ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಾಮಾಜಿಕಾರ್ಥಿಕ ಶೈಕ್ಷಣಿಕ ಸಮೀಕ್ಷೆ ಪ್ರಶ್ನಿಸಿ ಹೈಕೋರ್ಟ್ ತೀರ್ಪು ಹಿನ್ನೆಲೆ ಹೈಕೋರ್ಟಿನಲ್ಲಿ ಏನು ತೀರ್ಪು ಬರುತ್ತೋ ಗೊತ್ತಿಲ್ಲ. ಆದರೆ ಸಮೀಕ್ಷೆ ಮಾಡುವುದರಲ್ಲಿ ಯಾವ ತಪ್ಪು ಇಲ್ಲ . ಸುಮ್ಮನೆ ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುವುದೇ ಇವರ ಉದ್ದೇಶ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಪೊನ್ನಂಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಏನೇ ಮಾಡಿದರೂ ಪರ ವಿರೋಧ ಇರುವಂತಹದ್ದೇ. ಒಳ್ಳೆಯ ಉದ್ದೇಶ ಇಟ್ಟುಕೊಂಡು ನಾವು ಸಮೀಕ್ಷೆ ಮಾಡಿಸುತ್ತಿದ್ದೇವೆ. ನಾವು ಜಾತಿ ಜನಗಣತಿ ಮಾಡುತ್ತಿಲ್ಲ. ಜಾತಿ ಗಣತಿ ಮಾಡುತ್ತಿರುವುದು ಕೇಂದ್ರ ಸರ್ಕಾರ. ಜಾತಿ ಗಣತಿ ಬೇಡ ಎಂದು ಬಿಜೆಪಿಯವರ ನಿಲುವಾಗಿದ್ದರೆ ಅವರು ವಿರೋಧ ಮಾಡಲಿ. ಕೇಂದ್ರಕ್ಕೆ, ಮೋದಿಯವರಿಗೆ ಬಿಜೆಪಿಯವರು ಬರೆಯಲಿ. ಜಾತಿ ಗಣತಿ ಬೇಡ ಎಂದು ಬರೆಯಲಿ. ಯಾವುದೇ ಕಾರ್ಯಕ್ರಮ ಮಾಡುವುದಾದರೂ ಒಂದು ವೈಜ್ಞಾನಿಕ ಅಂಕಿ ಅಂಶ ಬೇಕು. ಯಾವ ಸಮುದಾಯದ ಜನರ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬೇಕಾಗಿದೆ. ಆಧುನಿಕ ಯುಗದಲ್ಲಿ ಇದ್ದು ನಾವು ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕು. ಅದು ಬಿಟ್ಟು ಮುಖ್ಯಮಂತ್ರಿಯವರ ಮೇಲೆ ಸುಮ್ಮನೆ ಗೂಬೆ ಕೂರಿಸಬಾರದು. ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ. ಎಲ್ಲದರಲ್ಲೂ ಸುಮ್ಮನೆ ಗೊಂದಲ ಸೃಷ್ಟಿಸುತ್ತಾರೆ. ಯಾವುದನ್ನು ಸರಿಯಾಗಿ ನಡೆಯಲು ಬಿಡುವುದಿಲ್ಲ. ವಿರೋಧ ವ್ಯಕ್ತಪಡಿಸುವುದಿದ್ದರೆ ಪಡಿಸಲಿ. ಆದರೆ ಸುಮ್ಮನೆ ಕಥೆ ಕಟ್ಟಿ ಗೊಂದಲ ಸೃಷ್ಟಿಸಬಾರದು ಎಂದರು.
ಮಾಹಿತಿ ಕೊರತೆ ಇರಬಹುದು:ವಿಜಯೇಂದ್ರ ಅವರಿಗೆ ಎಷ್ಟು ಜ್ಞಾನ ಇದೆಯೋ ಗೊತ್ತಿಲ್ಲ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಿದ್ದಾರೆ. ಸರಿಯಾಗಿ ತಿಳಿದುಕೊಳ್ಳಲಿ. ಅವರಿಗೆ ಮಾಹಿತಿ ಕೊರತೆ ಇರಬಹುದು. ಹಿಂದೆ ಕಾಂತರಾಜ ಸರ್ವೇ ವರದಿಯನ್ನು ಇವರ ಸರ್ಕಾರವೇ ಒಪ್ಪಿಕೊಳ್ಳಲಿಲ್ಲವೆ? ಅದನ್ನು ಒಪ್ಪಿಕೊಂಡು ಜಯಪ್ರಕಾಶ್ ಹೆಗ್ಡೆ ಅವರನ್ನು ನೇಮಿಸಲಿಲ್ಲವೆ? ವರದಿ ಆಧಾರದಲ್ಲಿ ಜಯಪ್ರಕಾಶ್ ಹೆಗ್ಡೆ ವರದಿ ಕೊಟ್ಟರು. ಅದರ ಮೇಲೆ ಬಿಜೆಪಿಯವರು ಆ್ಯಕ್ಟ್ ಮಾಡಿದರು. ಅಂದ ಮೇಲೆ ಕಾಂತರಾಜ ವರದಿಯನ್ನು ಬಿಜೆಪಿಯವರು ಒಪ್ಪಿಕೊಂಡಂತೆ ಆಯ್ತಲ್ಲ. ಅದು ಕೂಡ ಇದೇ ಸರ್ವೇ ಅಲ್ಲವೆ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯನವರು ಮತಾಂತರದ ರಾಯಭಾರಿ ಎಂದು ಆರ್ ಅಶೋಕ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆರ್ ಅಶೋಕ್ ಅವರು ಅನಾವಶ್ಯಕವಾಗಿ ಸಿದ್ದರಾಮಯ್ಯನವರ ಮೇಲೆ ಆರೋಪ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಅನೇಕ ಜಾತಿಗಳಿವೆ. ಜಾತಿಗಳು ಇದ್ದ ಕೂಡಲೇ ಧರ್ಮ ಒಡೆಯುತ್ತದೆಯೇ? ಜಾತಿ ಉಪಜಾತಿಗಳನ್ನು ನಾವು ಸೃಷ್ಟಿ ಮಾಡಿದ್ದೇವಾ? ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯಿತ ಕ್ರಿಶ್ಚಿಯನ್ ಒಕ್ಕಲಿಗ ಕ್ರಿಶ್ಚಿಯನ್ ಅದು ಜನರೇ ಹೇಳಿಕೊಂಡಿದ್ದಾರೆ ನಾವು ಸೃಷ್ಟಿ ಮಾಡಿದ್ದಲ್ಲ. ಹಿಂದಿನ ಸರ್ವೆ ಆದಾಗ ಜನರೇ ಹೇಳಿಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಈ ರೀತಿಯ ಕ್ರಿಶ್ಚಿಯನ್ ಒಂದು ಲಕ್ಷ ಜನ ಇರಬಹುದಷ್ಟೇ. ಸಿದ್ದರಾಮಯ್ಯನವರಿಗೂ ಇದಕ್ಕೂ ಏನೂ ಸಂಬಂಧವೇ ಇಲ್ಲ. ಈ ವರದಿಯನ್ನು ಅಶೋಕ್ ಅವರೇ ಮಂತ್ರಿಯಾಗಿದ್ದಾಗ ಒಪ್ಪಿಕೊಂಡಿದ್ದಾರೆ. ಅವಾಗ ಯಾಕೆ ವಿರೋಧ ಮಾಡಲಿಲ್ಲ. ಅವಾಗ ಯಾಕೆ ಇದನ್ನೆಲ್ಲ ಸೇರಿಸಬಾರದು ಎಂದು ಹೇಳಲಿಲ್ಲ.ಸಮಾಜದಲ್ಲಿ ಗೊಂದಲ ಇರಬೇಕು ಮತ್ತು ಸಿದ್ದರಾಮಯ್ಯನವರು ಹಿಂದೂ ವಿರೋಧಿ ಅಂತ ತೋರಿಸಬೇಕು ಅಷ್ಟೇ. ಹಿಂದೂ ವಿರೋಧಿ ಅಂತ ಬಿಂಬಿಸುವುದೇ ಒಂದಂಶದ ಕಾರ್ಯಕ್ರಮ ಅವರದು. ಸರ್ವೇಯನ್ನು ಒಮ್ಮೆ ಹೋಗಿ ನೋಡಿ ಏನೇನು ಪ್ರಶ್ನೆ ಕೇಳಿದ್ದಾರೆ. ಅವರ ಶಿಕ್ಷಣ ಏನು ಉದ್ಯೋಗ ಏನು ಆರ್ಥಿಕ ಸ್ಥಿತಿಗತಿ ಏನು ?
ಇದನ್ನು ತಿಳಿದುಕೊಳ್ಳುದಕ್ಕೆ ಮಾಡಲಾಗಿದೆ. ಇವರು ವಿರೋಧ ಮಾಡಿದ ಕೂಡಲೇ ಸರ್ವೆ ನಿಲ್ಲಲ್ಲ. ಹದಿನೈದು ದಿನದಲ್ಲಿ ಸರ್ವೆ ಮುಗಿಸಿ ವರದಿ ಬರುತ್ತದೆ ಎಂದು ಹೇಳಿದರು.ನಿಷ್ಪಕ್ಷಪಾತವಾದ ತನಿಖೆ:
ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆ ಮುಂದುವರಿದಿರುವ ಬಗ್ಗೆ ಮಾತನಾಡಿದ ಅವರು, ಎಸ್ಐಟಿಯವರು ಅವರ ಕೆಲಸ ಅವರು ಮಾಡುತ್ತಿದ್ದಾರೆ. ರಾಜಕೀಯ ಲಾಭ ಪಡೆದುಕೊಳ್ಳುವುದಕ್ಕೆ ನಾವು ಹೋಗಿಲ್ಲ. ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಎಸ್ಐಟಿ ಯವರು ಸ್ಪಷ್ಟವಾದ ನಿಷ್ಪಕ್ಷಪಾತವಾದ ತನಿಖೆಯನ್ನು ಮಾಡುತ್ತಿದ್ದಾರೆ.ಎಸ್ಐಟಿಯಲ್ಲಿ ಯಾವುದೇ ಗೊಂದಲವಿಲ್ಲ. ಈಗ ಎಲ್ಲರೂ ಸುಮ್ಮನಾಗಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರ ಮೇಲೆ ಎಸ್ಐಟಿ ಕ್ರಮ ತೆಗೆದುಕೊಳ್ಳುತ್ತದೆ. ಅಲ್ಲಿ ಯಾವುದಾದರೂ ಗೊಂದಲಗಳಿದ್ದರೆ ಎಲ್ಲವನ್ನು ತನಿಖೆ ಮಾಡುತ್ತಿದ್ದಾರೆ. ಇನ್ನೊಂದು ಕಡೆಯಿಂದ ಮಾಹಿತಿ ಬಂದರೆ ಅದನ್ನು ಕೂಡ ತನಿಖೆ ಮಾಡುತ್ತಿದ್ದಾರೆ. ಎಸ್ಐಟಿಯ ಪೂರ್ಣ ವರದಿ ಹೊರ ಬರಲಿ. ನಾವು ಸುಮ್ಮನೆ ಏನೇನೋ ಮಾತನಾಡುವುದು ಬೇಡ ಎಂದರು.