ಸಾರಾಂಶ
ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ 44ನೇ ಭಾರತೀಯ ಜನತಾ ಪಾರ್ಟಿ ಸಂಸ್ಥಾಪನಾ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಭಾರತೀಯ ಜನತಾ ಪಕ್ಷ ಹಿರಿಯರ ಮಾರ್ಗದರ್ಶನದಲ್ಲಿ ಅನೇಕ ತ್ಯಾಗಮಯಿಗಳಿಂದ, ತತ್ತ್ವ ಸಿದ್ಧಾಂತದ ಮೇಲೆ ಕಟ್ಟಿದ ರಾಜಕೀಯ ಪಕ್ಷವಾಗಿ ದೇಶದಲ್ಲಿ ಬೆಳೆದಿದೆ ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಪುಷ್ಪರಾಜ್ ಹೇಳಿದರು.
ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಶನಿವಾರ ನಡೆದ 44ನೇ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಪಂಡಿತ್ ಜವಾಹರಲಾಲ್ ನೆಹರುರವರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಗಳಾಗಿದ್ದ ಡಾ. ಶ್ಯಾಮಪ್ರಸಾದ ಮುಖರ್ಜಿ ಕಾಶ್ಮೀರದ ವಿಷಯದ ಬಗ್ಗೆ ನೆಹರುರವರ ಅಭಿಪ್ರಾಯ ಭೇದ ಬಂದಾಗ ಮುಖರ್ಜಿಯವರು ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿ, 1951ರಲ್ಲಿ ದೆಹಲಿಯಲ್ಲಿ ದೇಶ ಭಕ್ತರನ್ನು ಒಳಗೊಂಡ ಹೊಸ ರಾಜಕೀಯ ಪಕ್ಷ ಭಾರತೀಯ ಜನ ಸಂಘವನ್ನು ಪ್ರಾರಂಭಿಸಿದರು ಎಂದರು.ಭಾರತೀಯ ಜನಸಂಘ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದು ಲಕ್ಷಾಂತರ ಕಾರ್ಯಕರ್ತರು ಪಕ್ಷಕ್ಕಾಗಿ ತಮ್ಮ ಸೇವೆ ಮುಡಿಪಾಗಿಟ್ಟಿದ್ದಾರೆ. ಭದ್ರವಾದ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಡಾ. ಶ್ಯಾಮಪ್ರಸಾದ ಮುಖರ್ಜಿ ಹಾಗೂ ದೀನದಯಾಳ ಉಪಾಧ್ಯಯರ ತತ್ತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವದ್ಧಿಯಲ್ಲಿ ಒಗ್ಗೂಡಿ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಲಕ್ಷಾಂತರ ಕಾರ್ಯಕರ್ತರ ಆಶಯವನ್ನು ಇಂದು ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿರುವುದೇ ಸಾಕ್ಷಿ, ಈ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಳ್ಳಲು ಪ್ರತಿಯೊಬ್ಬರಿಗೂ ಹೆಮ್ಮೆ ಅನಿಸಬೇಕಿದೆ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ಶೆಟ್ಟಿ ಮಾತನಾಡಿ, ಪಕ್ಷಕಿಂತ ದೇಶದ ಅಭಿವೃದ್ಧಿಯೇ ಮೊದಲು ಎಂಬ ಮೂಲ ಸಿದ್ಧಾಂತಕ್ಕೆ ಕಾರ್ಯಕರ್ತರು ಬದ್ಧವಾಗಿ ಶ್ರಮಸುತ್ತಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಪಕ್ಷವನ್ನು ಕಟ್ಟಿದ ಹಿರಿಯ ನಾಯಕರನ್ನು ಸ್ಮರಿಸುತ್ತಾ ಪಕ್ಷವನ್ನು ಮತ್ತಷ್ಟು ಸಂಘಟಿಸೋಣ ಎಂದು ಹೇಳಿದರು.
ದೇಶಪ್ರೇಮದ ಕಿಚ್ಚನ್ನು ಜನರಲ್ಲಿ ಮೂಡಿಸುವ ಸಲುವಾಗಿ ನಮ್ಮ ಹಿರಿಯರು ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸಿದ್ದು ಇದೀಗ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಬೆಳೆದಿದೆ. ಪಕ್ಷ ಈ ಮಟ್ಟಕ್ಕೆ ಬೆಳೆಯಲು ಲಕ್ಷಾಂತರ ಕಾರ್ಯಕರ್ತರ ಪರಿಶ್ರಮವಿದೆ ಎಂದು ಬಣ್ಣಿಸಿದರು.ಬಿಜೆಪಿ ಚಿತ್ರದುರ್ಗ ಪ್ರಭಾರಿ ಸಿ.ಆರ್.ಪ್ರೇಮ್ಕುಮಾರ್ ಮಾತನಾಡಿ, ಕೆಲವು ಪಕ್ಷಗಳಿಂದ ದೇಶ ಅಧೋಗತಿಗೆ ತಲುಪುವ ಸ್ಥಿತಿಯಲ್ಲಿದ್ದಾಗ ಶ್ಯಾಮ್ ಪ್ರಸಾದ್ ಮುಖರ್ಜಿ, ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಷಿ, ಲಾಲ್ ಕೃಷ್ಣ ಅಡ್ವಾಣಿ ನಾಯಕರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಕಾಲಕ್ರಮೇಣ ದೇಶವನ್ನು ಪ್ರಧಾನಿ ಮೋದಿ ಉತ್ತಮ ಹಾದಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ರಾಜಪ್ಪ, ಎಸ್.ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಬಿಜೆಪಿ ಹಿರಿಯ ಮುಖಂಡರಾದ ಕೋಟೆ ರಂಗನಾಥ್, ಸಿ.ಎಚ್.ಲೋಕೇಶ್, ಚಂದ್ರಪ್ಪ, ಜಿಲ್ಲಾ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತ್ ಅನಿಲ್ಕುಮಾರ್, ಜಿಲ್ಲಾ ಪದಾಧಿಕಾರಿಗಳು, ನಗರ ಮಂಡಲ ಪಧಾಧಿಕಾರಿಗಳು, ಮಹಿಳಾ ಮೋರ್ಚಾ ಪಧಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ಜವಾಬ್ದಾರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು. 6 ಕೆಸಿಕೆಎಂ 1ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಶನಿವಾರ 44ನೇ ಭಾರತೀಯ ಜನತಾ ಪಾರ್ಟಿ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ನಡೆಯಿತು. ದೇವರಾಜ್ ಶೆಟ್ಟಿ, ಪುಷ್ಪರಾಜ್, ಪ್ರೇಮ್ಕುಮಾರ್, ಕೋಟೆ ರಂಗನಾಥ್ ಇದ್ದರು.