ಬಿಜೆಪಿಯಿಂದ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸಲು ಯತ್ನ: ಪದ್ಮರಾಜ್‌

| Published : Jun 12 2025, 06:11 AM IST / Updated: Jun 12 2025, 06:12 AM IST

ಸಾರಾಂಶ

ಬಿಜೆಪಿ ನಾಯಕರ ನಿಯೋಗ ಇಲ್ಲಿ ಶಾಂತಿ ನೆಲೆಸುವಂತೆ ಧನಾತ್ಮಕ ಸಂದೇಶ ನೀಡುವುದು ಬಿಟ್ಟು ಶಾಂತಿ ನೆಲೆಸುವಲ್ಲಿ ಶ್ರಮಿಸುತ್ತಿರುವ ಪೊಲೀಸರ ಆತ್ಮಸ್ಥೈರ್ಯವನ್ನೇ ಕುಗ್ಗಿಸುವ, ಬೆದರಿಕೆಯೊಡ್ಡಿ ಪ್ರಚೋದನೆ ನೀಡುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ.ಕ್ಕೆ ಇತ್ತೀಚೆಗೆ ಆಗಮಿಸಿದ ಬಿಜೆಪಿ ನಾಯಕರ ನಿಯೋಗ ಇಲ್ಲಿ ಶಾಂತಿ ನೆಲೆಸುವಂತೆ ಧನಾತ್ಮಕ ಸಂದೇಶ ನೀಡುವುದು ಬಿಟ್ಟು ಶಾಂತಿ ನೆಲೆಸುವಲ್ಲಿ ಶ್ರಮಿಸುತ್ತಿರುವ ಪೊಲೀಸರ ಆತ್ಮಸ್ಥೈರ್ಯವನ್ನೇ ಕುಗ್ಗಿಸುವ, ಬೆದರಿಕೆಯೊಡ್ಡಿ ಪ್ರಚೋದನೆ ನೀಡುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್‌ ಆರ್‌. ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವನ್ನು ಯಾವ ರೀತಿ ಸರಿಪಡಿಸಬಹುದು ಎಂಬ ಉದ್ದೇಶದಿಂದ ಕಾಂಗ್ರೆಸ್‌ ನಿಯೋಗ ಜಿಲ್ಲೆಗೆ ಆಗಮಿಸಿ ಅಧ್ಯಯನ ನಡೆಸಿದ್ದರೆ, ಬಿಜೆಪಿ ನಿಯೋಗದ ಮುಖಂಡರು ಇದಕ್ಕೆ ತದ್ವಿರುದ್ಧವಾಗಿ ಪೊಲೀಸರಿಗೇ ಬೆದರಿಕೆಯೊಡ್ಡುವ ಮಾತುಗಳನ್ನಾಡಿದ್ದಾರೆ. ಇದೇ ಎರಡೂ ಪಕ್ಷಗಳ ನಡುವೆ ಇರುವ ವ್ಯತ್ಯಾಸ. ಅತ್ಯುತ್ತಮ ಪೊಲೀಸ್‌ ಅಧಿಕಾರಿಗಳು ಜಿಲ್ಲೆಗೆ ಬಂದಿದ್ದು ಶಾಂತಿ ಸ್ಥಾಪನೆಯ ಕೆಲಸದಲ್ಲಿ ತೊಡಗಿರುವಾಗ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.

ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಿ:

ದ.ಕ. ಸಂಸದರು ಅಧಿಕಾರ ಸ್ವೀಕರಿಸಿ ಒಂದು ವರ್ಷವಾಯ್ತು. ಜೆಬಿಎಫ್‌ ಕಂಪೆನಿಗಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ಟೇರ್‌ ಓವರ್‌ ಮಾಡಿರುವ ಗೇಲ್‌ ಕಂಪೆನಿಯು ಭೂಮಿ ಕಳೆದುಕೊಂಡವರಿಗೆ ಶಾಶ್ವತ ಉದ್ಯೋಗ, ಕುಂಟುತ್ತ ಸಾಗಿರುವ ಮಹಾಕಾಳಿಪಡ್ಪು ರೈಲ್ವೆ ಕೆಳ ಸೇತುವೆ ನಿರ್ಮಾಣ ಕಾಮಗಾರಿಗೆ ವೇಗ ನೀಡುವುದು, ರಜಾ ಅವಧಿಯಲ್ಲಿ ವಿಮಾನ ದರ ಏರಿಕೆಯಾಗದಂತೆ ನೋಡಿಕೊಳ್ಳುವುದು, ಮುಂಬೈ- ಮಂಗಳೂರು ನಡುವೆ ಹೆಚ್ಚುವರಿ ವಿಮಾನ ಸಂಚಾರಕ್ಕೆ ಅವಕಾಶ, ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸಂಸದರು ಆದ್ಯತೆ ನೀಡಲಿ ಎಂದು ಪದ್ಮರಾಜ್‌ ಒತ್ತಾಯಿಸಿದರು.

ಮಾಜಿ ಮೇಯರ್‌ ಶಶಿಧರ್‌ ಹೆಗ್ಡೆ, ಮುಖಂಡರಾದ ನವೀನ್‌ ಡಿಸೋಜ, ಪ್ರಕಾಶ್‌ ಸಾಲ್ಯಾನ್‌, ನೀರಜ್‌ ಪಾಲ್‌, ಕೇಶವ ಮರೋಳಿ, ಲಾರೆನ್ಸ್‌ ಡಿಸೋಜ, ಸುಹಾನ್‌ ಆಳ್ವ, ಶುಭೋದಯ ಆಳ್ವ ಇದ್ದರು.