ಭಟ್ಕಳದಲ್ಲಿ ಕಾಂಗ್ರೆಸ್ಸಿನಿಂದ ಎಸ್‌ಐಆರ್ ಕುರಿತು ಕಾರ್ಯಕರ್ತರಿಗೆ ಮಾಹಿತಿಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ಸಂಜೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮಾಹಿತಿ ಶಿಬಿರವನ್ನು ಮಾಜಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಬಿಜೆಪಿಯವರು ದೇಶದಲ್ಲಿ ಎಸ್‌ಐಆರ್ ಬಳಿಸಿಕೊಂಡು ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಜನತೆಗೆ ಎಸ್‌ಐಆರ್ ಬಗ್ಗೆ ಸಮರ್ಪಕ ಮಾಹಿತಿ ನೀಡಿ ಸಹಾಯಕ ಮಾಡುತ್ತಿದೆ. ಬಿಜೆಪಿಯವರು ಎಲ್ಲಾ ಕಡೆ ಎಸ್‌ಐಆರ್‌ನ್ನು ಅಸ್ತ್ರವಾಗಿಸಿಕೊಂಡಿದ್ದಾರೆ.

ಮತಪಟ್ಟಿ ಪರಿಷ್ಕರಣೆ ವೇಳೆ ಪ್ರತಿಯೊಬ್ಬರ ಹೆಸರು ಅಳಿಸಿಹೋಗುತ್ತದೆ. ಎಲ್ಲರೂ ಪುನಃ ದಾಖಲೆ ನೀಡಿ ಮತದಾರ ಪಟ್ಟಿಗೆ ಹೆಸರನ್ನು ಸೇರಿಸಿಕೊಳ್ಳಬೇಕಾಗುತ್ತದೆ ಎಂದ ಅವರು, ರಾಜ್ಯ ಸರ್ಕಾರ ಮುಂಬರುವ ದಿನಗಳಲ್ಲಿ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲು ಆಧಾರ್‌ ಕಾರ್ಡ್‌ ಬದಲಾಗಿ ಚುನಾವಣೆ ಗುರುತಿನ ಕಡ್ಡಾಯ ಮಾಡಲಿದೆ. ಎಲ್ಲರೂ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಕೊಳ್ಳಲು ಪಕ್ಷದ ಬಿಎಲ್‌ ಒಗಳು ಅಧಿಕಾರಿಗಳಿಗೆ ಸಹಾಯ ಸಹಕಾರ ಮಾಡಬೇಕು ಎಂದರು.

ಮುಂಬರುವ ಡಿಸೆಂಬರ್‌ ಒಳಗೆ ಗ್ರಾಪಂ ಹಾಗೂ ಮೇ ಒಳಗೆ ಜಿಲ್ಲಾ, ತಾಪಂ ಚುನಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಸಹಾಯ ಮಾಡಿದಲ್ಲಿ ಜನರು ಚುನಾವಣೆ ಸಮಯದಲ್ಲಿ ನಿಮಗೆ ಸಹಾಯ ಮಾಡಲಿದ್ದಾರೆ ಎಂದರು.


ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕೇಂದ್ರ ಸರ್ಕಾರ ಕೇಂದ್ರ ಚುನಾವಣಾ ಆಯೋಗವನ್ನು ಬಳಸಿಕೊಂಡು ಮುಗ್ದ ಮತದಾರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಕೆಲಸ ಮಾಡುತ್ತಿದೆ. ಕರ್ನಾಟಕ ಗೆಲ್ಲುವ ಭಾವನೆಯಿಂದ ಕೇಂದ್ರ ಸರ್ಕಾರ ಈ ರೀತಿ ಕೆಲಸ ಮಾಡುತ್ತಿದ್ದು, ಪಕ್ಷದ ಕಾರ್ಯಕರ್ತರು ಜಾಗೃತರಾಗಿ ನಿಮ್ಮ ಊರಿನ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಡಿಲೀಟ್‌ ಆಗದಂತೆ ನೋಡಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್‌ ಘಟಕ ಅಧ್ಯಕ್ಷ ಸಾಯಿ ಗಾಂವಕರ್‌ ಮಾತನಾಡಿದರು. ಎಸ್‌ಐಆರ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಪ್ರಸನ್ನ ಶೆಟ್ಟಿ ಎಸ್‌ಐಆರ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಮಾಜಿ ಅಧ್ಯಕ್ಷ ಸತೀಶ ನಾಯ್ಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೆಂಕಟೇಶ ನಾಯ್ಕ,ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ರಾಜು ನಾಯ್ಕ, ರಾಮ ಮೊಗೇರ, ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ನಯನಾ ನಾಯ್ಕ ಮುಂತಾದವರಿದ್ದರು.