ನಗರವನ್ನು ಗಾರ್ಬೇಜ್‌ ಸಿಟಿ ಮಾಡಿದ ಬಿಜೆಪಿ: ಸೌಮ್ಯಾರೆಡ್ಡಿ

| Published : Apr 22 2024, 02:02 AM IST / Updated: Apr 22 2024, 06:41 AM IST

ನಗರವನ್ನು ಗಾರ್ಬೇಜ್‌ ಸಿಟಿ ಮಾಡಿದ ಬಿಜೆಪಿ: ಸೌಮ್ಯಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರವಾಗಿ ಶಾಸಕ ಪ್ರದೀಪ್‌ ಈಶ್ವರ್‌, ಭಾನುವಾರ ಬಿಟಿಎಂ, ಚಿಕ್ಕಪೇಟೆ, ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ರೂಡ್‌ ಶೋ ನಡೆಸಿ ಮತಯಾಚನೆ ಮಾಡಿದರು. 

 ಬೆಂಗಳೂರು :   ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ರಾಜಧಾನಿ ಬೆಂಗಳೂರನ್ನೂ ‘ಗ್ರೀನ್‌ ಸಿಟಿ’, ‘ಐಟಿ ಸಿಟಿ’ ಮಾಡಲಾಗಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ನಗರವನ್ನು ಗಾರ್ಬೇಜ್‌ ಸಿಟಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಆರೋಪಿಸಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ದೇವೇಗೌಡ ಪೆಟ್ರೋಲ್‌ ಬಂಕ್‌ ಸಮೀಪದ ಎಸಿಎಸ್‌ ಮೇಫಾ ಅಪಾರ್ಟ್ಮೆಂಟ್‌, ಶಾಲಿನಿ ಅಪಾರ್ಟ್ಮೆಂಟ್‌, ಬಿಟಿಎಂನ ಎಸ್ಎನ್‌ಎನ್‌ಆರ್‌ ಲೇಕ್‌ ವ್ಯೂ ಅಪಾರ್ಟ್ಮೆಂಟ್‌, ಬನ್ನೇರುಘಟ್ಟ ರಸ್ತೆಯ ಎಸ್ಟೀಮ್‌ ಎಕ್ಲೇವ್‌ ಅಪಾರ್ಟ್ಮೆಂಟ್‌ ಹಾಗೂ ಬೊಮ್ಮನಹಳ್ಳಿಯ ಗ್ರೀನೇ ಜ್ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 30ಕ್ಕೂ ಅಧಿಕ ಅಪಾರ್ಟ್ಮೆಂಟ್‌ ನಿವಾಸಿಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ನಿವಾಸಿಗಳೊಂದಿಗೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಸೌಮ್ಯಾ ರೆಡ್ಡಿ, ಅನಾದಿ ಕಾಲದಿಂದ ಕಾಂಗ್ರೆಸ್‌ ಪಕ್ಷವೂ ಬೆಂಗಳೂರಿನ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಬೆಂಗಳೂರು ನಗರವನ್ನು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಅದಕ್ಕಾಗಿ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಇದರ ಫಲವಾಗಿ ಬೆಂಗಳೂರು ನಗರವೂ ಗ್ರೀನ್‌ ಸಿಟಿಯಾಗಿ ರೂಪಗೊಂಡಿತ್ತು. ಇನ್ನು ಔದ್ಯೋಗಿಕ ಕ್ಷೇತ್ರದಲ್ಲಿ ಬೆಂಗಳೂರು ನಗರವೂ ಐಟಿ ನಗರವಾಗಿ ಬೆಳೆದು ನಿಂತಿದೆ. ಹಾಗಾಗಿ, ಬೆಂಗಳೂರು ನಗರಕ್ಕೆ ವಿಶ್ವ ಮಾನ್ಯತೆ ದೊರೆತಿದೆ ಎಂದರು.

ಇನ್ನು ಸಚಿವ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿದ್ದಾಗ, ನಗರದ ಹಲವು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಶ್ರಮಿಸಿದ್ದಾರೆ ಎಂದರು.

ಶಾಸಕ ಪ್ರದೀಪ್‌ ಈಶ್ವರ್‌ ಭರ್ಜರಿ ಪ್ರಚಾರ:

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌, ಭಾನುವಾರ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ಪರವಾಗಿ ಬಿಟಿಎಂ, ಚಿಕ್ಕಪೇಟೆ, ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಅವರು, ಈಗಿರುವ ಲೋಕಸಭಾ ಸದಸ್ಯರು, ಗೆದ್ದ ಮೇಲೆ ಕ್ಷೇತ್ರದ ಜನರ ಕಷ್ಟ, ಸುಖ ಆಲಿಸುವುದಕ್ಕೆ ಬಂದಿಲ್ಲ. ಮತದಾರರ ಯಾವುದೇ ಕೆಲಸ ಮಾಡಿಕೊಟ್ಟಿಲ್ಲ. ಐದು ವರ್ಷದಿಂದ ಜನರ ಕೈಗೆ ಸಿಕ್ಕಿಲ್ಲ ಎಂಬುದನ್ನು ಮರೆಯಬೇಡಿ. ಮೋಸ ಮಾಡಿದವರಿಗೆ ಚಿಕ್ಕಬಳ್ಳಾಪುರದ ಜನತೆ ಬುದ್ಧಿ ಕಲಿಸಿದಂತೆ, ನೀವು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಸೋಲಿಸಿ ಮನೆ ಕಳುಹಿಸಿ ಎಂದರು.

ಸೌಮ್ಯಾ ರೆಡ್ಡಿ ಪರ ಪ್ರಚಾರಕ್ಕೆ ಬಿಬಿಎಂಪಿ ಮಾಜಿ ಸದಸ್ಯರಾದ ನಾಗರಾಜ್‌, ರಿಜ್ವಾನ್‌ ಅರ್ಷದ್‌ ಸೇರಿದಂತೆ ನೂರಾರು ಕಾರ್ಯಕರ್ತರು ಸಾಥ್‌ ನೀಡಿದರು.

ಸೌಮ್ಯಾ ಪರ ಆಮ್‌ ಆದ್ಮಿ ಪ್ರಚಾರ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ಪರವಾಗಿ ಆಮ್ ಆದ್ಮಿ ಪಕ್ಷದ ಮುಖಂಡರು, ಕಾರ್ಯಕರ್ತರು ಭಾನುವಾರ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.