ಬಿಜೆಪಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲು ವಿಫಲ: ಡಾ.ಕೆ.ಪಿ.ಅಂಶುಮಂತ್

| Published : Jun 29 2025, 01:32 AM IST

ಸಾರಾಂಶ

ನರಸಿಂಹರಾಜಪುರ, ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ವಿಫಲವಾಗಿರುವ ಬಿಜೆಪಿಗೆ ವಿಚಾರಗಳೇ ಇಲ್ಲವಾಗಿದ್ದು ಬಡವರ ಬದುಕು ಸುಧಾರಿಸಲು ಜಾರಿಗೆ ತಂದ ಪಂಚಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಆರೋಪಿಸಿದರು.

ಪಂಚಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ।

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ವಿಫಲವಾಗಿರುವ ಬಿಜೆಪಿಗೆ ವಿಚಾರಗಳೇ ಇಲ್ಲವಾಗಿದ್ದು ಬಡವರ ಬದುಕು ಸುಧಾರಿಸಲು ಜಾರಿಗೆ ತಂದ ಪಂಚಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಆರೋಪಿಸಿದರು.ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ, ಶಕ್ತಿ ಯೋಜನೆ ಸೌಲಭ್ಯಗಳು ಪಾರದರ್ಶಕವಾಗಿ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿರುವುದು ಬಿಜೆಪಿಯವರಿಗೆ ಸಹಿಸಿ ಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಗ್ಯಾರಂಟಿ ಘೋಷಣೆ ಮಾಡಿರುವ ಬಗ್ಗೆ ಚಕಾರ ಎತ್ತದ ಬಿಜೆಪಿಗರು ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿ 4 ತಿಂಗಳಲ್ಲಿಯೇ ಹಿಂದಕ್ಕೆ ಪಡೆದಿರುವುದಕ್ಕೆ ಉತ್ತರಿಸಲಿ ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜತೆಯಲ್ಲಿ ಆರೋಗ್ಯ, ಶಿಕ್ಷಣ, ಮಹಿಳೆಯರ ಸುರಕ್ಷತೆ ಆದ್ಯತೆ, ರೈತರಿಗೆ ಅನುಕೂಲ ವಾಗುವ ಯೋಜನೆಗಳನ್ನು ಜಾರಿಗೆ ತಂದು ಸರ್ವ ಜನಾಂಗದ ಶಾಂತಿಯ ತೋಟವಾಗಿಸುವಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ. ಜಿಲ್ಲೆಯಲ್ಲಿ ಮತ್ತು ಕ್ಷೇತ್ರದಲ್ಲಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಟಿ.ಡಿ.ರಾಜೇಗೌಡ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವುದನ್ನು, ಜಿಲ್ಲೆಯ ಹಲವು ಜ್ವಲಂತ ಸಮಸ್ಯೆ ಬಗೆಹರಿಸಲು ಕಾರ್ಯಕ್ರಮ ರೂಪಿಸಿರುವುದನ್ನು ಸಹಿಸಿಕೊಳ್ಳಲಾರದೆ ಬಿಜೆಪಿಯವರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.

ಕಂದಾಯ ಸಚಿವ ಕೃಷ್ಣೇಬೈರೇಗೌಡರು ಜಿಲ್ಲೆಯ ಕಂದಾಯ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ನಿವೇಶನ ಮತ್ತು ಭೂಮಿ ಹಕ್ಕು ಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದಾರೆ. ಪ್ಲಾಂಟೇಷನ್ ಬೆಳೆಗಳ ಜಮೀನು ಗುತ್ತಿಗೆ ನೀಡಲು ಬೆಳೆಗಾರರು ಅರ್ಜಿಸಲು ಜು.15 ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದ್ದರೂ, ತೆರಿಗೆಯಲ್ಲಿ ಬರಬೇಕಾದ ಪಾಲು ನೀಡದೆ ಇದ್ದರೂ ಕೇಂದ್ರದಲ್ಲಿ ಸಚಿವ ರಾದ ಬಿಜೆಪಿ 4 ಜನ ಸಂಸದರು, ಉಳಿದ ಸಂಸದರು, ಬಿಜೆಪಿ ಮುಖಂಡರು ರಾಜ್ಯದ ಪರ ಧ್ವನಿ ಎತ್ತುವಲ್ಲಿ ವಿಫಲರಾಗಿದ್ದು ದಿಕ್ಕು ತಪ್ಪಿಸಲು ಆಧಾರ ರಹಿತ ಅಪಪ್ರಚಾರಗಳ ಮೂಲಕ ಜನರನ್ನು ಆತಂಕಕ್ಕೆ ದೂಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಕೇಂದ್ರದ ಸರ್ಫೈಸಿ ಕಾಯ್ದೆಯಿಂದ ಜಮೀನು ಕಳೆದು ಕೊಂಡ ಮೂಡಿಗೆರೆ ವೃದ್ಧ ದಂಪತಿ ದಯಾಮರಣಕ್ಕೆ ರಾಷ್ಟ್ರಪತಿಗೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದ್ದಾರೆ. ಸಂಸತ್ತಿನ ಕೇಂದ್ರದ ಸಂಬಂಧಪಟ್ಟ ಸಚಿವರು ಸಂಸತ್ತಿನಲ್ಲಿ ಸರ್ಫೈಸಿ ಕಾಯ್ದೆಗೆ ಕಾಫಿ ಬೆಳೆ ಬರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಆ ಹೇಳಿಕೆ ಆದೇಶದ ರೂಪದಲ್ಲಿ ಹೊರಬರದೆ ನೂರಾರು ರೈತರು ಜಮೀನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರೂ ಸಂಸದರು ಮೌನವಹಿಸಿರುವುದು ಏಕೆ? ಎಂದು ಪ್ರಶ್ನಿಸಿದರು. ಜಿಲ್ಲೆಯ ಅರಣ್ಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಸದರು ಕೇಂದ್ರದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಮಳೆಗಾಲವಾಗಿರುವುದರಿಂದ ತಾತ್ಕಾಲಿಕವಾಗಿ ರಸ್ತೆ ಗುಂಡಿ ಮುಚ್ಚಲು ಲೋಕೋಪಯೋಗಿ ಇಲಾಖೆಯವರಿಗೆ ಶಾಸಕರು ಸೂಚಿಸಿದ್ದಾರೆ. ರಸ್ತೆಯಲ್ಲಿನ ಗುಂಡಿಗಳಿಂದ ಅಪಘಾತ ಹಾಗೂ ಜೀವಹಾನಿ ಸಂಭವಿಸಿರುವುದು ದುರದೃಷ್ಟಕರವಾಗಿದ್ದು ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅತಿವೃಷ್ಟಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರುಬೈಲು ನಟರಾಜ್, ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ, ಎಸ್.ಡಿ. ರಾಜೇಂದ್ರ, ಮುಖಂಡರಾದ ಈ.ಸಿ. ಜೋಯಿ, ಜುಬೇದ, ದೇವಂತ್ ರಾಜ್. ಅಂಜುಂ, ಸುನಿಲ್ ಕುಮಾರ್, ನಂದೀಶ್, ಜಯಂತ್, ಅಭಿಲಾಷ್ ಇದ್ದರು.