ಗಣಪತಿ ಕೂರಿಸಲು ಏಕಗವಾಕ್ಷಿ ಅನುಮತಿಗಾಗಿ ಮನವಿ

| Published : Aug 31 2024, 01:35 AM IST

ಸಾರಾಂಶ

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರಿಗೆ ಮನವಿ

ಕನ್ನಡಪ್ರಭ ವಾರ್ತೆ ಮೈಸೂರು

ಗಣಪತಿಗಳನ್ನು ಕೂರಿಸಲು ಏಕಗವಾಕ್ಷಿ (ಸಿಂಗಲ್ ವಿಂಡೋ) ಅನುಮತಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಗಿರಿಧರ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಅವರಿಗೆ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಅನೇಕ ಸಂಘ ಸಂಸ್ಥೆಗಳು ಮತ್ತು ಯುವಕರು ರಸ್ತೆ ಬದಿಯಲ್ಲಿ ಹಾಗೂ ಪಾರ್ಕ್ ಗಳಲ್ಲಿ ಮತ್ತು ಅವರ ಏರಿಯಾಗಳಲ್ಲಿ ಸಾಮೂಹಿಕವಾಗಿ ಕೂರಿಸುವ ಗಣಪತಿಗಳನ್ನು ಸಲೀಸಾಗಿ ಕೂರಿಸುವ ರೀತಿಯಲ್ಲಿ ಎಲ್ಲಾ ಅನುಮತಿಗಳನ್ನು ಒಂದೇ ಕಡೆ ನೀಡಬೇಕು. ನಗರ ಪಾಲಿಕೆ, ಕೆಇಬಿ, ಪೊಲೀಸ್, ಅಗ್ನಿಶಾಮಕ ದಳ ಈ ಎಲ್ಲವೂ ಒಂದೇ ಕಡೆ ಅರ್ಜಿಗಳನ್ನು ತೆಗೆದುಕೊಂಡು 24 ಗಂಟೆಗಳಲ್ಲಿ ಪರಿಶೀಲಿಸಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಸರಳವಾಗಿ ಅನುಮತಿ ಸಿಗುವ ರೀತಿಯಲ್ಲಿ ಮಾಡಿಕೊಡಬೇಕು ಎಂದು ಅವರು ಕೋರಿದರು.

ಬಿಜೆಪಿ ನಗರ ಉಪಾಧ್ಯಕ್ಷರಾದ ಎಸ್.ಕೆ. ದಿನೇಶ್, ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ರಾಕೇಶ್ ಗೌಡ, ಎನ್.ಆರ್. ಕ್ಷೇತ್ರದ ಅಧ್ಯಕ್ಷ ಮಂಜು, ಯುವ ಮೋರ್ಚಾ ಅಧ್ಯಕ್ಷ ನವೀನ್ ರಾಜ್ ಮೊದಲಾದವರು ಇದ್ದರು.