನನ್ನನ್ನು ಅಧಿಕೃತವಾಗಿ ಯಾವಾಗ ಸೇರ್ಪಡೆ ಮಾಡಿಕೊಳ್ಳುತ್ತಾರೆಯೋ ಅಂದಿನಿಂದಲೇ ನಾನು ಪಕ್ಷದ ಕೆಲಸ ಮುಂದುವರಿಸಸುತ್ತೇನೆ ಎಂದಿದ್ದಾರೆ.