ಸಂಘಟನಾ ಸೃಜನ್ ಅಭಿಯಾನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಮುಖಂಡರು, ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಣೆ ಸಭೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಮಹಾತ್ಮಾ ಗಾಂಧಿಯನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ವಿಚಾರಧಾರೆಗಳನ್ನು ಇಟ್ಟುಕೊಂಡು ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಎಂದು ಎಐಸಿಸಿ ಚಿಕ್ಕಮಗಳೂರು ವೀಕ್ಷಕ ಬಿಶ್ವರಂಜನ್ ಮೊಹಾಂತ್ರಿ ಆರೋಪಿಸಿದರು.

ಸಂಘಟನಾ ಸೃಜನ್ ಅಭಿಯಾನದ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಮುಖಂಡರು, ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಮಾತನಾಡಿ ದೇಶದಲ್ಲಿ ಸದ್ಯ ಎರಡು ವಿಚಾರಗಳ ನಡುವೆ ಸಂಘರ್ಷ ನಡೆಯುತ್ತಿದೆ. ಮಹಾತ್ಮ ಗಾಂಧಿ, ನೆಹರು, ಮೌಲಾನ ಅಜಾದ್‌, ಡಾ.ಬಿ.ಆರ್‌.ಅಂಬೇಡ್ಕರ್‌, ಸರ್ದಾರ್‌ ವಲ್ಲಬಾಯಿ ಪಟೇಲ್‌ ಅವರ ವಿಚಾರಧಾರೆ ಇಟ್ಟುಕೊಂಡು ಕಾಂಗ್ರೆಸ್ ರಾಷ್ಟ್ರ ನಿರ್ಮಾಣದ ಕಾರ್ಯ ಮಾಡುತ್ತಿದ್ದರೆ, ಮತ್ತೊಂದೆಡೆ, ಮಹಾತ್ಮ ಗಾಂಧಿಜೀ ಅವರ ಹತ್ಯೆ ಮಾಡಿ ನಾಥುರಾಮ್ ಗೋಡ್ಸೆ ವಿಚಾರಧಾರೆಗಳನ್ನು ಆದರ್ಶವಾಗಿಟ್ಟುಕೊಳ್ಳಲಾಗಿದೆ ಎನ್ನುವ ಮೂಲಕ ಪರೋಕ್ಷವಾಗಿ ಬಿಜೆಪಿ ಧೋರಣೆಯನ್ನು ಖಂಡಿಸಿದರು.

ಈ ಹಿಂದೂಸ್ತಾನ ಎಲ್ಲರದ್ದು, ಎಲ್ಲರಿಗೂ ಸಮಾನ ಅಧಿಕಾರವಿದೆ. ಎಲ್ಲ ಜಾತಿ ಧರ್ಮದವರೂ ಸಹ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಸಂವಿಧಾನ ಎಲ್ಲರಿಗೂ ಸಮಾನ ಅಧಿಕಾರ ನೀಡಿದೆ ಎಂದರು.


ಪಕ್ಷದ ಬೇರು ಮಟ್ಟದಿಂದ ಬಲಪಡಿಸಬೇಕೆಂಬ ಉದ್ದೇಶದಿಂದ ಸಂಘಟನಾ ಸೃಜನ್‌ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜತೆಗೆ, ಪಕ್ಷದ ಜಿಲ್ಲಾ ಧ್ಯಕ್ಷರು, ಪದಾಧಿಕಾರಿಗಳ ನೇಮಕ ಸೇರಿದಂತೆ ಎಲ್ಲವೂ ಪಾರದರ್ಶಕ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಡಿ ನಡೆಯಬೇಕೆಂದು ರಾಹುಲ್‌ ಗಾಂಧಿ ತೀರ್ಮಾನಿಸಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವ ಅಭಿಪ್ರಾಯ ಸಂಗ್ರಹಿಸಬೇಕೆಂಬ ನಿಯಮವಿಲ್ಲ. ಆದರೆ, ಸಮರ್ಥ ಯುವ ನಾಯಕರಿಗೆ ಅವಕಾಶ ನೀಡ ಬೇಕೆಂಬ ಕಾರಣಕ್ಕೆ ಪ್ರತಿ ಬ್ಲಾಕ್‌ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಬೇಕೆಂದು ಅಭಿಯಾನ ಮಾಡಲಾಗುತ್ತಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್‌ ಮಾತನಾಡಿ, ಪಾರದರ್ಶಕ ಮತ್ತು ಸಾಮಾಜಿಕ ನ್ಯಾಯದಡಿ ಜಿಲ್ಲಾಧ್ಯಕ್ಷರ ನೇಮಕ ಮಾಡಬೇಕೆಂಬ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮುಖಂಡರು ತಮಗೆ ಬೇಕಾದವರನ್ನು ಅಧ್ಯಕ್ಷರಾಗಿ ನೇಮಕ ಮಾಡಿ ಕೊಳ್ಳುತ್ತಿದ್ದರು. ಇದನ್ನು ತಪ್ಪಿಸಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಬೇಕೆಂದು ಸಂಘಟನ್‌ ಸೃಜನ್‌ ಅಭಿಯಾನಕ್ಕೆ ಎಐಸಿಸಿಯಿಂದ ವೀಕ್ಷಕರನ್ನು ನೇಮಿಸಲಾಗಿದೆ ಎಂದರು.

