ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಘಟಕದಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಮಹೇಶ ತೆಂಗಿನಕಾಯಿ, ರಾಜ್ಯಪಾಲರಿಗೂ ಗೋ ಬ್ಯಾಕ್ ಎಂದು ಅವಮಾನ ಮಾಡುವಂತಹಕ್ಕೆ ಕಾಂಗ್ರೆಸ್ಸಿನವರು ನಡೆದುಕೊಂಡರು. ಆದರೆ, ರಾಜ್ಯದ ಉಚ್ಚ ನ್ಯಾಯಾಲಯ ತೀರ್ಪು ರಾಜ್ಯಪಾಲರ ಕ್ರಮ ಸೂಕ್ತವಾಗಿದ್ದು ನ್ಯಾಯದ ಪರವಾಗಿದೆ. ತೀರ್ಪುಗೆ ಗೌರವ ಕೊಟ್ಟ ಕೂಡಲೇ ರಾಜೀನಾಮೆ ನೀಡಬೇಕು. ಇದೂ ಮುಡಾ ಹಗರಣ ಅಷ್ಟೇ, ವಾಲ್ಮೀಕಿ ಹಗರಣ ಬಾಕಿ ಇದೆ. ನಾವೂ ಪ್ರತಿಭಟನೆ ಮೂಲಕ ಆಗ್ರಹ ಮಾಡುತ್ತೇವೆ. ತೀರ್ಪುಗೆ ತಲೆ ಬಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಸಹಕರಿಸಿ ಎಂದರು
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಸಿದ್ದರಾಮಯ್ಯ ಹಾಗೂ ಇಡೀ ಕಾಂಗ್ರೆಸ್ ಸರಕಾರ ಇದರಲ್ಲಿ ನೇರ ಭಾಗಿಯಾಗಿದೆ. ಇದು ವೈಯಕ್ತಿಕ ಲಾಭಮಾಡಿಕೊಳ್ಳುವ ಕಾಂಗ್ರೆಸ್ ಸರಕಾರವಾಗಿದೆ. ಇದರಿಂದ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಅನಿವಾರ್ಯ. ಜನರಪರವಾಗಿ ಆಡಳಿತ ಇಲ್ಲ ಎಂದು ಸಾಬೀತು ಆಗಿದ್ದರಿಂದ ಅನಿವಾರ್ಯವಾಗಿ ನಾವು ಬೀದಿಗೀಳಿದು ಹೋರಾಟ ಮಾಡುವುದಾಗಿದೆ. ಸಿದ್ದರಾಮಯ್ಯನವರು ಎಲ್ಲಿವರೆಗೂ ರಾಜೀನಾಮೆ ಕೊಡುವುದಿಲ್ಲವೋ ಅಲ್ಲಿವರೆಗೆ ಇದು ನಿರಂತರ ಹೋರಾಟ ಇರುತ್ತದೆ. ಆ ನಿಟ್ಟಿನಲ್ಲಿ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.ಬಿಜಿಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ತೀರ್ಪುಗೆ ಗೌರವ ಕೊಟ್ಟು ರಾಜೀನಾಮೆ ಕೊಟ್ಟು ತನಿಖೆಗೆ ಸಹಕರಿಸಿ. ಕಾಂಗ್ರೆಸ್ ಸರ್ಕಾರ ಹಲವಾರು ಸಚಿವರ ಮೇಲೆ ಹಗರಣಗಳು ಬೆಳಕಿಗೆ ಬರುತ್ತಿವೆ. ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರ ಮೇಲು ಇಂದು ಹಗರಣ ಬಯಲಾಗುತ್ತಿದೆ. ಇದನೆಲ್ಲವನ್ನೂ ನೋಡಿದರೆ ಈ ಸರಕಾರ ರಾಜ್ಯದಲ್ಲಿ ಬಹಳದಿನ ನಿಲುವುದಿಲ್ಲ ಎಂದರು.
ಪ್ರತಿಭಟನೆ ಶಿವಾನಂದ ಜೀನ್ನಿಂದ ಮೆರವಣಿಗೆ ಮೂಲಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಜಿ.ಎನ್.ಪಾಟೀಲ. ಡಾ.ಎಂ.ಎಸ್.ದಡ್ಡೆನ್ನವರ, ಲಕ್ಷ್ಮೀ ನಾರಾಯಣ ಕಾಸಟ ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆನ್ನವರ, ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ಸುರೇಶ ಕೊಣ್ಣೂರ, ಬಸವರಾಜ ಹುನಗುಂದ, ಶಿವಾನಂದ ಟವಳಿ, ಸತ್ಯನಾರಾಯಣ ಹೆಮಾದ್ರಿ, ರಾಜು ಮುದೇನೂರ, ಮುತ್ತಣ್ಣ ಬೆಣ್ಣೂರ, ಸೇರಿದಂತೆ ಅನೇಕರು ಭಾಗವಹಿಸಿದ್ದರು.