ದೇವನಹಳ್ಳಿ: ಪಂಚರಾಜ್ಯ ಚುನಾವಣೆಗಳ ಫಲಿತಾಂಶದಲ್ಲಿ ೩ ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ ಸಾಧಿಸಿದೆ. ಅದೇ ರೀತಿ ೨೦೨೮ಕ್ಕೆ ಕರ್ನಾಟಕದಲ್ಲೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಶತಸಿದ್ದ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಲ್.ಎನ್.ಅಂಬರೀಶ್‌ಗೌಡ ತಿಳಿಸಿದರು.

ಪಟ್ಟಣದ ಬೈಪಾಸ್‌ನಲ್ಲಿ ೩ ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ ಸಾಧಿಸಿದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಾಚರಿಸಿದ ವೇಳೆ ಮಾತನಾಡಿದ ಅವರು, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ೨೦೨೮ಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಲಿದ್ದೇವೆ. ಮುಖಂಡರೆಲ್ಲಾ ಒಗ್ಗೂಡಿ ಪಕ್ಷವನ್ನು ಬಲವಾಗಿ ಕಟ್ಟುತ್ತಿದ್ದೇವೆ. ಪಂಚ ರಾಜ್ಯಗಳ ಫಲಿತಾಂಶದ ಬಳಿಕ ಕಾರ್ಯಕರ್ತರಲ್ಲಿ ಮತ್ತಷ್ಟು ಉಮ್ಮಸ್ಸು ಬಂದಿದೆ. ರಾಜ್ಯದೆಲ್ಲೆಡೆ ನಡೆದ ಪ್ರಶಿಕ್ಷಣ ವರ್ಗದಲ್ಲಿ ದೇವನಹಳ್ಳಿ ರಾಜ್ಯದಲ್ಲಿ ೨ನೇ ಸ್ಥಾನದಲ್ಲಿದೆ. ಸದಸ್ಯರು ಮುಂಬರುವ ಪಂಚಾಯತಿ ಹಾಗೂ ಪುರಸಭೆ ಚುನಾವಣೆಗಳಿಗೆ ಸಜ್ಜಾಗಬೇಕು. ಮುಂದಿನ ವಾರದಿಂದ ತಾಲೂಕಿನ ೨೯೬ ಬೂತ್‌ಗಳಿದ್ದು ಪ್ರತಿ ಬೂತ್‌ಗು ಭೇಟಿ ನೀಡಿ ಸಂಘಟನೆ ಮಾಡಿ ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರನ್ನು ಸಜ್ಜು ಮಾಡಲಾಗುವುದು. ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಿಳಿಸಬೇಕು ಎಂದರು.

ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗವೇಣಿ, ಬಯಪ ಮಾಜಿ ಅಧ್ಯಕ್ಷ ಅಶ್ವಥ್‌ನಾರಾಯಣ್, ಮುಖಂಡರಾದ ದೇಸುನಾಗರಾಜ್, ಬುಳ್ಳಳ್ಳಿ ರಾಜಪ್ಪ, ಬಿ.ಕೆ.ನಾರಾಯಣಸ್ವಾಮಿ, ಪ್ರಭು, ತಮ್ಮಯ್ಯ, ಅನಿಲ್, ಕದಿರಪ್ಪ, ಅಮರ್‌ನಾರಾಯಣ್, ವೆಂಕಟೇಶ್, ತಾಯಮ್ಮ, ಪ್ರೇಮ, ಪ್ರಭಾಕರ್ ಸೇರಿದಂತೆ ಅನೇಕ ಮುಖಂಡರು ಸೇರಿದಂತೆ ಮಹಿಳಾ ಕಾರ್ಯಕರ್ತರು ಇದ್ದರು.

೦೬ದೇವನಹಳ್ಳಿ ಚಿತ್ರಸುದ್ದಿ: ೦೨

ಪಂಚರಾಜ್ಯಗಳ ಚುನಾವಣೆಯಲ್ಲಿ ೩ ರಾಜ್ಯಗಳಲ್ಲಿ ಬಿಜೆಪಿ ಜಯಬೇರಿ ಸಾಧಿಸಿದ ಹಿನ್ನೆಲೆಯಲ್ಲಿ ದೇವನಹಳ್ಳಿ ಬೈಪಾಸ್‌ನಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.