ಚಿಕ್ಕಮಗಳೂರುಚಿಕ್ಕಮಗಳೂರಿನ ಮೆಡಿಕಲ್ ಶಾಪ್ ಮಾಲಿಕರಿಗೆ ಔಷಧಿ ಪೂರೈಕೆ ಟೆಂಡರ್ ಕೊಡಿಸುವುದಾಗಿ ಹಣ ವಸೂಲಿ ದಂಧೆಗೆ ನಕಲಿ ಐಎಎಸ್ ಅಧಿಕಾರಿ ಮಿಥುನ್ ಗೆ ಸಹಕಾರ ನೀಡಿದ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಚಂದ್ರಶೇಖರ್ ಅವರನ್ನು ಬಂಧಿಸಬೇಕು ಹಾಗೂ ಈ ಕುರಿತು ಸಮಗ್ರ ತನಿಖೆಗೆ ವಿಶೇಷ ತಂಡ ರಚಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ತನಿಖೆಗೆ ವಿಶೇಷ ತಂಡ ರಚಿಸಸಲು ಒತ್ತಾಯಿಸಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಚಿಕ್ಕಮಗಳೂರಿನ ಮೆಡಿಕಲ್ ಶಾಪ್ ಮಾಲಿಕರಿಗೆ ಔಷಧಿ ಪೂರೈಕೆ ಟೆಂಡರ್ ಕೊಡಿಸುವುದಾಗಿ ಹಣ ವಸೂಲಿ ದಂಧೆಗೆ ನಕಲಿ ಐಎಎಸ್ ಅಧಿಕಾರಿ ಮಿಥುನ್ ಗೆ ಸಹಕಾರ ನೀಡಿದ ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ಚಂದ್ರಶೇಖರ್ ಅವರನ್ನು ಬಂಧಿಸಬೇಕು ಹಾಗೂ ಈ ಕುರಿತು ಸಮಗ್ರ ತನಿಖೆಗೆ ವಿಶೇಷ ತಂಡ ರಚಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಜಿಲ್ಲಾ ಬಿಜೆಪಿ ಕಚೇರಿಯಿಂದ ನಗರದ ಅಜಾದ್ ಪಾರ್ಕ್ ವರೆಗೆ ಪ್ರತಿಭಟನೆ ರ್ಯಾಲಿ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು, ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ಜಿಲ್ಲಾ ಸರ್ಜನ್ ಡಾ.ಚಂದ್ರಶೇಖರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಎಚ್.ಡಿ.ತಮ್ಮಯ್ಯ ಭ್ರಷ್ಟ ಅಧಿಕಾರಿಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪ ಮಾಡಿದರು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಸುಮಾರು 6 ತಿಂಗಳಿನಿಂದ ಮಿಥನ್ ಎಂಬ ವ್ಯಕ್ತಿ ತಾವು ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಈ ವಿಚಾರ ಗಮನಕ್ಕೆ ಬರದಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಸಭೆ ನಡೆಸುವುದಷ್ಟೇ ಅಲ್ಲ, ಜಿಲ್ಲೆಯಲ್ಲಿರುವ ಮೆಡಿಕಲ್ ಶಾಪ್ ಮಾಲೀಕರಿಂದ ಹಣ ವಸೂಲಿ ಮಾಡಿದ್ದಾನೆ. ಮೆಡಿಕಲ್ ಮಾಫಿಯಾ ದಂಧೆ ನಡೆಸಿದ್ದಾನೆ. ಇದಕ್ಕೆಲ್ಲಾ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಸಾಥ್ ನೀಡಿದ್ದಾರೆ. ನಕಲಿ ಐಎಎಸ್ ಅಧಿಕಾರಿ ಬಳಕೆ ಮಾಡಿಕೊಂಡು ಹಣ ವಸೂಲಿ ದಂಧೆ ಮಾಡಿದ್ದಾನೆ. ಈಗಾಗಲೇ ನಕಲಿ ಐಎಎಸ್ ಅಧಿಕಾರಿ ಮಿಥನ್ ಬಂಧಿಸ ಲಾಗಿದ್ದು, ಅವನಿಗೆ ಸಾಥ್ ನೀಡಿದ ಡಾ.ಚಂದ್ರಶೇಖರ್ ಅವರನ್ನು ಬಂಧಿಸಿ, ಅಮಾನತುಗೊಳಿಸಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.ಶಾಸಕ ಎಚ್.ಡಿ.ತಮ್ಮಯ್ಯ ಸಹ ಈ ನಕಲಿ ಐಎಎಸ್ ಅಧಿಕಾರಿ ಮಿಥನ್ ಅವರನ್ನು ಕರೆದುಕೊಂಡು ಓಡಾಡಿದ್ದಾರೆ. ಬಸವ ಮಂಟಪದ ಕಾರ್ಯಕ್ರಮದಲ್ಲಿ ಈ ನಕಲಿ ಐಎಎಸ್ ಅಧಿಕಾರಿಗೆ ಸಿರಿಗೆರೆ ಮಠದ ಶ್ರೀಗಳಿಂದ ಸನ್ಮಾನ ಸಹ ಮಾಡಿದ್ದಾರೆ ಎಂದು ಆರೋಪಿಸಿದರು.