ಎನುಮರೇಶನ್‌ ಫಾರಂ ವಾಪಾಸ್‌ ಕೊಟ್ಟ ತಕ್ಷಣ ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಕರಡು ಮತದಾರ ಪಟ್ಟಿ ಬಿಡುಗಡೆಯಾಗಿ ಅದರಲ್ಲಿ ಯಾವುದೇ ಒಬ್ಬ ಮತದಾರರನ್ನು ಮತದಾರ ಪಟ್ಟಿಯಿಂದ ಹೊರಗೆ ಉಳಿದಂತೆ ನೋಡಿಕೊಳ್ಳುವವರೆಗೆ ಇದೆ. ಎಸ್‌ಐಆರ್‌ ಅತ್ಯಂತ ಸೂಕ್ಷ್ಮ ವಿಚಾರವಾಗಿದೆ ಎಂದು ತಿಳಿಸಿದರು.

ಈ ವೇಳೆ ವಿಧಾನಪರಿಷತ್‌ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಹಾಸನ ಜಿಲ್ಲೆಯ ಕಾಂಗ್ರೆಸ್‌ ಉಸ್ತುವಾರಿ ಡಾ,ವಿಜಯ್‌ ಕುಮಾರ್‌, ಕಾಂಗ್ರೆಸ್‌ ವಕ್ತಾರ ದೇವರಾಜ್‌, ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಕಾಂಗ್ರೆಸ್ ಮುಖಂಡ ರೂಬೆನ್‌ಮೊಸಸ್, ಶಿವಾನಂದಸ್ವಾಮಿ, ರವೀಶ್‌ ಕ್ಯಾತನಬೀಡು ಸೇರಿದಂತೆ ಮೊದಲಾದವರಿದ್ದರು.-- ಬಾಕ್ಸ್‌--

ಹಲವರಿಂದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ

ಸಿಡಿಎ ಅಧ್ಯಕ್ಷ ಹಾಗೂ ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಂಜೇಗೌಡ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ, ಕೆಪಿಸಿಸಿ ವಕ್ತಾರ ರವೀಶ್‌ ಕ್ಯಾತನಬೀಡು, ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ ಸೇರಿದಂತೆ ಹಲವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.---ಬಾಕ್ಸ್‌---

ಪ್ರತ್ಯೇಕವಾಗಿ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ

ಎಐಸಿಸಿ ಚಿಕ್ಕಮಗಳೂರು ವೀಕ್ಷಕ ಬಿಶ್ವರಂಜನ್ ಮೊಹಾಂತ್ರಿ ಅವರು ಚಿಕ್ಕಮಗಳೂರು ಬ್ಲಾಕ್‌ ಕಾಂಗ್ರೆಸ್‌ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯ ಕರ್ತರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ನಡೆಸಿದರು. ಶುಕ್ರವಾರ ವಕೀಲರು, ಪಕ್ಷದ ವಿವಿಧ ಪದಾಧಿಕಾರಿಗಳಿಂದ ಪ್ರತ್ಯೇಕವಾಗಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಪಕ್ಷದ ವಕ್ತಾರರು ಮಾಹಿತಿ ನೀಡಿದ್ದಾರೆ.

---ಕೋಟ್‌---

ಪಕ್ಷ ಉಳಿಯಬೇಕಾದ ಪಕ್ಷದ ಮತದಾರರು ಎಸ್‌ಐಆರ್‌ನಿಂದ ಹೊರ ಉಳಿದಂತೆ ಪಕ್ಷದ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ಎಸ್‌ಐಆರ್‌ ಎನುಮರೇಶನ್‌ ಫಾರಂ ವಾಪಾಸ್ ನೀಡುವುದಕ್ಕೆ ಇನ್ನೂ 7 ದಿನ ಸಮಯ ಇದೆ ಅಷ್ಟರಲ್ಲಿ ಫಾರಂ ವಾಪಾಸ್‌ ನೀಡುವ ಕೆಲಸ ಆಗಬೇಕು.

- ಎಚ್‌.ಡಿ.ತಮ್ಮಯ್ಯ, ಶಾಸಕರು, ಚಿಕ್ಕಮಗಳೂರು (ತಮ್ಮಯ್ಯ ಫೋಟೊ ನಾಳೆ ಡೇಟ್‌ನಲ್ಲಿ ಸೇವ್‌ ಆಗಿದೆ)