ನಕಲಿ ಐಎಎಸ್ ಅಧಿಕಾರಿಯೊಂದಿಗೆ ಭಾಗಿಯಾಗಿರುವುದನ್ನು ಪತ್ತೆ ಮಾಡಿ ಬಂಧಿಸಬೇಕು. ಇಲ್ಲವಾದರೆ, ಜಿಲ್ಲಾ ಆಸ್ಪತ್ರೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಜಿಲ್ಲಾ ಸರ್ಜನ್ ಚಂದ್ರ ಶೇಖರ್ ನಕಲಿ ಐಎಎಸ್ ಅಧಿಕಾರಿಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾರಿಕೊಂಡಿದ್ದರು. ವೈದ್ಯರು, ನರ್ಸ್ ಸೇರಿದಂತೆ ಸಿಬ್ಬಂದಿ ರಜೆ ಪಡೆಯಲು ಮಿಥನ್ ಮುಂದೆ ಕೈಕಟ್ಟಿ ನಿಂತುಕೊಳ್ಳಬೇಕಾದ ಸ್ಥಿತಿಗೆ ಕಾರಣವಾದ ಚಂದ್ರಶೇಖರ್ ಅವರನ್ನು ಯಾಕೆ ಈವರೆಗೆ ಬಂಧಿಸಿಲ್ಲ. ಪೊಲೀಸ್ ಇಲಾಖೆ ಮೇಲೆ ಯಾರ ಒತ್ತಡ ಇದೆ ಎಂದು ಪ್ರಶ್ನಿಸಿದರು.
ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಎಲ್ಲರೂ ಶಾಮಿಲಾಗಿದ್ದಾರೆ. ಹೀಗಾಗಿ, ಪ್ರಕರಣದ ಕುರಿತು ತನಿಖೆಗೆ ವಿಶೇಷ ತಂಡ ರಚಿಸುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಪ್ರೇಮ್ ಕುಮಾರ್, ಮಧು ಅರಸ್, ರವೀಂದ್ರ ಬೆಳವಾಡಿ, ಕೇಶವ ಮೂರ್ತಿ, ಕೆ.ಸಿ.ನಿಶಾಂತ್, ಸಚಿನ್ ಗೌಡ, ಜಸಂತಾ ಅನಿಲ್ ಕುಮಾರ್, ಜೀವನ್ ಬಸವರಾಜ್, ಓಂ,ಕಾರೇಗೌಡ, ಸಂಗೀತಾ ಪ್ರಸಾದ್ ಮೊದಲಾದವರಿದ್ದರು.-- ಬಾಕ್ಸ್--
ಜಿಲ್ಲಾ ಆಸ್ಪತ್ರೆ ಭ್ರಷ್ಟಾಚಾರದ ಕೇಂದ್ರ ಸ್ಥಾನಜಿಲ್ಲಾ ಆಸ್ಪತ್ರೆ ಭ್ರಷ್ಟಾಚಾರದ ಕೇಂದ್ರ ಸ್ಥಾನ. ಬಡವರು ಆಸ್ಪತ್ರೆಗೆ ಹೋದರೆ ಸರಿಯಾದ ಚಿಕಿತ್ಸೆ ನೀಡಲು ಡಾಕ್ಟರ್ ಸೇರಿದಂತೆ ಸಿಬ್ಬಂದಿಯೇ ಇಲ್ಲ. ರೋಗಿಗಳಿಗೆ ಮೆಡಿಕಲ್ ಶಾಪ್ನಿಂದ ಔಷಧಿ ತೆಗೆದುಕೊಂಡು ಬರುವಂತೆ ಚೀಟಿ ಬರೆದುಕೊಟ್ಟು, ಮೆಡಿಕಲ್ ಶಾಪ್ಗಳಿಗೆ ಹಣ ಮಾಡಿಕೊಡುವ ಕೆಲಸ ಆಸ್ಪತ್ರೆ ವೈದ್ಯರು ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.